ಆ್ಯಪ್ನಗರ

ಹತ್ಯೆಯಾದ ಬೆಂಬಲಿಗನ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ ಸ್ಮತಿ ಇರಾನಿ

ತಮ್ಮ ಕಟ್ಟಾ ಬೆಂಬಲಿಗನ ಹತ್ಯೆ ಸುದ್ದಿ ತಿಳಿದ ತಕ್ಷಣ ಬರೌಲಿಯಾ ಗ್ರಾಮಕ್ಕೆ ಧಾವಿಸಿದ ಸ್ಮೃತಿ ಇರಾನಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೇ ಬಳಿಕ ಅಂತ್ಯಸಂಸ್ಕಾರದ ವೇಳೆ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು.

TIMESOFINDIA.COM 27 May 2019, 12:06 pm
ಅಮೇಠಿ: ಹತ್ಯೆಯಾದ ತಮ್ಮ ಚುನಾವಣಾ ಪ್ರಚಾರ ವ್ಯವಸ್ಥಾಪಕರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಸಂಸದೆ, ಸ್ಮೃತಿ ಇರಾನಿ ಭರವಸೆ ನೀಡಿದ್ದಾರೆ.
Vijaya Karnataka Web Smriti


ತಮ್ಮ ಕಟ್ಟಾ ಬೆಂಬಲಿಗನ ಹತ್ಯೆ ಸುದ್ದಿ ತಿಳಿದ ತಕ್ಷಣ ಬರೌಲಿಯಾ ಗ್ರಾಮಕ್ಕೆ ಧಾವಿಸಿದ ಸ್ಮೃತಿ ಇರಾನಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೇ ಬಳಿಕ ಅಂತ್ಯಸಂಸ್ಕಾರದ ವೇಳೆ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು.

ಕುಟುಂಬಕ್ಕೆ ಸಾಂತ್ವನ ಹೇಳುವ ಸಂದರ್ಭದಲ್ಲಿ ಭಾವುಕರಾದ ಅವರು, ಈ ಸಾವಿಗೆ ನ್ಯಾಯ ಸಿಗುವಂತೆ ಮಾಡುತ್ತೇನೆ. ಆರೋಪಿಗಳು ಪಾತಾಳದಲ್ಲಿ ಅಡಗಿದ್ದರೂ ಅವರಿಗೆ ಶಿಕ್ಷೆ ಕೊಡಿಸುವಂತೆ ಮಾಡುತ್ತೇವೆ. ಮೃತರ ಪತ್ನಿ ಮತ್ತು ಪುತ್ರನ ಮುಂದೆ ನಾನು ಒಂದು ಸಂಕಲ್ಪವನ್ನು ಮಾಡಿದ್ದೇನೆ. ಗುಂಡು ಹಾರಿಸಿದವರಿಗೆ ಮತ್ತು ಅದಕ್ಕೆ ಸೂಚನೆ ನೀಡಿದವರಿಗೆ ತಕ್ಕ ಶಿಕ್ಷೆಯಾಗಲಿದೆ. ದುಷ್ಕರ್ಮಿಗಳಿಗೆ ನೇಣು ಶಿಕ್ಷೆಯಾಗುವಂತೆ ಮಾಡಲು ನಾವು ಸುಪ್ರೀಂಕೋರ್ಟ್ ಮೆಟ್ಟಿಲನ್ನು ಬೇಕಾದರೂ ಹತ್ತುತ್ತೇವೆ. ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಇದೇ ಭರವಸೆಯನ್ನು ನೀಡಿದ್ದಾರೆ, ಎಂದರು.

ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಗೆಲುವಿಗಾಗಿ ಶ್ರಮಿಸಿದ್ದ ಅಮೇಠಿ ಕ್ಷೇತ್ರದ ಮಾಜಿ ಗ್ರಾಮ ಸರಪಂಚರೊಬ್ಬರನ್ನು ಭಾನುವಾರ ನಸುಕಿನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ.


ಉತ್ತರ ಪ್ರದೇಶದ ಅಮೇಠಿಯಿಂದ 25 ಕಿ.ಮೀ ದೂರದಲ್ಲಿರುವ ಬರೌಲಿಯಾ ಗ್ರಾಮದ ಮಾಜಿ ಸರಪಂಚ ಹಾಗೂ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌ (50) ಹತ್ಯೆಯಾದವರು. ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ಹಂತಕರು, ಸಿಂಗ್‌ ಅವರ ಮನೆಯ ಕದತಟ್ಟಿದರು. ಆಗ ಖುದ್ದು ಸುರೇಂದ್ರ ಸಿಂಗ್‌ ಅವರೇ ಬಂದು ಬಾಗಿಲು ತೆರೆದಾಗ ಅವರ ಮೇಲೆ ಗುಂಡಿನ ಸುರಿ ಮಳೆಗರೆದು ಪರಾರಿಯಾದರು. ತಕ್ಷಣ ನೆರವಿಗೆ ಧಾವಿಸಿದ ಮನೆಯವರು, ರಕ್ತದ ಮಡುವಿನಲ್ಲಿ ಕುಸಿದ ಸಿಂಗ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಪ್ರಯೋಜನವಾಗಲಿಲ್ಲ.

ಏಳು ಶಂಕಿತರು ಪೊಲೀಸ್‌ ವಶಕ್ಕೆ:

ಘಟನೆ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಘಾತ ವ್ಯಕ್ತಪಡಿಸಿದ್ದು, 24 ತಾಸುಗಳಲ್ಲಿ ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ವಿಷಯದಲ್ಲಿ ಸ್ಪಷ್ಟ ಫಲಿತಾಂಶ ತೋರಿಸುವಂತೆ ಪೊಲೀಸ್‌ ವರಿಷ್ಠರಿಗೆ ಆದೇಶ ನೀಡಿದ್ದಾರೆ. ಪ್ರಕರಣದ ತನಿಖೆ ನಿಗಾ ವಹಿಸಲು ಲಖನೌ ಪೊಲೀಸ್‌ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಇದಾಗಿ ಕಾರ್ಯಾಚರಣೆಗಿಳಿದ ಪೊಲೀಸರು ಕೆಲವೇ ತಾಸುಗಳಲ್ಲಿ ಏಳು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಏನು ಕಾರಣ?: ಸಿಂಗ್‌ ಹತ್ಯೆಗೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಹಳೆಯ ವೈಷಮ್ಯ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ರಾಜಕೀಯ ದ್ವೇಷ ಕೂಡ ಅಲ್ಲಗಳೆಯಾಗದು ಎಂದು ಪೊಲೀಸರು ತಿಳಿಸಿದ್ದಾರೆ.

ಬರೌಲಿಯಾ ಗ್ರಾಮ ಪಂಚಾಯಿತಿ ಮುಖ್ಯಸ್ಥರಾಗಿದ್ದ ಸುರೇಂದ್ರ ಸಿಂಗ್‌, ಲೋಕಸಭೆ ಚುನಾವಣೆಗೆ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸ್ಮೃತಿ ಇರಾನಿ ಅವರ ಬೆಂಬಲಿಗರ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಅವರು, ಪ್ರಚಾರ ರಾರ‍ಯಲಿಗಳ ಸಂದರ್ಭ ಬಿಜೆಪಿ ಪರ ಹಗಲಿರಳು ದುಡಿದಿದ್ದರು. ಇದು ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರಣ ಕೊಲೆಯಾಗಿದೆ ಎಂದು ಅವರ ಕುಟುಂಬ ಸದಸ್ಯರು ದೂರಿದ್ದಾರೆ.

ಅಮೇಠಿಯಲ್ಲಿ ಭೀತಿ ಹುಟ್ಟಿಸುವ, ಒಗ್ಗಟ್ಟು ಮುರಿಯುವ ಮತ್ತು ಘನತೆ ಕುಂದಿಸುವ ಕೆಲಸ ನಡೆಯುತ್ತಿದೆ. ಇಂತಹ ಪ್ರಯತ್ನಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರದೇ ಪ್ರತಿರೋಧ ತೋರಿಸಬೇಕು -ಸ್ಮೃತಿ ಇರಾನಿ, ಅಮೇಠಿ ಸಂಸದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ