ಹೊಸದಿಲ್ಲಿ: ದಶಕದ ಹಿಂದೆ ನಡೆದ ಬರಾಕ್ ಕ್ಷಿಪಣಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪದಿಂದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಮುಕ್ತಿ ದೊರಕಿದೆ.
ಫರ್ನಾಂಡಿಸ್ ಅವರು ರಕ್ಷಣಾ ಸಚಿವರಾಗಿದ್ದಾಗ ನಡೆದ 1,150 ಕೋಟಿ ರೂ.ಗಳ ಕ್ಷಿಪಣಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಫರ್ನಾಂಡಿಸ್ ಮತ್ತು ಆಗಿನ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುಶೀಲ್ ಕುಮಾರ್ ವಿರುದ್ಧ ಆರೋಪ ದಾಖಲಿಸಲಾಗಿತ್ತು.
ಆದರೆ, ಇವರಿಬ್ಬರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳಿಲ್ಲ ಎಂಬ ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡುವಂತೆ ವಿಶೇಷ ಸಿಬಿಐ ಕೋರ್ಟ್ಗೆ ಸಿಬಿಐ ಮನವಿ ಸಲ್ಲಿಸಿತ್ತು. ವಿಶೇಷ ಸಿಬಿಐ ನ್ಯಾಯಾಧೀಶರ ಗುರುದೀಪ್ ಸಿಂಗ್ ಅವರು ತನಿಖಾ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿದ್ದಾರೆ.
ಈ ಪ್ರಕರಣದಲ್ಲಿ ಫರ್ನಾಂಡಿಸ್ ಆಪ್ತರಾದ ಜಯಾ ಜೇಟ್ಲಿ, ಶಸ್ತ್ರಾಸ್ತ್ರ ದಲ್ಲಾಳಿ ಸುರೇಶ್ ನಂದಾ, ಆಗಿನ ಸಮತಾ ಪಕ್ಷದ ಖಜಾಂಚಿ ರಾಕೇಶ್ ಕುಮಾರ್ ಜೈನ್ ಮತ್ತು ಮೆಸಸ್ ಇಸ್ರೇಲ್ ಏರ್ಕ್ರಾಫ್ಟ್ ಇಂಡಸ್ಟ್ರೀಸ್ ಲಿಮಿಟೆಡ್ನ ಅನಾಮಧೇಯ ಅಧಿಕಾರಿಗಳು ಆರೋಪಿಗಳಾಗಿದ್ದಾರೆ. 2000ನೇ ಇಸವಿಯಲ್ಲಿ ನಡೆದ ಈ ಖರೀದಿಯಲ್ಲಿ ಫರ್ನಾಂಡಿಸ್ ಆಪ್ತರಾದ ಜಯಾ ಜೇಟ್ಲಿ ಅವರು 2 ಕೋಟಿ ರೂ. ಲಂಚ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.