ಆ್ಯಪ್ನಗರ

ಗುಜರಾತ್‌ ಉಪಮುಖ್ಯಮಂತ್ರಿಯ ಕುಡುಕ ಪುತ್ರನಿಗೆ ವಿಮಾನವೇರಲು ಅಧಿಕಾರಿಗಳ ತಡೆ

ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರ ಪುತ್ರನಿಗೆ ವಿಮಾನ ಹತ್ತಲು ಬಿಡದೆ ಹಿಂದೆ ಕಳುಹಿಸಿದ ಘಟನೆ ಸೋಮವಾರ ನಡೆದಿದೆ...

Agencies 10 May 2017, 7:19 am

ಅಹಮದಾಬಾದ್‌: ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರ ಪುತ್ರನಿಗೆ ವಿಮಾನ ಹತ್ತಲು ಬಿಡದೆ ಹಿಂದೆ ಕಳುಹಿಸಿದ ಘಟನೆ ಸೋಮವಾರ ನಡೆದಿದೆ. ಪಾನ ನಿಷೇಧ ಜಾರಿಯಲ್ಲಿರುವ ರಾಜ್ಯದಲ್ಲಿ ಪ್ರತಿಷ್ಠಿತ ರಾಜಕಾರಣಿ ಪುತ್ರ ಮದ್ಯ ಸೇವಿಸಿ ಪ್ರಯಾಣ ಕೈಗೊಳ್ಳಲು ಮುಂದಾಗಿದ್ದೇ ಈ ನಿರ್ಧಾರಕ್ಕೆ ಕಾರಣವಾಗಿದ್ದು, ಈ ಕುಡುಕಾಟ ಈಗ ಚರ್ಚೆಗೆ ಗ್ರಾಸವಾಗಿದೆ.

ಆಗಿದ್ದೇನು?: ಅಂದಾಜು 35ರ ಆಸುಪಾಸಿನ ಜೈಮನ್‌ ಪಟೇಲ್‌ ಅವರು ತನ್ನ ಪತ್ನಿ ಝಲಕ್‌ ಮತ್ತು ಮಗಳು ವೈಷ್ನವಿ ಜತೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರು ಗ್ರೀಸ್‌ಗೆ ಹೋಗಬೇಕಾಗಿತ್ತು. ವಿಮಾನ ಬೆಳಗ್ಗೆ 4 ಗಂಟೆಗೆ ಹೊರಡಬೇಕಿತ್ತು.

ಲ್ಯಾಂಡ್‌ ಡೀಲರ್‌ ಆಗಿರುವ ಜೈಮನ್‌ ವಿಮಾನ ನಿಲ್ದಾಣಕ್ಕೆ ಬಂದಾಗಲೇ ಕುಡಿದು ತೂರಾಡುತ್ತಿದ್ದರು. ನಿಲ್ಲಲೂ ಆಗದಂತಿದ್ದ ಅವರನ್ನು ವೀಲ್‌ ಚೇರ್‌ನಲ್ಲಿ ಕೂರಿಸಿ ಇಮ್ಮಿಗ್ರೇಷನ್‌ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿಂದ ಮುಂದೆ ಅವರು ವಿಮಾನ ಹತ್ತಲು ತೆರಳಿದರು. ಆಗ ಅಲ್ಲಿ ಅಧಿಕಾರಿಗಳ ಜತೆ ಮಾತಿಗೆ ಮಾತು ಬೆಳೆದು ಜಗಳ ತೆಗೆದರು. ಅಂತಿಮವಾಗಿ ಅಧಿಕಾರಿಗಳು ಅವರನ್ನು ವಿಮಾನ ಹತ್ತಲು ಬಿಡದೆ ಹಿಂದೆ ಕಳುಹಿಸಿದರು.

ಆದರೆ, ನಿತಿನ್‌ ಪಟೇಲ್‌ ಹೇಳೋದೇ ಬೇರೆ. ''ಇದು ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಮಾಡಿರುವ ಸಂಚು. ನನ್ನ ಮಗ, ಮಗಳು ಮತ್ತು ಮೊಮ್ಮಗಳು ರಜೆ ಕಳೆಯಲು ಗ್ರೀಸ್‌ಗೆ ಹೋಗುವವರಿದ್ದರು. ನನ್ನ ಮಗನ ಆರೋಗ್ಯ ಚೆನ್ನಾಗಿರಲಿಲ್ಲ, ಅವನ ಹೆಂಡತಿ ನನಗೆ ಫೋನ್‌ ಮಾಡಿ ತಿಳಿಸಿದಳು. ನಾನು ಅವರನ್ನು ಪ್ರಯಾಣ ಮುಂದುವರಿಸುವುದು ಬೇಡ, ಮನೆಗೆ ಬನ್ನಿ ಎಂದು ಹೇಳಿದೆ. ಆದರೆ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ,'' ಎಂದು ನಿತಿನ್‌ ಪಟೇಲ್‌ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ