ಆ್ಯಪ್ನಗರ

18 ತಿಂಗಳು ಕೃಷಿ ಕಾಯಿದೆ ಜಾರಿ ಮುಂದೂಡಿಕೆ ಪ್ರಸ್ತಾವ ತಿರಸ್ಕರಿಸಿದ ರೈತರು

ಸರಕಾರದ ಮರ್ಜಿಗೆ ಮಣಿದು ಒಮ್ಮೆ ಪ್ರತಿಭಟನೆ ಕೈಬಿಟ್ಟರೆ ವರ್ಷದ ಬಳಿಕ ಮತ್ತದೇ ಕಾಯಿದೆಗಳು ಜಾರಿಗೆ ಬರುತ್ತವೆ ಎನ್ನುವ ಭೀತಿಯಿಂದ ರೈತರು ಈ ನಿರ್ಧಾರ ತಳೆದರು ಎಂದು ಗೊತ್ತಾಗಿದೆ. ಹೀಗಾಗಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.

Agencies 21 Jan 2021, 10:33 pm
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ತಡೆ ಹಿಡಿದಿರುವ ಕೃಷಿ ಕಾಯಿದೆಗಳ ಜಾರಿಯನ್ನು 18 ತಿಂಗಳ ಮಟ್ಟಿಗೆ ಅಮಾನತಿನಲ್ಲಿ ಇಡುತ್ತೇವೆ. ಪ್ರತಿಭಟನೆ ಕೈಬಿಡಿ ಎಂದು ಕೇಂದ್ರ ಸರಕಾರ ನೀಡಿದ್ದ ಪ್ರಸ್ತಾವವನ್ನು ರೈತ ಮುಖಂಡರು ತಿರಸ್ಕರಿಸಿದ್ದು, ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿದೆ.
Vijaya Karnataka Web farmer protest


ಸರಕಾರದ ಆಹ್ವಾನ ಒಪ್ಪುವುದೋ ಬೇಡವೋ ಎನ್ನುವ ಕುರಿತು ಸಂಯುಕ್ತ ಕಿಸಾನ್‌ ಮೋರ್ಚಾದ ನೇತೃತ್ವದಲ್ಲಿ ರೈತ ಮುಖಂಡರು ಗುರುವಾರ ದಿನವಿಡೀ ಚರ್ಚೆ ನಡೆಸಿದರು. ಅಂತಿಮವಾಗಿ, ತಿರಸ್ಕರಿಸುವುದೇ ಲೇಸು ಎನ್ನುವ ನಿರ್ಧಾರಕ್ಕೆ ಬರಲಾಯಿತು.

ಒಮ್ಮೆ ಸರಕಾರದ ಮರ್ಜಿಗೆ ಮಣಿದು ಪ್ರತಿಭಟನೆ ಕೈಬಿಟ್ಟರೆ ವರ್ಷದ ಬಳಿಕ ಮತ್ತದೇ ಕಾಯಿದೆಗಳು ಜಾರಿಗೆ ಬರುತ್ತವೆ ಎನ್ನುವ ಭೀತಿಯಿಂದ ರೈತರು ಈ ನಿರ್ಧಾರ ತಳೆದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಶುಕ್ರವಾರ ರೈತ ಪ್ರತಿನಿಧಿಗಳ ಜತೆ ಸರಕಾರ ಹನ್ನೊಂದನೇ ಸುತ್ತಿನ ಮಾತುಕತೆ ನಡೆಸಲಿದೆ. ಕಾಯಿದೆಗಳ ರದ್ದತಿಯೊಂದೇ ಸಮಸ್ಯೆಗೆ ಪರಿಹಾರ ಎಂದು ರೈತರು ಪಟ್ಟು ಹಿಡಿದಿರುವುದರಿಂದ ಸರಕಾರ ಪೇಚಿಗೆ ಸಿಲುಕಿದೆ. ಶುಕ್ರವಾರದ ಮಾತುಕತೆ ವೇಳೆ ಕೂಡ ಇದೇ ಬೇಡಿಕೆ ಇಟ್ಟರೆ ಫಲಿತಾಂಶ ಬೇರೆಯಾಗಿರಲು ಸಾಧ್ಯವೇ ಇಲ್ಲ ಎಂದು ಸರಕಾರದ ಮೂಲಗಳು ತಿಳಿಸಿವೆ.

ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಬೆದರಿತೇ ಕೇಂದ್ರ? ಕೃಷಿ ಕಾಯಿದೆ ಜಾರಿ ಒಂದೂವರೆ ವರ್ಷ ಮುಂದೂಡಿಕೆ!
ಟ್ರ್ಯಾಕ್ಟರ್‌ ಜಾಥಾ ನಿಶ್ಚಿತ

ಜನವರಿ 26ರಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ‍್ಯಾಲಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳ ಜತೆ ಗುರುವಾರ ನಡೆದ ಎರಡನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿಯೇ ಸಿದ್ಧ ಎಂದು ರೈತರು ಪಟ್ಟು ಹಿಡಿದಿರುವುದು ದಿಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

58ನೇ ದಿನಕ್ಕೆ ಕಾಲಿಸಿದ ಪ್ರತಿಭಟನೆ

ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ದಿಲ್ಲಿ ಹೊರಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಗುರುವಾರ 58ನೇ ದಿನಕ್ಕೆ ಕಾಲಿರಿಸಿದೆ. ಇದರ ನಡುವೆ ಸುಪ್ರೀಂ ಕೋರ್ಟ್‌ ನಿಯೋಜಿತ ತಜ್ಞರ ಸಮಿತಿ ಗುರುವಾರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರೈತ ಸಂಘಟನೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಿದೆ.

50,000 ಕೋಟಿ ರೂ.ನಷ್ಟ

ರೈತರ ಪ್ರತಿಭಟನೆಯಿಂದ ಸುಮಾರು 50 ಸಾವಿರ ಕೋಟಿ ರೂ. ನಷ್ಟವಾಗಿದೆ. ದಿಲ್ಲಿ, ಹರಿಯಾಣ ಗಡಿಗಳು ಬಂದ್‌ ಆಗಿರುವುದರಿಂದ ಸರಕು ಸಾಗಣೆ ವಾಹನಗಳ ಸಂಚಾರ ವ್ಯತ್ಯಯವಾಗಿದ್ದು, ವಾಣಿಜ್ಯ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ