ಆ್ಯಪ್ನಗರ

ನಿತೀಶ್‌ಗೆ ಕಾಂಗ್ರೆಸ್‌ ಅಧ್ಯಕ್ಷಸ್ಥಾನ ನೀಡಿ: ಗುಹಾ

ಕಾಂಗ್ರೆಸ್‌ ಅಧ್ಯಕ್ಷತೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ವಹಿಸಬೇಕು. ಇದರಿಂದ ಕಾಂಗ್ರೆಸ್‌ಗೂ, ನಿತೀಶ್‌ ಕುಮಾರ್‌ ಅವರಿಗೂ ಇಬ್ಬರಿಗೂ ಒಳ್ಳೆದಾಗುತ್ತೆಎಂದು ಇತಿಹಾಸಜ್ಞ ರಾಮಚಂದ್ರ ಗುಹಾ ಸಲಹೆ ನೀಡಿದ್ದಾರೆ.

ಏಜೆನ್ಸೀಸ್ 13 Jul 2017, 8:36 am

ಲಾಲು ಜತೆ ಮೈತ್ರಿ ಅಂತ್ಯ ಸಾಧ್ಯತೆ | ಬಿಜೆಪಿ ಸೇರಿದರೆ ನಷ್ಟವೇ ಹೆಚ್ಚು | ಕುತೂಹಲದ ಘಟ್ಟದಲ್ಲಿ ಬಿಹಾರ ರಾಜಕೀಯ

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷತೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ವಹಿಸಬೇಕು. ಇದರಿಂದ ಕಾಂಗ್ರೆಸ್‌ಗೂ, ನಿತೀಶ್‌ ಕುಮಾರ್‌ ಅವರಿಗೂ ಇಬ್ಬರಿಗೂ ಒಳ್ಳೆದಾಗುತ್ತೆಎಂದು ಇತಿಹಾಸಜ್ಞ ರಾಮಚಂದ್ರ ಗುಹಾ ಸಲಹೆ ನೀಡಿದ್ದಾರೆ.

Vijaya Karnataka Web give nitish kumar a chance save congress ramachandra guha
ನಿತೀಶ್‌ಗೆ ಕಾಂಗ್ರೆಸ್‌ ಅಧ್ಯಕ್ಷಸ್ಥಾನ ನೀಡಿ: ಗುಹಾ


'ಇಂಡಿಯ ಆಫ್ಟರ್‌ ಗಾಂಧಿ' ಪುಸ್ತಕದ 10ನೇ ವರ್ಷದ ಆವೃತ್ತಿ ಬಿಡುಗಡೆ ವೇಳೆ ಮಾತನಾಡಿದ ಅವರು, ''ಕಾಂಗ್ರೆಸ್‌ ನಾಯಕನಿಲ್ಲದ ಪಕ್ಷ, ನಿತೀಶ್‌ ಕುಮಾರ್‌ ಪಕ್ಷವಿಲ್ಲದ ನಾಯಕ,'' ಎಂದು ಹೇಳಿದ್ದಾರೆ.

ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್‌ ಕುಟುಂಬದ ಮೇಲೆ ನಡೆದ ಸಿಬಿಐ ದಾಳಿಯು ಬಿಹಾರದ ಮಹಾಮೈತ್ರಿಕೂಟದಲ್ಲಿ ಬಿರುಗಾಳಿ ಎಬ್ಬಿಸಿದೆ.

ಬಿಜೆಪಿಯ ಬಾಹ್ಯ ಬೆಂಬಲದ ಭರವಸೆ ಬೆನ್ನಲ್ಲೇ, ಲಾಲು ಜತೆಗಿನ ಮೈತ್ರಿಯನ್ನು ಮುರಿದು ನಿತೀಶ್‌ ಹೊರಬರುವ ಸೂಚನೆ ಕಾಣುತ್ತಿದೆ.

ಇದರ ನಡುವೆಯೇ ನಿತೀಶ್‌ ಬಿಜೆಪಿ ಸೇರುವುದರಿಂದ ಆಗಬಹುದಾದ ಲಾಭ ನಷ್ಟಗಳ ಬಗ್ಗೆ ಬಿಹಾರ ರಾಜಕೀಯ ವಲಯದಲ್ಲಿ ಭಾರಿ ಲೆಕ್ಕಾಚಾರ ಶುರುವಾಗಿದೆ. ಇದರ ಪರಿಣಾಮವು ರಾಷ್ಟ್ರ ರಾಜಕೀಯದವರೆಗೂ ಇರಲಿದೆ ಎಂದು ವಿಶ್ಲೇಷಿಸಲಾಗಿದೆ.

ಮಧ್ಯಾಂತರ ಚುನಾವಣೆ ಎದುರಿಸುವುದು ಅಥವಾ ಬಿಜೆಪಿ ಜತೆ ಮೈತ್ರಿ ಬೆಳೆಸಿ ಸಿಎಂ ಗಾದಿ ಉಳಿಸಿಕೊಳ್ಳುವುದು ಸದ್ಯಕ್ಕೆ ನಿತೀಶ್‌ ಮುಂದೆ ಇರುವ ಎರಡು ಆಯ್ಕೆಗಳು. ಬಿಹಾರ ಸಿಎಂ ಎರಡನೆಯದಕ್ಕೇ ಹೆಚ್ಚು ಒತ್ತು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಆದರೆ, ಹೀಗೆ ಮಾಡುವುದರಿಂದ ನಿತೀಶ್‌ ತಾತ್ಕಾಲಿಕವಾಗಿ ರಾಜ್ಯದಲ್ಲಿ ಬಿಕ್ಕಟ್ಟು ಶಮನ ಮಾಡಿದರೂ, ದೀರ್ಘಕಾಲೀನ ರಾಜಕೀಯ ಭವಿಷ್ಯದಲ್ಲಿ ಇದರಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚಾಗುವ ಸಾಧ್ಯತೆಯಿದೆ.

'ಮಿಸ್ಟರ್‌ ಕ್ಲೀನ್‌' ಇಮೇಜ್‌ ಹೊಂದಿರುವ ಮತ್ತು 2015ರ ಚುನಾವಣೆಯಲ್ಲಿ ಮೋದಿ ಅಲೆಯನ್ನೂ ಗೆದ್ದ ನಿತೀಶ್‌ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪ್ರಭಾವಿ ನಾಯಕನಾಗಿ ಹೊರಹೊಮ್ಮುಲು ಅವಕಾಶವಿದೆ. ಪ್ರಧಾನಿ ಹುದ್ದೆ ಮೇಲೆ ಕಣ್ಣಿಲ್ಲ ಎಂದು ನಿತೀಶ್‌ ಈಗಾಗಲೇ ಘೋಷಿಸಿದ್ದರೂ, ಮೋದಿ ಅಲೆ ವಿಫಲವಾದರೆ ನಿತೀಶ್‌ ಅವರಿಗೆ ಚಾನ್ಸ್‌ ಇದ್ದೇ ಇದೆ. ಆದರೆ, ಬಿಜೆಪಿ ಸೇರುವುದರಿಂದ ಈ ಅವಕಾಶದಿಂದ ನಿತೀಶ್‌ ವಂಚಿತರಾಗುವುದಷ್ಟೇ ಅಲ್ಲದೆ, ಅವರ ರಾಜಕೀಯ ವ್ಯಾಪ್ತಿಯೂ ಬಿಹಾರಕ್ಕಷ್ಟೇ ಸೀಮಿತಗೊಳ್ಳಲಿದೆ.

3ನೇ ಬಾರಿ ಸಿಎಂ ಕುರ್ಚಿ ಅಲಂಕರಿಸಿರುವ ನಿತೀಶ್‌, ರಾಜ್ಯ ರಾಜಕಾರಣದಲ್ಲಿ ತುತ್ತ ತುದಿಗೆ ತಲುಪಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ತಪ್ಪಲಿದೆ.

ನಿತೀಶ್‌ ಜತೆಗಿನ ಹಳೆಯ ಮೈತ್ರಿ ವೇಳೆ ಆರ್‌ಎಸ್‌ಎಸ್‌ ನೆರವಿನಿಂದ ಬಿಜೆಪಿ ಬಿಹಾರದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದು, ಬದಲಾದ ಪರಿಸ್ಥಿತಿಯಲ್ಲಿ ಲಾಲು ಬಳಿಕ ಎರಡನೇ ಸ್ಥಾನ ಪಡೆಯುವ ಸಾಮರ್ಥ್ಯ‌ ಗಳಿಸಿದೆ.

ಜಾತಿ ಆಧಾರದಲ್ಲೂ ಕೇವಲ ಶೇ. 6-7ರಷ್ಟು ಕುಮ್ರಿ ಮತ್ತು ಕೊಯಿರಿ ವೋಟ್‌ಬ್ಯಾಂಕ್‌ ಹೊಂದಿರುವ ನಿತೀಶ್‌ಗೆ 2019ರ ಲೋಕಸಭೆ ಮತ್ತು 2020ರ ವಿಧಾನಸಭೆ ಚುನಾವಣೆಯಲ್ಲಿ ಇದರಿಂದ ಭಾರಿ ಹೊಡೆತ ಬೀಳಲಿದೆ. ಈ ಹಿಂದೆ ಮೋದಿ ವಿರುದ್ಧ ಮತ ಚಲಾವಣೆ ಮಾಡಿದ ಅಲ್ಪಸಂಖ್ಯಾತರ ಬೆಂಬಲವನ್ನೂ ನಿತೀಶ್‌ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೆಲ್ಲದರ ಜತೆಗೆ, ಮಹಾಮೈತ್ರಿಯ ವಿಘಟನೆಯಿಂದಾಗಿ, 'ಮೋದಿ ಮತ್ತು ಬಿಜೆಪಿ'ಯಿಂದ ಮಾತ್ರ ಸ್ಥಿರ ಸರಕಾರ ನೀಡಲು ಸಾಧ್ಯ ಎಂಬ ಕಮಲಪಾಳಯದ ಘೋಷಣೆಯನ್ನು ನಿತೀಶ್‌ ಅಂಗೀಕರಿಸಿದ ಸಂದೇಶ ರವಾನೆಯಾಗುತ್ತದೆ.

ಉತ್ತರವಿಲ್ಲದ ಪ್ರಶ್ನೆಗಳು

* ಲಾಲು ಕುಟುಂಬದ ಮೇಲೆ ಸಿಬಿಐ ದಾಳಿ ಬಳಿಕ 4 ದಿನ ನಿತೀಶ್‌ ಮೌನಕ್ಕೆ ಕಾರಣವೇನು?

* 2013ರಲ್ಲೇ ಲಾಲು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಮೈತ್ರಿಗೆ ಮುನ್ನ ನಿತೀಶ್‌ಗೆ ತಿಳಿದಿರಲಿಲ್ಲವೇ?

ನಿತೀಶ್‌ಗೆ ಸೋನಿಯಾ ಥ್ಯಾಂಕ್ಸ್‌

ಉಪ ರಾಷ್ಟ್ರಪತಿ ಸ್ಪರ್ಧೆಯ ಪ್ರತಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಗೆ ನಿತೀಶ್‌ ಕುಮಾರ್‌ ಬೆಂಬಲ ವ್ಯಕ್ತಪಡಿಸಿದ್ದು, ಇದಕ್ಕಾಗಿ ಕಾಂಗ್ರೆಸ್‌ ಬಿಹಾರ ಸಿಎಂಗೆ ಧನ್ಯವಾದ ಅರ್ಪಿಸಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಹಾಗೂ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಿತೀಶ್‌ಗೆ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ