ಆ್ಯಪ್ನಗರ

ಆಯೋಗದ ಕಾರ್ಯವೈಖರಿಗೆ ಮುಖರ್ಜಿ ಪ್ರಶಂಸೆ

ಚುನಾವಣಾ ಆಯೋಗವು ಅತ್ಯಂತ ದಕ್ಷತೆಯಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ನಡೆಸಿಕೊಟ್ಟಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ...

Vijaya Karnataka 22 May 2019, 5:00 am
ಹೊಸದಿಲ್ಲಿ: ಚುನಾವಣಾ ಆಯೋಗವು ಅತ್ಯಂತ ದಕ್ಷತೆಯಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ನಡೆಸಿಕೊಟ್ಟಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆಪಾದಿಸುತ್ತಿರುವ ಕಾಂಗ್ರೆಸ್‌ಗೆ ಮುಜುಗರ ತಂದಿಟ್ಟಿದ್ದಾರೆ.
Vijaya Karnataka Web former president pranab mukherjee lauds ec says holding of polls perfect
ಆಯೋಗದ ಕಾರ್ಯವೈಖರಿಗೆ ಮುಖರ್ಜಿ ಪ್ರಶಂಸೆ


ದಿಲ್ಲಿಯಲ್ಲಿ ಪತ್ರಕರ್ತೆ ಸೋನಿಯಾ ಸಿಂಗ್‌ ಬರೆದಿರುವ 'ಡಿಫೈನಿಂಗ್‌ ಇಂಡಿಯಾ ಥ್ರೂ ದೇರ್‌ ಐಯ್ಸ್‌' ಪುಸ್ತಕ ಬಿಡುಗಡೆ ಕಾರ‍್ಯಕ್ರಮದಲ್ಲಿ ಮುಖರ್ಜಿ ಅವರು, ''ಈ ಬಾರಿಯ ಲೋಕಸಭೆ ಚುನಾವಣೆಯನ್ನು ಆಯೋಗವು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರಿಪೂರ್ಣತೆಯಿಂದ ನಡೆಸಿದೆ. ನಾವು ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಬಲಾಢ್ಯಗೊಳಿಸಬೇಕಾದರೆ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ವಿನಾಃ ಕಾರಣ ದೂರುವ ಚಾಳಿ ಬಿಡಬೇಕು,'' ಎಂದು ಹೇಳಿದ್ದಾರೆ.

''ಈ ಸಲ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ದಾಖಲಾದ ಅದೆಷ್ಟೋ ದೂರುಗಳ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಆಯೋಗ ಸೋತಿದೆ. ಅದರಲ್ಲೂ ಅದು ಬಿಜೆಪಿಯ ಕೈಗೊಂಬೆಯಾಗಿದೆ,'' ಎಂದು ಪ್ರತಿಪಕ್ಷಗಳು ದೂರಿದ್ದವು. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಹಿಂಸಾಚಾರಗಳ ಕುರಿತು ಬಿಜೆಪಿಯೂ ಆಯೋಗದ ಮೇಲೆ ಬೊಟ್ಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖರ್ಜಿ ಅವರ ಮಾತುಗಳು ಮಹತ್ವ ಪಡೆದಿವೆ.

''ದೇಶದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತಿದ್ದು, ಮತದಾರ ಈ ವ್ಯವಸ್ಥೆಯ ಮೇಲೆ ಅತೀವ ನಂಬಿಕೆ ಇರಿಸಿಕೊಂಡಿದ್ದಾನೆ ಎಂದರೆ ಆಯೋಗದ ಕಠಿಣ ಪರಿಶ್ರಮವೇ ಕಾರಣ. ದೇಶದ ಮೊದಲ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಅವರಿಂದ ಹಿಡಿದು ಹಾಲಿ ಚುನಾವಣಾ ಆಯುಕ್ತರವರೆಗೂ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಅವರನ್ನು ಟೀಕಿಸುವುದು ತರವಲ್ಲ,'' ಎಂದಿದ್ದಾರೆ. ಅಲ್ಲದೇ ಬುಲೆಟ್‌ಗಿಂತಲೂ ವೋಟಿಂಗ್‌ ಪವರ್‌ ಶಕ್ತಿಶಾಲಿ ಎಂಬುದನ್ನು ಜನತೆ ಈ ಸಲ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ