ಆ್ಯಪ್ನಗರ

ಅಪರಾಧಿಗಳ ತ್ವರಿತ ಪತ್ತೆಗಾಗಿ ಪೊಲೀಸರಿಗೆ 'ಸೀಮಿತ' ಆಧಾರ್‌ ಡೇಟಾ ಒದಗಿಸಿ: ಎನ್‌ಸಿಆರ್‌ಬಿ ಮುಖ್ಯಸ್ಥರ ಕೋರಿಕೆ

ಮೊದಲ ಬಾರಿ ಅಪರಾಧ ಕೃತ್ಯವೆಸಗಿದವರ ಹಾಗೂ ಅಪರಿಚಿತ ಮೃತದೇಹಗಳ ಗುರುತು ಪತ್ತೆಗಾಗಿ ಆಧಾರ್‌ ದಾಖಲೆಗಳ ಸೀಮಿತ ಬಳಕೆಗೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಅಪರಾಧ ದಾಖಳೆಗಳ ಬ್ಯೂರೋ (ಎನ್‌ಸಿಆರ್‌ಬಿ) ನಿರ್ದೇಶಕ ಈಶ್ ಕುಮಾರ್‌ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದಾರೆ.

Vijaya Karnataka Web 22 Jun 2018, 9:44 am
ಹೈದರಾಬಾದ್‌: ಮೊದಲ ಬಾರಿ ಅಪರಾಧ ಕೃತ್ಯವೆಸಗಿದವರ ಹಾಗೂ ಅಪರಿಚಿತ ಮೃತದೇಹಗಳ ಗುರುತು ಪತ್ತೆಗಾಗಿ ಆಧಾರ್‌ ದಾಖಲೆಗಳ ಸೀಮಿತ ಬಳಕೆಗೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಅಪರಾಧ ದಾಖಳೆಗಳ ಬ್ಯೂರೋ (ಎನ್‌ಸಿಆರ್‌ಬಿ) ನಿರ್ದೇಶಕ ಈಶ್ ಕುಮಾರ್‌ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದಾರೆ.
Vijaya Karnataka Web Aadhaar


ಆಧಾರ್‌ನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಹಾಗೂ ನಾಗರಿಕರ ಖಾಸಗಿತನದ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ಕುಮಾರ್‌ ಅವರು ಈ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಅಖಲ ಭಾರತ ಬೆರಳಚ್ಚುಗಳ ಬ್ಯೂರೋ ನಿರ್ದೇಶಕರ ಸಮ್ಮೇಳನದಲ್ಲಿ ಗುರುವಾರ ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ 50 ಲಕ್ಷ ಕೇಸುಗಳು ದಾಖಲಾಗುತ್ತಿದ್ದು ಅವುಗಳಲ್ಲಿ ಶೇ 80-85ರಷ್ಟು ಪೊಲೀಸ್‌ ದಾಖಲೆಗಳಲ್ಲಿ ಇಲ್ಲದವರು ಮೊದಲ ಬಾರಿ ನಡೆಸಿದ ಅಪರಾಧ ಕೃತ್ಯಗಳು; ಅಲ್ಲದೆ 40,000ಕ್ಕೂ ಅಧಿಕ ಅಪರಿಚಿತ ಮೃತದೇಹಗಳು ಪ್ರತಿವರ್ಷ ಪತ್ತೆಯಾಗುತ್ತಿವೆ ಎಂದು ವಿವರಿಸಿದರು.

'ಆಧಾರ್‌ ಮಾಹಿತಿಗಳು ಲಭ್ಯವಾದರೆ ಈ ಮೃತದೇಹಗಳ ಗುರುತು ಪತ್ತೆ ಹಾಗೂ ಸಂಬಂಧಿಕರಿಗೆ ಒಪ್ಪಿಸುವ ಪ್ರಕ್ರಿಯೆ ಸುಲಭವಾಗಬಹುದು' ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹಖಾತೆ ರಾಜ್ಯಸಚಿವ ಹಂಸರಾಜ್‌ ಅಹಿರ್‌, ಸಚಿವಾಲಯದಲ್ಲಿ ಚರ್ಚಿಸಿದ ಬಳಿಕ ಕೈದಿಗಳನ್ನು ಗುರುತಿಸುವ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಎಲ್ಲಾ ರಾಜ್ಯಗಳ ಬೆರಳಚ್ಚು ಬ್ಯೂರೋಗಳನ್ನು ಆಧುನೀಕರಣಗೊಳಿಸುವ ಯೋಜನೆ ಅಗತ್ಯವಿದೆ. ಆ ಮೂಲಕ ಹೆಚ್ಚಿನ ಅಪರಾಧ ಸ್ಥಳಗಳಿಗೆ ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಬಹುದು ಎಂದು ಎನ್‌ಸಿಆರ್‌ಬಿ ನಿರ್ದೇಶಕರು ನುಡಿದರು.

'ದೇಶಾದ್ಯಂತ ಪ್ರತಿ ವರ್ಷ 50 ಲಕ್ಷ ಕೇಸುಗಳು ದಾಖಲಾದರೂ ಬೆರಳಚ್ಚು ತಜ್ಞರು ಕೇವಲ 55,000 ಅಪರಾಧ ಸ್ಥಳಗಳಿಗೆ ಮಾತ್ರ ಭೇಟಿ ನೀಡಲು ಸಾಧ್ಯವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬೆರಳಚ್ಚು ಸಂಗ್ರಹ ಸಿಬ್ಬಂದಿಯ ತೀವ್ರ ಕೊರತೆ ಹಾಗೂ ಅಗತ್ಯ ಉಪಕರಣಗಳು ಮತ್ತು ಪ್ರಯೋಗಾಲಯಗಳ ಕೊರತೆಯೇ ಇದಕ್ಕೆ ಕಾರಣ. ಹೀಗಾಗಿ ಎಲ್ಲ ರಾಜ್ಯಗಳ ಬೆರಳಚ್ಚು ಬ್ಯೂರೋಗಳನ್ನು ಆಧುನೀಕರಣಗೊಳಿಸಲು ಗೃಹಸಚಿವಾಲಯ ತುರ್ತು ಯೋಜನೆ ರೂಪಿಸುವ ಅಗತ್ಯವಿದೆ' ಎಂದು ಈಶ್‌ ಕುಮಾರ್ ಒತ್ತಾಯಿಸಿದರು.

ಅಪರಾಧಿಗಳ ಶೀಘ್ರ ಪತ್ತೆಗೆ ಬೆರಳಚ್ಚು ಗುರುತು ಪ್ರಕ್ರಿಯೆಯನ್ನು ಅಟೊಮೇಶನ್ (ಸ್ವಯಂಚಾಲಿತ) ಗೊಳಿಸಬೇಕೆಂದು ತೆಲಂಗಾಣದ ಡಿಜಿಪಿ ಎಂ. ಮಹೇಂದರ್ ರೆಡ್ಡಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ