ಆ್ಯಪ್ನಗರ

ಪುಲ್ವಾಮ ಮಾದರಿ ದಾಳಿ ಹತ್ತಿಕ್ಕಲು ಅಮರನಾಥ ಯಾತ್ರೆಗೆ ಬಿಗಿ ಭದ್ರತೆ

ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿದಂತೆ ಯಾತ್ರೆಯ ಮಾರ್ಗದುದ್ದಕ್ಕೂ ಭದ್ರತೆ ಏರ್ಪಡಿಸಲಾಗಿದೆ.

PTI 26 Jun 2019, 5:00 am
ಶ್ರೀನಗರ: ಅಮರನಾಥ ಯಾತೆ ವೇಳೆ ಪುಲ್ವಾಮ ಮಾದರಿಯ ದಾಳಿ ನಡೆಯಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಹಿಂದೆಂದಿಗಿಂತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿದಂತೆ ಯಾತ್ರೆಯ ಮಾರ್ಗದುದ್ದಕ್ಕೂ ಭದ್ರತೆ ಏರ್ಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಜವಾಹರ್‌ ಸುರಂಗ ಮಾರ್ಗದಲ್ಲಿಯೂ ಹೆಚ್ಚಿನ ನಿಗಾ ವಹಿಸಲಾಗಿದೆ. ಉಗ್ರರು ವಾಹನಗಳಲ್ಲಿ ಸುಧಾರಿತ ಸ್ಫೋಟಕ (ಐಇಡಿ) ತುಂಬಿಕೊಂಡು ಬಂದು ದಾಳಿ ನಡೆಸುವ ಹಾಗೂ ವಾಹನಗಳಲ್ಲಿ ಗೌಪ್ಯವಾಗಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಅವುಗಳನ್ನು ಸೇನಾ ಗಸ್ತು ವಾಹನಗಳ ಬಳಿ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
Vijaya Karnataka Web yatra


ಯಾವ್ಯಾವ ದಾಳಿ ಭೀತಿ ಇದೆ?
* ಯಾತ್ರಿಕರ ಬಸ್‌, ಸೇನಾ ವಾಹನಗಳಿಗೆ ಐಇಡಿ ತುಂಬಿಸಿದ ವಾಹನ ಡಿಕ್ಕಿ ಹೊಡೆಸುವುದು
* ಯಾತ್ರಿಕರ ಅಪಹರಣ, ಗ್ರೇನೇಡ್‌ ದಾಳಿ ನಡೆಸುವುದು
* ರಸ್ತೆ ಬದಿ ಅವಿತುಕೊಂಡು ವಾಹನ ಗುರಿಯಾಗಿಸಿ ಗುಂಡಿನ ದಾಳಿ ನಡೆಸುವುದು

ಭದ್ರತಾ ಕ್ರಮಗಳೇನು?
* 42,000 ಅರೆ ಸೇನಾಪಡೆ ಯೋಧರ ನಿಯೋಜನೆ
* ಐಟಿಬಿಪಿ, ಎಸ್‌ಎಸ್‌ಬಿ, ಸಿಐಎಸ್‌ಎಫ್‌ ತುಕಡಿಗಳ ನಿರಂತರ ಗಸ್ತು
* ಆರು ನುರಿತ ಕ್ಷಿಪ್ರ ಕ್ರಿಯಾ ಪಡೆಗಳ ನಿಯೋಜನೆ
* ಯಾತ್ರೆ ಮಾರ್ಗದುದ್ದಕ್ಕೂ ಡ್ರೋನ್‌, ಹೆಲಿಕಾಪ್ಟರ್‌ಗಳ ಕಾವಲು.
* ಯಾತ್ರಿಕರ ವಾಹನಗಳಿಗೆ ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್‌ ಟ್ಯಾಗ್‌
* ಯಾತ್ರೆಯುದ್ಧಕ್ಕೂ 'ಕಮ್ಯೂನಿಟಿ ಕಿಚನ್‌'ಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

46 ದಿನಗಳ ಯಾತ್ರೆ
ಜುಲೈ 1ರಿಂದ 46 ದಿನಗಳ ಯಾತ್ರೆ ಆರಂಭಗೊಳ್ಳಲಿದೆ. ಯಾತ್ರೆಯು ಎರಡು ಮಾರ್ಗಗಳಲ್ಲಿ ಸಾಗಲಿದೆ. ಅನಂತ್‌ನಾಗ್‌ ಜಿಲ್ಲೆಯ ಪಹಲ್‌ಗಾಂವ್‌ನ ಸಾಂಪ್ರದಾಯಿಕ ಮಾರ್ಗ ಮತ್ತು ಗಂದೇರ್ಬಾಲ್‌ ಜಿಲ್ಲೆಯ ಬಾಲ್‌ತಲ್‌ನ ತ್ವರಿತ ಮಾರ್ಗ. ಈ ಎರಡೂ ಮಾರ್ಗಗಳಲ್ಲಿ ಜುಲೈ 1ರಿಂದ ಯಾತ್ರೆ ಆರಂಭಗೊಳ್ಳಲಿದ್ದು, ರಕ್ಷಾ ಬಂಧನದ ದಿನವಾದ ಆಗಸ್ಟ್‌ 15ರಂದು ಮುಕ್ತಾಯಗೊಳ್ಳಲಿದೆ.

ಯಾತ್ರೆ ಮೇಲೆ ಹಿಂದಿನ ಪ್ರಮುಖ ದಾಳಿಗಳು
2001, ಜು. 21: ಶೇಷನಾಗ್‌ ಯಾತ್ರಿಕರ ಕ್ಯಾಂಪ್‌ ಮೇಲೆ ಗ್ರೆನೇಡ್‌, ಗುಂಡಿನ ದಾಳಿ. 10 ಯಾತ್ರಿಕರು, ಇಬ್ಬರು ಪೊಲೀಸರು ಬಲಿ.
2002, ಆ.6: ನುನ್ವಾನ್‌ ಬೇಸ್‌ ಕ್ಯಾಂಪ್‌ ಮೇಲೆ ಉಗ್ರರ ಗ್ರೆನೇಡ್‌ ದಾಳಿಗೆ 9 ಯಾತ್ರಿಕರ ಸಾವು.
2012, ಜು.3: ಯಾತ್ರಿಕರಿದ್ದ ಬಸ್‌ ಮೇಲೆ ಗ್ರೆನೇಡ್‌ ದಾಳಿ. ಮೂವರು ಹತ.
2017: ಅನಂತನಾಗ್‌ ಸಮೀಪ ಯಾತ್ರಿಕರ ವಾಹನದ ಮೇಲೆ ಗುಂಡಿನ ದಾಳಿಗೆ 12 ಮಂದಿ ಬಲಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ