ಆ್ಯಪ್ನಗರ

ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್‌ನ ‘ಸೈನಿಕ್‌ ಸ್ಕೂಲ್‌’

ಆರೆಸ್ಸೆಸ್‌ನ ಶಿಕ್ಷಣ ಘಟಕ 'ವಿದ್ಯಾ ಭಾರತಿ' ನಡೆಸಲಿರುವ ಶಾಲೆಯು ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಶಿಕಾರ್‌ಪುರದಲ್ಲಿ 20 ಸಾವಿರ ಚದರ ಮೀಟರ್‌ ಅಳತೆಯಲ್ಲಿ ತಲೆ ಎತ್ತಲಿದೆ.

PTI 30 Jul 2019, 5:00 am
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌) ಇದೇ ಮೊದಲ ಬಾರಿಗೆ 'ಸೈನಿಕ ಶಾಲೆ'ಯೊಂದನ್ನು ತೆರೆಯಲು ಸಕಲ ಸಿದ್ಧತೆ ನಡೆಸಿದೆ. ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಅತ್ಯುತ್ತಮ ಶಿಕ್ಷಣ ಹಾಗೂ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಸೇನೆಗೆ ಸಜ್ಜುಗೊಳಿಸುವುದು ಶಾಲೆಯ ಧ್ಯೇಯವಾಗಲಿದೆ ಎಂದು ಮೂಲಗಳು ಹೇಳಿವೆ.
Vijaya Karnataka Web rss


ಆರೆಸ್ಸೆಸ್‌ನ ಶಿಕ್ಷಣ ಘಟಕ 'ವಿದ್ಯಾ ಭಾರತಿ' ನಡೆಸಲಿರುವ ಶಾಲೆಯು ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಶಿಕಾರ್‌ಪುರದಲ್ಲಿ 20 ಸಾವಿರ ಚದರ ಮೀಟರ್‌ ಅಳತೆಯಲ್ಲಿ ತಲೆ ಎತ್ತಲಿದೆ. ಶಿಕಾರ್‌ಪುರ ಆರೆಸ್ಸೆಸ್‌ನ ಮಾಜಿ ಸರಸಂಘಚಾಲಕ ರಜ್ಜು ಭಯ್ಯಾ ಎಂದೇ ಹೆಸರಾಗಿದ್ದ ರಾಜೇಂದ್ರ ಸಿಂಗ್‌ ಅವರ ತವರು. ಇವರ ನೆನಪಿನಲ್ಲಿ ಆರೆಸ್ಸೆಸ್‌ ಇಲ್ಲಿ ಸಿಬಿಎಸ್‌ಇ ಪಠ್ಯಕ್ರಮದೊಂದಿಗೆ 'ರಜ್ಜು ಭಯ್ಯಾ ಸೈನಿಕ್‌ ವಿದ್ಯಾಮಂದಿರ' ತೆರೆಯಲಿದ್ದು, ಮುಂಬರುವ ಏಪ್ರಿಲ್‌ನಿಂದ 6ನೇ ತರಗತಿಗೆ ಪ್ರವೇಶ ಅವಕಾಶ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 160 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. 6ರಿಂದ 12ನೇ ತರಗತಿವರೆಗೆ ಕಲಿಯಬಹುದಾಗಿರುತ್ತದೆ.

ಹುತಾತ್ಮ ಯೋಧರ ಮಕ್ಕಳಿಗೆ ಮೀಸಲು:
''ಆರೆಸ್ಸೆಸ್‌ ಇಂತಹ ಪ್ರಯೋಗಕ್ಕೆ ಕೈಹಾಕಿರುವುದು ಇದೇ ಮೊದಲು. ಇಲ್ಲಿ ಸಿಗುವ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬೇರೆ ಕಡೆಯೂ ವಿಸ್ತರಿಸಲಾಗುವುದು. ಆರಂಭದ 160 ಸೀಟುಗಳಲ್ಲಿ ಹುತಾತ್ಮ ಯೋಧರ ಮಕ್ಕಳಿಗೆ 56 ಸೀಟುಗಳನ್ನು ಮೀಸಲಿರಿಸಲಾಗುವುದು. ಸೆಪ್ಟೆಂಬರ್‌ನಲ್ಲಿ ನಿವೃತ್ತ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಶಾಲೆಯ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯೊಂದಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ,'' ಎಂದು ವಿದ್ಯಾ ಭಾರತಿ ಉಚ್ಛ ಶಿಕ್ಷಾ ಸಂಸ್ಥಾನದ ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದ ಪ್ರಾದೇಶಿಕ ಸಂಚಾಲಕ ಅಜಯ್‌ ಗೋಯಲ್‌ ಹೇಳಿದ್ದಾರೆ.

40 ಕೋಟಿ ರೂ. ಯೋಜನೆ: ರಜ್ಜು ಭಯ್ಯಾ ಸೈನಿಕ್‌ ವಿದ್ಯಾಮಂದಿರ ಶಾಲೆಯ ಅಂದಾಜು ವೆಚ್ಚ 40 ಕೋಟಿ ರೂ. ಆಗಿದೆ. 20 ಸಾವಿರ ಚದರ ಮೀಟರ್‌ ಅಳತೆಯಲ್ಲಿ ಮೂರು ಮಹಡಿಯ ಶಾಲೆ, ಮೂರು ಮಹಡಿಯ ವಸತಿ ನಿಲಯ, ಸಿಬ್ಬಂದಿಗಳಿಗೆ ವಸತಿ ಗೃಹಗಳು, ಸ್ಟೇಡಿಯಂ ಸೇರಿ ಅನೇಕ ಸೌಲಭ್ಯಗಳು ತಲೆಎತ್ತಲಿವೆ. ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅಂದಹಾಗೆ ಈ ಯೋಜನೆಗಾಗಿ ಆರೆಸ್ಸೆಸ್‌ಗೆ ಭೂಮಿ ದೇಣಿಗೆ ನೀಡಿದ್ದು ಮಾಜಿ ಯೋಧ ಹಾಗೂ ರೈತ ರಾಜ್‌ಪಾಲ್‌ ಸಿಂಗ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ