ಆ್ಯಪ್ನಗರ

Ambareesh Funeral: ಅಂಬರೀಶ್‌ ಅಂತ್ಯಸಂಸ್ಕಾರ ಇಂದು

ಕಂಠೀರವ ಸ್ಟುಡಿಯೊದಲ್ಲಿರುವ ಡಾ. ರಾಜ್‌ ಸ್ಮಾರಕದ ಎದುರು ಬಲಭಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಅಲ್ಲೇ ಸ್ಮಾರಕ ನಿರ್ಮಾಣಕ್ಕೆ ಸರಕಾರ ಉದ್ದೇಶಿಸಿದೆ.

Vijaya Karnataka Web 26 Nov 2018, 9:41 am
ಬೆಂಗಳೂರು: ರಾಜಧಾನಿಯ ಕಂಠೀರವ ಕ್ರೀಡಾಂಗಣ ಮತ್ತು ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಕಣ್ಣೀರ ಹೊಳೆ, ಅಭಿಮಾನದ ಸಾಗರವೇ ಉಕ್ಕಿ ಹರಿಯಿತು. ಶನಿವಾರ ರಾತ್ರಿ ನಿಧನರಾದ ನಟ, ರಾಜಕಾರಣಿ ಅಂಬರೀಶ್‌ ಅವರ ಅಂತಿಮ ದರ್ಶನಕ್ಕೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯ ನಾಯಕರು, ರಾಜಕೀಯ ಮುಖಂಡರು ಆಗಮಿಸಿದ್ದು ಮತ್ತು ಜನರ ಪ್ರವಾಹವೇ ಹರಿದುಬಂದಿತ್ತು.
Vijaya Karnataka Web ambarish


ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ರಾಜ್ಯ ಸರಕಾರ, ಹುಟ್ಟೂರಿನ ಅಭಿಮಾನಿಗಳ ಒತ್ತಡಕ್ಕೆ ಮಣಿದು ಮಂಡ್ಯದಲ್ಲೂ ಕಾರ್ಯಕ್ರಮ ಆಯೋಜಿಸಿತು. ಅಲ್ಲಿಗೆ ಸೇನಾಪಡೆಯ ವಿಮಾನ ಮೂಲಕ ಪಾರ್ಥಿವ ಶರೀರವನ್ನು ಕೊಂಡೊಯ್ದು, ಸೋಮವಾರ ಬೆಳಗ್ಗೆ 9 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಿದೆ. ಅದಾದ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ನಡೆಯಿತು ಏರ್‌ಲಿಫ್ಟ್‌
ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಬೇಕೆಂಬ ಒತ್ತಡ ತೀವ್ರವಾಗಿತ್ತು. ಆದರೆ, ರಸ್ತೆ ಮೂಲಕ ಅಲ್ಲಿಗೆ ಹೋಗಿ, ವಾಪಸ್‌ ಕರೆತರುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದ ಸಿಎಂ ವಿಮಾನ ಮೂಲಕ ಏರ್‌ಲಿಫ್ಟ್‌ಗೆ ನಿರ್ಧರಿಸಿದರು.

ರಾಜ್‌ ಸ್ಮಾರಕದ ಬಳಿ ಅಂತ್ಯಕ್ರಿಯೆ, ಸ್ಮಾರಕ

ಕಂಠೀರವ ಸ್ಟುಡಿಯೊದಲ್ಲಿರುವ ಡಾ. ರಾಜ್‌ ಸ್ಮಾರಕದ ಎದುರು ಬಲಭಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಅಲ್ಲೇ ಸ್ಮಾರಕ ನಿರ್ಮಾಣಕ್ಕೆ ಸರಕಾರ ಉದ್ದೇಶಿಸಿದೆ. ಈ ನಡುವೆ, ಇಲ್ಲಿ ಅಂತ್ಯಕ್ರಿಯೆ ನಡೆಸುವುದರ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆಯೂ ಆಗಿದೆ.

ಗಣ್ಯರಿಂದ ಅಂತಿಮ ದರ್ಶನ:
ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿಎಸ್‌ ಯಡಿಯೂರಪ್ಪ, ರಜನಿಕಾಂತ್‌, ಚಿರಂಜೀವಿ, ಮೋಹನ್‌ಬಾಬು, ಶರತ್‌ ಕುಮಾರ್‌ ಮುಂತಾದವರು ಅಂಬರೀಶ್ ಅಂತಿಮ ದರ್ಶನ ಪಡೆದಿದ್ದಾರೆ.

ಇಂದು ಬೆಳಗ್ಗೆ ಏನೇನು?
ಬೆಳಗ್ಗೆ 9 ಗಂಟೆವರೆಗೆ ಮಂಡ್ಯದಲ್ಲಿ ಅಂತಿಮ ದರ್ಶನ,

9.15ಕ್ಕೆ ಸೇನಾ ವಿಮಾನದಲ್ಲಿ ಎಚ್‌ಎಲ್‌ಗೆ ಪಯಣ,

10.00ಕ್ಕೆ ಆಂಬ್ಯುಲೆನ್ಸ್‌ ನಲ್ಲಿ ಕಂಠೀರವ ಕ್ರೀಡಾಂಗಣಕ್ಕೆ,

ಬಳಿಕ ಹಡ್ಸನ್‌ ಸರ್ಕಲ್‌ನಿಂದ ಕಂಠೀರವ ಸ್ಟುಡಿಯೊಗೆ ಮೆರವಣಿಗೆ,

ಮೂರು ತಾಸಿನ ಮೆರವಣಿಗೆ ಬಳಿಕ ಸ್ಟುಡಿಯೊದಲ್ಲಿ ಅಂತ್ಯಕ್ರಿಯೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ