ಆ್ಯಪ್ನಗರ

Ghulam Nabi Azad: ಶಸ್ತ್ರಾಸ್ತ್ರ ತ್ಯಜಿಸಿ ಎಂದು ಉಗ್ರರಿಗೆ ಮನವಿ ಮಾಡಿದ ಆಜಾದ್‌ಗೆ ಜೀವ ಬೆದರಿಕೆ

Ghulam Nabi Azad: ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಹೊಸ ಪಕ್ಷ ಸ್ಥಾಪಿಸುವ ಉತ್ಸಾಹದೊಂದಿಗೆ ನಿರಂತರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಉಗ್ರ ಸಂಘಟನೆಯೊಂದು ಕೊಲೆ ಬೆದರಿಕೆ ಒಡ್ಡಿದೆ.

Edited byಅಮಿತ್ ಎಂ.ಎಸ್ | Vijaya Karnataka Web 16 Sep 2022, 11:50 am

ಹೈಲೈಟ್ಸ್‌:

  • ಗುಲಾಂ ನಬಿ ಆಜಾದ್‌ಗೆ ಟಿಆರ್‌ಎಫ್‌ನಿಂದ ಜೀವ ಬೆದರಿಕೆ
  • ಶಸ್ತ್ರಾಸ್ತ್ರ ತ್ಯಜಿಸುವಂತೆ ಕಾಶ್ಮೀರದ ಉಗ್ರರಿಗೆ ಆಜಾದ್ ಮನವಿ
  • ಶಾ ಆಣತಿಯಂತೆ ಆಜಾದ್ ಮಾಡುತ್ತಿರುವುದಾಗಿ ಉಗ್ರರ ಆರೋಪ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ghulam nabi azad
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಂತ ಪಕ್ಷ ಸ್ಥಾಪನೆಗೆ ತಯಾರಿ ನಡೆಸಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು, ಶಸ್ತ್ರಾಸ್ತ್ರ ತ್ಯಜಿಸುವಂತೆ ಉಗ್ರರಿಗೆ ಮನವಿ ಮಾಡಿದ್ದಾರೆ. ಬಂದೂಕುಗಳಿಂದ ವಿನಾಶ ಮತ್ತು ಜನರಿಗೆ ಸಂಕಷ್ಟಗಳನ್ನಷ್ಟೇ ಉಂಟುಮಾಡುತ್ತವೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಉಗ್ರ ಸಂಘಟನೆಯ ಘಟಕವೊಂದು ಆಜಾದ್ ಅವರಿಗೆ ಜೀವ ಬೆದರಿಕೆ ಒಡ್ಡಿದೆ. ಆಜಾದ್ ಅವರು ಒಬ್ಬ ದ್ರೋಹಿಯಾಗಿದ್ದು, ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅದು ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ಸಿಗುವುದು ಸಾಧ್ಯವಿಲ್ಲ: ಗುಲಾಂ ನಬಿ ಆಜಾದ್

ನಿರಂತರ ಎನ್‌ಕೌಂಟರ್‌ಗಳು ನಡೆಯುವ ಹಾಗೂ ಸ್ಥಳೀಯ ಉಗ್ರ ನೇಮಕಾತಿಗಳು ವ್ಯಾಪಕವಾಗಿ ನಡೆಯುವ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಆಜಾದ್, ಬಂದೂಕು ಸಂಸ್ಕೃತಿಯು ಅನೇಕ ಪೀಳಿಗೆಗಳಿಗೆ ಹಾನಿ ಉಂಟುಮಾಡಿದೆ. ಕಾಶ್ಮೀರ ಕಣಿವೆಯಲ್ಲಿ ಮತ್ತಷ್ಟು ಯುವಜನರು ಸಾಯುವುದನ್ನು ನೋಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

"ಗನ್‌ಗಳನ್ನು ಕೈಗೆತ್ತಿಕೊಂಡಿರುವವರಿಗೆ ನನ್ನ ಮನವಿ, ನೆನಪಿಡಿ, ಈ ಗನ್ ಪರಿಹಾರವಲ್ಲ. ಬಂದೂಕು ಕೇವಲ ವಿನಾಶ ಮತ್ತು ವಿಪತ್ತು ತರುತ್ತದೆಯಷ್ಟೇ" ಎಂದು ಆಜಾದ್ ಹೇಳಿದ್ದಾರೆ.


ಅನಂತ್‌ನಾಗ್‌ನ ದಾಲ್ ಬಂಗಲೆಯಲ್ಲಿ ನೆರೆದಿದ್ದ ಬೃಹತ್ ಜನಸಮೂಹವು ಆಜಾದ್ ಅವರ ಹೊಸ ರಾಜಕೀಯ ಪ್ರಯತ್ನಕ್ಕೆ ಬೆಂಬಲದ ಪ್ರತಿಜ್ಞೆ ಮಾಡಿತು.
Ghulam Nabi Azad: ಕಾಂಗ್ರೆಸ್‌ಗೆ ನನ್ನ ರಕ್ತ ಕೊಟ್ಟಿದ್ದೇನೆ: ಹೊಸ ಪಕ್ಷ ಘೋಷಣೆ ವೇಳೆ ಆಜಾದ್ ಹೇಳಿಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದಕ್ಕೆ ಪಾಕಿಸ್ತಾನವನ್ನು ದೂಷಿಸಿದ ಆಜಾದ್, ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರವು ಸಾವಿರಾರು ಮಹಿಳೆಯರನ್ನು ವಿಧವೆಯರನ್ನಾಗಿಸಿದೆ ಮತ್ತು ಲಕ್ಷಾಂತರ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.

ರಕ್ತಪಾತ ಬಯಸುವುದಿಲ್ಲ
"ಮತ್ತಷ್ಟು ರಕ್ತಪಾತ ಹಾಗೂ ಯುವಜನರ ಮತ್ತಷ್ಟು ಮೃತದೇಹಗಳನ್ನು ಕಾಣಲು ನಾನು ಬಯಸುವುದಿಲ್ಲ. ತನ್ನ ಸ್ವಂತ ಮನೆಯನ್ನು ಸುವ್ಯವಸ್ಥಿತವಾಗಿ ನೋಡಿಕೊಳ್ಳಲು ಸಾಧ್ಯವಾಗದ ಪರಾಜಿತಭಾವವಾದಿ ದೇಶವು ನಮ್ಮ ರಾಜ್ಯ ಮತ್ತು ದೇಶದಲ್ಲಿ ಹಾನಿ ಉಂಟುಮಾಡಲು ಶತಪ್ರಯತ್ನ ಮಾಡುತ್ತಿದೆ" ಎಂದು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ.

ಚುನಾವಣೆಯನ್ನು ಗೆಲ್ಲಲು ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಇತರೆ ನಾಯಕರಂತೆ ತಾವಲ್ಲ ಎಂದ ಆಜಾದ್, "ನಾನು ಭಾವನೆಗಳು ಮತ್ತು ಸುಳ್ಳು ಘೋಷಣೆಗಳ ಮೂಲಕ ಮೋಸಗೊಳಿಸುವುದಿಲ್ಲ" ಎಂದಿದ್ದಾರೆ.
Ghulam Nabi Azad: ರಾಹುಲ್ ಗಾಂಧಿ ಅವರ ಚೌಕಿದಾರ್‌ ಚೋರ್‌ ಅಭಿಯಾನ ವಿರೋಧಿಸಿದ್ದೆ: ಆಜಾದ್‌

ಭಯೋತ್ಪಾದನಾ ಗುಂಪೊಂದು ತಮಗೆ ಜೀವ ಬೆದರಿಕೆ ಒಡ್ಡಿದೆ. ಆದರೆ ಶಾಂತಿಯ ಹಾದಿ ಸ್ಥಾಪಿಸುವ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಆಜಾದ್‌ಗೆ ಬೆದರಿಕೆ ಪತ್ರ
ಪಾಕಿಸ್ತಾನ ಬೆಂಬಲಿತ ಲಷ್ಕರ್ ಎ ತಯಬಾ ಉಗ್ರ ಸಂಘಟನೆಗೆ ಸಂಬಂಧಿಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಆಜಾದ್ ಅವರಿಗೆ ಜೀವ ಬೆದರಿಕೆ ಒಡ್ಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟಿಆರ್‌ಎಫ್ ಈ ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಿದೆ. ಕಾಂಗ್ರೆಸ್‌ ವಿರುದ್ಧ ಸಿಡಿದೆದ್ದು, ಈಗ ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಆಜಾದ್ ಅವರ ನಡೆಯು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಯೋಜನೆಯ ಫಲ ಎಂದು ಸಂಘಟನೆ ಹೇಳಿದೆ.
Ghulam Nabi Azad: ಸೋನಿಯಾ ಗಾಂಧಿಗೆ ಗುಲಾಂ ನಬಿ ಆಜಾದ್ ಬರೆದ ಪತ್ರದಲ್ಲೇನಿದೆ? ರಾಹುಲ್ ವಿರುದ್ಧ ಕೋಪಕ್ಕೆ ಕಾರಣವೇನು?

ತನ್ನ ರಾಜಕೀಯ ಕಾರ್ಯಸೂಚಿಗಾಗಿ ಬಿಜೆಪಿಯು ಕಾಶ್ಮೀರಿ ಪಂಡಿತರನ್ನು ಸ್ಥಳಾಂತರಿಸಿದೆ. ಗುಲಾಂ ನಬಿ ಆಜಾದ್ ಅವರು ಬಿಜೆಪಿಯ 'ಬಿ' ಪ್ಲ್ಯಾನ್ ಆಗಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ರಾಹುಲ್ ಭಟ್ ಕೂಡ ಅಜಿತ್ ದೋವಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಟಿಆರ್‌ಎಫ್ ಪ್ರತಿಪಾದಿಸಿದ್ದಾರೆ.

ಆಜಾದ್ ಪ್ರತಿಕ್ರಿಯೆತಾವು ಅಜಿತ್ ದೋವಲ್ ಅವರ ನಿರ್ದೇಶನದಂತೆ ಕೆಲಸ ಮಾಡುತ್ತಿರುವುದಾಗಿ ಟಿಆರ್‌ಎಫ್ ಮಾಡಿದ ಆರೋಪವನ್ನು ಗುಲಾಂ ನಬಿ ಆಜಾದ್ ನಿರಾಕರಿಸಿದ್ದಾರೆ. "ನಾನು ನನ್ನ ಜೀವಮಾನದಲ್ಲಿಯೇ ದೋವಲ್ ಅವರನ್ನು ಭೇಟಿ ಮಾಡಿಲ್ಲ. ದೇವರ ಮೇಲೆ ಆಣೆ ಮಾಡುತ್ತೇನೆ. ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ನಿಜ. ಅವರು ಗೃಹ ಸಚಿವರು ಮತ್ತು ನಾನು ಸಂಸತ್‌ನಲ್ಲಿದ್ದೆ. ಇದು ನನ್ನ ಕೆಲಸದ ಭಾಗ. ನಾನು ವಿವಿಧ ಪಕ್ಷಗಳ ಜನರನ್ನು ಭೇಟಿ ಮಾಡುತ್ತೇನೆ" ಎಂದಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ