ಆ್ಯಪ್ನಗರ

ಮೂಲಸೌಕರ್ಯ ವೃದ್ಧಿಗೆ ತಡೆ: ನೌಕಾಪಡೆ ವಿರುದ್ಧ ಗಡ್ಕರಿ ಗರಂ

ಮುಂಬಯಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡೆತಡೆ ಒಡ್ಡುತ್ತಿರುವುದಕ್ಕಾಗಿ ನೌಕಾಪಡೆಯನ್ನು ಕೇಂದ್ರ ನೌಕಾಯಾನ ಸಚಿವ ನಿತಿನ್‌ ಗಡ್ಕರಿ ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web 12 Jan 2018, 9:33 am
ಮುಂಬಯಿ: ಮುಂಬಯಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡೆತಡೆ ಒಡ್ಡುತ್ತಿರುವುದಕ್ಕಾಗಿ ನೌಕಾಪಡೆಯನ್ನು ಕೇಂದ್ರ ನೌಕಾಯಾನ ಸಚಿವ ನಿತಿನ್‌ ಗಡ್ಕರಿ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web gadkari blasts navy for infrastructure roadblocks
ಮೂಲಸೌಕರ್ಯ ವೃದ್ಧಿಗೆ ತಡೆ: ನೌಕಾಪಡೆ ವಿರುದ್ಧ ಗಡ್ಕರಿ ಗರಂ


'ಮಲಬಾರ್‌ ಹಿಲ್‌ನಲ್ಲಿ ತೇಲುವ ಜೆಟ್ಟಿಯ ನಿರ್ಮಾಣದ ಪ್ರಸ್ತಾವ ನನ್ನ ಮುಂದೆ ಬಂದಿತ್ತು. ಆದರೆ ನೌಕಾಪಡೆಯ ಆಕ್ಷೇಪಗಳಿಂದಾಗಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಮಲಬಾರ್‌ ಹಿಲ್‌ನಲ್ಲಿ ನೌಕಾಪಡೆ ಎಲ್ಲಿದೆ? ಅಭಿವೃದ್ಧಿ ಯೋಜನೆಗಳಿಗೆ ತಡೆಯೊಡ್ಡುವ ಮಾನಸಿಕ ಪ್ರವೃತ್ತಿ ಬೆಳೆದುಬಂದಿದೆ' ಎಂದು ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬಲ್ಲಾರ್ಡ್ ಪಿಯೆರ್‌ನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

'ನೀವು ಪ್ರಸ್ತಾವವನ್ನು ನನ್ನ ಮುಂದೆ ತನ್ನಿ. ಅಧಿಕಾರದಲ್ಲಿರುವವರು ನಾವು; ನೌಕಾಪಡೆಯೂ ಅಲ್ಲ, ರಕ್ಷಣಾ ಸಚಿವಾಲಯವೂ ಅಲ್ಲ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡಲು ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪ್ರಧಾನಿ ರಚಿಸಿದ್ದಾರೆ. ನಾನು ಅದಕ್ಕೆ (ಜೆಟ್ಟಿ) ಅನುಮತಿ ನೀಡುತ್ತೇನೆ. ಹಲವು ಯೋಜನೆಗಳಿಗೆ ಅವುಗಳ ಅಜೆಂಡಾವನ್ನು ನೋಡಿಯೇ ಅನುಮತಿ ನೀಡಲಾಗಿದೆ' ಎಂದು ಗಡ್ಕರಿ ನುಡಿದರು.

ನೌಕಾಪಡೆ ಗಡಿಗಳನ್ನು ಭದ್ರಪಡಿಸಬೇಕೇ ಹೊರತು, ಯೋಜನೆಗಳಿಗೆ ಅಡ್ಡಿಪಡಿಸುವುದಲ್ಲ ಎಂದು ಅವರು ನುಡಿದರು.

'ನೌಕಾಪಡೆ ಅಧಿಕಾರಿಗಳು ದಕ್ಷಿಣ ಮುಂಬಯಿಯಲ್ಲಿ ವಸತಿ ಯೋಜನೆಗಾಗಿ ನಿವೇಶನ ಕೇಳಿಕೊಂಡು ಬಂದರು. ದಕ್ಷಿಣ ಮುಂಬಯಿಯಲ್ಲಿ ಅವರಿಗೇಕೆ ಭೂಮಿ ನೀಡಬೇಕು? ಅಲ್ಲಿ ಒಂದಿಂಚು ಜಾಗವನ್ನೂ ನಾನು ನೀಡಲಾರೆ' ಎಂದು ಕೇಂದ್ರ ಸಚಿವರು ನೌಕಾಪಡೆಯನ್ನು ತರಾಟೆಗೆ ತೆಗೆದುಕೊಂಡರು.

ನೌಕಾಪಡೆಯನ್ನು ನಾವು ಗೌರವಿಸುತ್ತೇವೆ. ಅದು ಇರಬೇಕಾದುದು ಪಾಕ್‌ ಗಡಿಯಲ್ಲಿ. ಅಲ್ಲಿ ಗಸ್ತು ನಡೆಸುವುದು ಬಿಟ್ಟು ಮುಂಬಯಿನಲ್ಲಿ ಜಾಗ ಕೇಳುವುದು ನೌಕಾಪಡೆಯ ಕೆಲಸವಲ್ಲ ಎಂದು ಗಡ್ಕರಿ ತಾಕೀತು ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ