ಆ್ಯಪ್ನಗರ

ಅಸ್ಸಾಂ ಹಾಗೂ ಬಿಹಾರದಲ್ಲಿ ನೆರೆಗೆ 97 ಬಲಿ, ಉ.ಪ್ರ.ದಲ್ಲಿ 3 ಸಾವು

ಬ್ರಹ್ಮಪುತ್ರ ನದಿ ಹಾಗೂ ಅದರ ಕವಲು ನದಿಗಳು ಮೈತುಂಬಿ ಹರಿಯುತ್ತಿವೆ. ರಾಜಧಾನಿ ಗುವಾಹಟಿ ಸೇರಿದಂತೆ ಅನೇಕ ನಗರಗಳು ಜಲಾವೃತಗೊಂಡಿದ್ದು, ಪ್ರತಿಷ್ಠಿತ ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಕೂಡ ಶೇ. 80ರಷ್ಟು ಮುಳುಗಿದೆ.

PTI 19 Jul 2019, 5:00 am
ಗುವಾಹಟಿ: ಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿರುವ ಅಸ್ಸಾಂ ಮತ್ತು ಬಿಹಾರದಲ್ಲಿ ಬುಧವಾರ 44 ಮಂದಿ ಮೃತಪಟ್ಟಿದ್ದು, ಈ ಮೂಲಕ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 97ಕ್ಕೆ ಏರಿಕೆ ಆಗಿದೆ.
Vijaya Karnataka Web rain


ಅಸ್ಸಾಂ ನೈಸರ್ಗಿಕ ವಿಕೋಪ ನಿರ್ವಹಣೆ ಆಯೋಗದ ಪ್ರಕಾರ ರಾಜ್ಯದಲ್ಲಿ 27 ಮಂದಿ ನೆರೆಯಿಂದಾಗಿ ಸಂಭವಿಸಿದ ಭೂಕುಸಿತದಂಥ ದುರಂತಗಳಲ್ಲಿ ಮೃತಪಟ್ಟಿದ್ದಾರೆ.
28 ಜಿಲ್ಲೆಗಳ 4,128 ಗ್ರಾಮಗಳು ಮಳೆನೀರಿನಲ್ಲಿ ಮುಳುಗಿವೆ.

ಬ್ರಹ್ಮಪುತ್ರ ನದಿ ಹಾಗೂ ಅದರ ಕವಲು ನದಿಗಳು ಮೈತುಂಬಿ ಹರಿಯುತ್ತಿವೆ. ರಾಜಧಾನಿ ಗುವಾಹಟಿ ಸೇರಿದಂತೆ ಅನೇಕ ನಗರಗಳು ಜಲಾವೃತಗೊಂಡಿದ್ದು, ಪ್ರತಿಷ್ಠಿತ ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಕೂಡ ಶೇ. 80ರಷ್ಟು ಮುಳುಗಿದೆ. ಕಾಡುಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಒಟ್ಟಿನಲ್ಲಿ ಅಸ್ಸಾಂನಲ್ಲಿ ನೆರೆಯಿಂದಾಗಿ 57.51 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ನೆರೆಪೀಡಿತ ಪ್ರದೇಶಗಳಿಂದ ರಕ್ಷಣಾ ಕಾರ್ಯಪಡೆ ಸಿಬ್ಬಂದಿ ಅನೇಕ ಶವಗಳನ್ನು ಇನ್ನೂ ಹೊರತೆಗೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರದಲ್ಲಿ 67 ಸಾವು: ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ನೆರೆ ಭೀತಿ ಎದುರಾಗಿದೆ. ಇದುವರೆಗೂ ಸುಮಾರು 67 ಮಂದಿ ಮಳೆಯಿಂದ ಸಂಭವಿಸಿದ ವಿವಿಧ ದುರಂತಗಳಲ್ಲಿ ಮೃತರಾಗಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದ್ದು, ತಾತ್ಕಾಲಿಕ ಶಿಬಿರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ವೈದ್ಯಕೀಯ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

ಉತ್ತರಪ್ರದೇಶದಲ್ಲಿ 3 ಸಾವು
ಮುಜಾಫ್ಫರ್‌ನಗರ ಜಿಲ್ಲೆಯ ಬಿಲಾಸ್‌ಪುರ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದ ಮನೆಯೊಂದರ ಛಾವಣಿ ಕುಸಿದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಕುಟುಂಬದ ಇತರ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ದೋಣಿಯಲ್ಲಿ ಮಗುವಿಗೆ ಜನ್ಮ, 'ಕೃಷ್ಣ' ಎಂದು ನಾಮಕರಣ
ಅಸ್ಸಾಂನ ಗೋಲಾಘಾಟ್‌ ಜಿಲ್ಲೆಯ ಅಪ್ಹೊಲಾ ಗ್ರಾಮದಲ್ಲಿ ಗರ್ಭಿಣಿಯೊಬ್ಬಳನ್ನು ಹೆರಿಗೆಗಾಗಿ ದೋಣಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮಾರ್ಗ ಮಧ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಿದ ಘಟನೆ ಜರುಗಿದೆ. 24 ವರ್ಷದ ರೂಮಿ ಪಥಾರಿ ಹಾಗೂ ಪತಿ ದುಲಾಲ್‌ ಪಥಾರಿ ಹರಸಾಹಸಪಟ್ಟು ದೋಣಿಯೊಂದನ್ನು ಆಸ್ಪತ್ರೆಗೆ ತೆರಳಲು ವ್ಯವಸ್ಥೆ ಮಾಡಿದ್ದರು. ಆದರೆ ಹೆರಿಗೆ ಬೇನೆ ತೀವ್ರವಾಗಿದ್ದರಿಂದ ಶಿಶುವಿನ ಜನನ ದೋಣಿಯಲ್ಲಿಯೇ ಆಗಿದೆ. ಗಂಡು ಮಗುವಿಗೆ ರೂಮಿ ಜನ್ಮ ನೀಡಿದ್ದು, 'ಕೃಷ್ಣ' ಎಂದು ನಾಮಕರಣ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ