ಆ್ಯಪ್ನಗರ

ಮುಂಗಾರು ಬೆಳೆ ಹಂಗಾಮಿಗಾಗಿ ರಸಗೊಬ್ಬರ ಪೂರೈಕೆಗೆ ತಯಾರಿ

ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ದೇಶದ ಯಾವುದೇ ಭಾಗದಲ್ಲಿಯೂ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಂಡಿತು. ಯೂರಿಯಾ ಮತ್ತಿತರ ನಮೂನೆಯ ರಸಗೊಬ್ಬರಗಳ ಮಾರಾಟದಲ್ಲಿ ಶೇಕಡಾ 17ರಿಂದ ಶೇಕಡಾ 42ರಷ್ಟು ಹೆಚ್ಚಳ ಕಂಡುಬಂತು. ಇದರಿಂದ ರೈತರು ಬಂಪರ್ ಬೆಳೆ ಬೆಳೆಯಲು ಸಾಧ್ಯವಾಯಿತು

Vijaya Karnataka Web 10 Apr 2021, 10:05 pm
ಹೊಸದಿಲ್ಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಸೋಮವಾರ ರಸಗೊಬ್ಬರ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
Vijaya Karnataka Web ಡಿವಿ ಸದಾನಂದ ಗೌಡ
ಡಿವಿ ಸದಾನಂದ ಗೌಡ


ಯೂರಿಯಾ ಹೊರತಾದ ವಿವಿಧ ನಮೂನೆಯ ಪೋಷಕಾಂಶ ರಸಗೊಬ್ಬರ ಬೆಲೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು ಕರೆದಿರುವ ಈ ಸಭೆಗೆ ಮಹತ್ವ ಬಂದಿದೆ.

ಸಾರ್ವಜನಿಕ ವಲಯದ ರಸಗೊಬ್ಬರ ಕಂಪನಿಗಳ ಹೊರತಾಗಿ ಸಹಕಾರಿ ವಲಯದ ಇಫ್ಕೋ ಕಂಪನಿಯು ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ಒಪ್ಪಿಕೊಂಡಿದ್ದು ಈಗಾಗಲೇ ತನ್ನ ನಿರ್ಧಾರವನ್ನು ಕಾರ್ಯಗತಗೊಳಿಸಿದೆ ಎಂದು ಹೇಳಿದರು.

ದೇಶದಲ್ಲಿ ಹಳೆ ದಸ್ತಾನು ಸುಮಾರು ಒಂದೂವರೆ ತಿಂಗಳಿಗೆ ಸಾಕಾಗುವಷ್ಟಿದೆ. ಇಫ್ಕೋ ಬಳಿ 11.26 ಲಕ್ಷ ಟನ್ ಎನ್ಪಿಕೆ, ಡಿಏಪಿ ಮತ್ತಿತರ ನಮೂನೆಯ ಪೋಷಕಾಂಶಯುಕ್ತ ರಸಗೊಬ್ಬರಗಳ ಹಳೆ ದಸ್ತಾನು ಇದೆ. ರಾಜ್ಯದಲ್ಲಿಯೇ 1.22 ಲಕ್ಷ ಟನ್ ದಾಸ್ತಾನಿದೆ. ಹಳೆ ದಾಸ್ತಾನು ಮುಗಿಯುವ ತನಕ ಹಳೆ ದರವೇ ಇರಲಿದ್ದು ರೈತರು ಇದರ ಉಪಯೋಗ ಪಡೆಯಬೇಕಿದೆ ಎಂದರು.

ದೇಶದ ವಿವಿಧ ರಾಜ್ಯಗಳ ಬೇಡಿಕೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಆಗುವಂತೆ ಇಲಾಖೆಯು ಮೇಲುಸ್ತುವಾರಿ ವಹಿಸುತ್ತದೆಯಾದರೂ ಇದು ಅನಿಯಂತ್ರಿತ ವಲಯದಲ್ಲಿರುವುದರಿಂದ ಬೆಲೆ ನಿಗದಿ ಪಡಿಸುವಲ್ಲಿ ಸರಕಾರ ನೇರ ಪಾತ್ರವೇನೂ ಇರುವುದಿಲ್ಲ. ಆದಾಗ್ಯೂ ರಸಗೊಬ್ಬರ ಕಂಪನಿಗಳು ಗರಿಷ್ಠ ಮಾರಾಟ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಮನಬಂದಂತೆ ಏರಿಸದಂತೆ ನಿಗಾವಹಿಸುತ್ತದೆ. ಕಂಪನಿಗಳು ಪ್ರಮಾಣಿಕೃತ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ನಿಗದಿತ ಪ್ರಮಾಣದಲ್ಲಿಯಷ್ಟೇ ಲಾಭಾಂಶ ಇಟ್ಟುಕೊಳ್ಳಬಹುದಾಗಿದೆ ಎಂದರು.

ಸರಳವಾಗಿ ಹೇಳಬೇಕೆಂದರೆ ಗರಿಷ್ಠ ಮಾರಾಟ ಬೆಲೆ ಉತ್ಪಾನಾ ವೆಚ್ಚದ ಮೇಲೆ ಅವಲಂಬಿಸಿದೆ. ರೈತರಿಗೆ ಹೊರೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸರಕಾರವು ರಸಗೊಬ್ಬರಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತದೆ. ಇದಕ್ಕಾಗಿ ಪ್ರತಿವರ್ಷ ಸರಾಸರಿ ಏನಿಲ್ಲವೆಂದರೂ 75,000 ಕೋಟಿ ರೂಪಾಯಿ ಒದಗಿಸುತ್ತದೆ. ಉದಾಹರಣೆಗೆ ಪೋಷಕಾಂಶ ಆಧಾರಿತ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ‘ನೈಟ್ರೋಜನ್’ಗೆ ಟನ್ ಒಂದಕ್ಕೆ 18,789 ರೂ ಸಬ್ಸಿಡಿ ಒದಗಿಸಲಾಗುತ್ತಿದೆ. ಅದೇ ರೀತಿ ‘ಫೊಸ್ಫೇಟ್’ಗೆ (ಒಂದು ಟನ್ ಗೆ) 14,888 ರೂ, ‘ಪೊಟಾಷ್’ಗೆ 10,116 ರೂ ಹಾಗೂ ‘ಸಲ್ಫರ್’ಗೆ 2,374 ರೂ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಸದಾನಂದ ಗೌಡ ವಿವರಿಸಿದರು.

ನಮ್ಮ ರಸಗೊಬ್ಬರ ಇಲಾಖೆಯು ಕಳೆದ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ದೇಶದ ಯಾವುದೇ ಭಾಗದಲ್ಲಿಯೂ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಂಡಿತು. ಯೂರಿಯಾ ಮತ್ತಿತರ ನಮೂನೆಯ ರಸಗೊಬ್ಬರಗಳ ಮಾರಾಟದಲ್ಲಿ ಶೇಕಡಾ 17ರಿಂದ ಶೇಕಡಾ 42ರಷ್ಟು ಹೆಚ್ಚಳ ಕಂಡುಬಂತು. ಇದರಿಂದ ರೈತರು ಬಂಪರ್ ಬೆಳೆ ಬೆಳೆಯಲು ಸಾಧ್ಯವಾಯಿತು ಎಂದರು.

ಮುಂಬರುವ ಮುಂಗಾರು ಬೆಳೆ ಹಂಗಾಮಿನಲ್ಲಿಯೂ ರಸಗೊಬ್ಬರ ಸರಬರಾಜಿನಲ್ಲಿ ಸ್ವಲ್ಪವೂ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಕೃಷಿ ಇಲಾಖೆ ಈಗಾಗಲೇ ಮುಂಗಾರು ಹಂಗಾಮಿಗೆ ಎಷ್ಟು ರಸಗೊಬ್ಬರ ಬೇಕು ಎಂಬ ಬಗ್ಗೆ ಬೇಡಿಕೆ ಸಲ್ಲಿಸಿದೆ. ಇದಕ್ಕೆ ಅನುಗುಣವಾಗಿ ಸರಬರಾಜು ಮಾಡಲು ತಯಾರಿ ಆರಂಭಿಸಲಾಗಿದೆ. ಸೋಮವಾರದ ಸಭೆಯಲ್ಲಿಯೂ ಈ ವಿಷಯ ಮತ್ತೊಮ್ಮೆ ಚರ್ಚೆಯಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದಗೌಡ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ