ಆ್ಯಪ್ನಗರ

ಯುಪಿಎ ಕಾಲೆಳೆಯಲು ಹೋಗಿ ಎಡವಿದ ರಾಮ್‌ ಮಾಧವ್‌!

ಮಾಜಿ ವಿದೇಶಾಂಗ ಸಚಿವ, ಎಸ್‌. ಎಂ. ಕೃಷ್ಣ ಹಾಗೂ ಹಾಲಿ ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಈಗ ಬಿಜೆಪಿ ನಾಯಕರು ಎಂಬುದನ್ನು ಮರೆತ ರಾಮ್‌ ಮಾಧವ್‌, ಈ ಇಬ್ಬರೂ ಹಿಂದೊಮ್ಮೆ ಎದುರಿಸಿದ ಮುಜುಗರದ ಪ್ರಸಂಗವನ್ನು ಬಿಜೆಪಿ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ತಾವೇ ಟೀಕೆಗೆ ಗ್ರಾಸವಾಗಿದ್ದಾರೆ.

Vijaya Karnataka 29 Oct 2018, 9:02 am
ಹೈದರಾಬಾದ್‌: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ತಾವೇ ಎಡವಿದ್ದಾರೆ.
Vijaya Karnataka Web nda


ಮಾಜಿ ವಿದೇಶಾಂಗ ಸಚಿವ, ಎಸ್‌. ಎಂ. ಕೃಷ್ಣ ಹಾಗೂ ಹಾಲಿ ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಈಗ ಬಿಜೆಪಿ ನಾಯಕರು ಎಂಬುದನ್ನು ಮರೆತ ರಾಮ್‌ ಮಾಧವ್‌, ಈ ಇಬ್ಬರೂ ಹಿಂದೊಮ್ಮೆ ಎದುರಿಸಿದ ಮುಜುಗರದ ಪ್ರಸಂಗವನ್ನು ಬಿಜೆಪಿ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ತಾವೇ ಟೀಕೆಗೆ ಗ್ರಾಸವಾಗಿದ್ದಾರೆ.

ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಂದಾಗಿ ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಗುರುತಿಸಲಾಗುತ್ತಿದೆ ಎಂದು ಬಣ್ಣಿಸಿದ ರಾಮ್‌ ಮಾಧವ್‌, ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಜಿ ಸಚಿವರ ಉದಾಹರಣೆಯನ್ನೂ ಪ್ರಸ್ತಾಪಿಸಿದರು. 2011ರಲ್ಲಿ ಎಸ್‌.ಎಂ. ಕೃಷ್ಣ ವಿದೇಶಾಂಗ ಸಚಿವರಾಗಿದ್ದಾಗ, ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪೋರ್ಚುಗೀಸ್‌ ಪ್ರಧಾನಿಯ ಭಾಷಣವನ್ನು ಓದಿ ಯಡವಟ್ಟು ಮಾಡಿದ್ದರು. ಭಾಷಣ ಪ್ರತಿಗಳ ಅದಲು ಬದಲಿನಿಂದ ಈ ಪ್ರಮಾದ ನಡೆದಿತ್ತು. ಬಳಿಕ ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿದ್ದ ಹರ್‌ದೀಪ್‌ ಸಿಂಗ್‌ ಪುರಿ ಅವರು ಪ್ರಮಾದವನ್ನು ಗುರುತಿಸಿ, ಕೃಷ್ಣ ಅವರು ಓದಬೇಕಾದ ಭಾಷಣದ ಪ್ರತಿಯನ್ನು ಅವರ ಕೈಗಿತ್ತಿದ್ದರು. ಇದು ಜಾಗತಿಕ ಮಟ್ಟದಲ್ಲಿ ಕೃಷ್ಣ ಅವರಿಗೆ ಮುಜುಗರ ತಂದಿತ್ತು. ಅಲ್ಲದೆ, ಇದನ್ನು ಬಳಸಿ ಬಿಜೆಪಿ ಕಾಂಗ್ರೆಸ್‌ ಅನ್ನು ಲೇವಡಿ ಮಾಡಿತ್ತು. ಇದೇ ಪ್ರಸಂಗವನ್ನು ರಾಮ್‌ ಮಾಧವ್‌ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಯಾರ ಹೆಸರನ್ನೂ ಹೇಳದೇ ಪ್ರಸ್ತಾಪಿಸಿದರು.

ಇದಾಗಿ ಕೆಲವೇ ಗಂಟೆಗಳಲ್ಲಿ ರಾಮ್‌ ಮಾಧವ್‌ ಟ್ವೀಟಿಗರ ಚರ್ಚೆಗೆ ಗ್ರಾಸವಾದರು. ಏಕೆಂದರೆ, ಆಗ ವಿಶ್ವಸಂಸ್ಥೆಯಲ್ಲಿ ಯಡವಟ್ಟು ಮಾಡಿದ್ದ ಮಾಜಿ ಕಾಂಗ್ರೆಸ್‌ ನಾಯಕ ಎಸ್‌.ಎಂ. ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಕೃಷ್ಣ ಅವರ ಜತೆಗಿದ್ದ ಹರ್‌ದೀಪ್‌ ಸಿಂಗ್‌ ಪುರಿ ಸಹ ಈಗ ಕೇಂದ್ರದಲ್ಲಿ ಬಿಜೆಪಿ ಸಚಿವರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ