ಆ್ಯಪ್ನಗರ

ಏಕರೂಪ ನಾಗರಿಕ ಸಂಹಿತೆಗೆ ಇನ್ನೆಷ್ಟು ದಿನ ಬೇಕೋ : ಸುಪ್ರೀಂ ಅಸಮಾಧಾನ

ಹಿಂದೂ ಕಾನೂನು ಸಂಹಿತೆ ಜಾರಿಯಾಗಿ 63 ವರ್ಷ ಕಳೆದಿದ್ದರೂ, ದೇಶದ ಸಮಸ್ತ ಜನತೆಗೆ ಅನ್ವಯಿಸುವ ಏಕರೂಪ ಕಾನೂನುಗಳನ್ನು ಜಾರಿಗೆ ತರುವಲ್ಲಿ ಈ ಹಿಂದಿನ ಎಲ್ಲ ಸರ್ಕಾರಗಳು ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಈ ಮುಲಕ ಏಕರೂಪ ನಾಗರಿಕ ಸಂಹಿತೆ ಮತ್ತೆ ರಾಜಕೀಯ ಮುನ್ನೆಲೆಗೆ ಬಂದಿದೆ.

TIMESOFINDIA.COM 14 Sep 2019, 8:43 am
ಹೊಸದಿಲ್ಲಿ: ದೇಶದ ಸಮಸ್ತ ಪ್ರಜೆಗಳಿಗೆ ಅನ್ವಯವಾಗುವಂತೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೊಳಿಸುವಲ್ಲಿ ಈವರೆಗಿನ ಎಲ್ಲ ಸರ್ಕಾರಗಳು ವಿಫಲವಾಗಿರುವ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ. ಹಿಂದೂ ಕಾನೂನು ಸಂಹಿತೆ 1956ರಲ್ಲೇ ಜಾರಿಯಾಗಿವೆ. ಇದಾಗಿ 63 ವರ್ಷ ಕಳೆದರೂ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಯಾವ ಸರ್ಕಾರಗಳಿಗೂ ಸಾಧ್ಯವಾಗಿಲ್ಲ ಎಂದಿದೆ.
Vijaya Karnataka Web supreme court


ಗೋವಾದಲ್ಲಿ ಜಾರಿಯಲ್ಲಿರುವ ಏಕರೂಪ ನಾಗರಿಕ ಸಂಹಿತೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಭಾಗವಾಗಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಆಸ್ತಿಯ ಅಧಿಕಾರ ಹಸ್ತಾಂತರ ಮತ್ತು ಅನುವಂಶೀಯತೆಗೆ ಸಂಬಂಧಿಸಿದಂತೆ ಗೋವಾ ಪ್ರಜೆಗಳು, ಗೋವಾ ರಾಜ್ಯದಿಂದ ಹೊರಗೆ ನೆಲೆಸಿದ್ದರೂ ಕೂಡ ಗೋವಾದಲ್ಲಿ ಜಾರಿಯಲ್ಲಿರುವ 'ಪೋರ್ಚುಗೀಸ್‌ ಸಿವಿಲ್‌ ಕೋಡ್‌' ಅನ್ವಯವಾಗಲಿದೆ ಎಂಬ ಐತಿಹಾಸಿ ತೀರ್ಪು ನೀಡಿದೆ. ಈ ತೀರ್ಪಿನ ಭಾಗವಾಗಿ, ಇಡೀ ದೇಶಕ್ಕೆ ಅನ್ವಯವಾಗುವ ಏಕರೂಪ ನಾಗರಿಕ ಕಾನೂನುಗಳ ಅವಶ್ಯಕತೆಯ ಕುರಿತು ಸುಪ್ರೀಂ ಕೋರ್ಟ್‌ ಆಶಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.

ಏಕರೂಪ ನಾಗರಿಕ ಸಂಹಿತೆ ಯಶಸ್ವಿಯಾಗಿರುವುದಕ್ಕೆ ಗೋವಾ ಜ್ವಲಂತ ಉದಾಹರಣೆಯಾಗಿದೆ. ಅಲ್ಲಿ ಮುಸ್ಲಿಂ ಪುರುಷರಿಗೆ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರೂ ಕೂಡ ಅಲ್ಲಿ ಮೌಖಿಕ ತಲಾಖ್‌ (ತ್ರಿವಳಿ ತಲಾಖ್‌) ನೀಡಲು ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ದೀಪಕ್‌ ಗುಪ್ತಾ ತಿಳಿಸಿದ್ದಾರೆ.

ಗೋವಾ ಪ್ರಜೆಗಳು ರಾಜ್ಯದಿಂದ ಹೊರಗೆ ಭಾರತದ ಯಾವುದೇ ಪ್ರದೇಶದಲ್ಲಿ ನೆಲೆಸಿದ್ದರೆ, ಅವರಿಗೆ ಗೋವಾದಲ್ಲಿ ಜಾರಿಯಲ್ಲಿರುವ 1867ರ ಪೋರ್ಚುಗೀಸ್‌ ಸಿವಿಲ್‌ ಕೋಡ್‌ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿ ಜೋಸ್ ಪಾಲೊ ಕೌಟಿನ್ಹೋ ಎಂಬುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿದೆ.

ಏನಿದು ಏಕರೂಪ ನಾಗರಿಗ ಸಂಹಿತೆ: ಸಂವಿಧಾನದ 44ನೇ ವಿಧಿಯ ಅನುಸಾರ, ಅಗತ್ಯ ಬಂದರೆ, ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಅವಕಾಶವಿದೆ. ಭಾರತದ ಸಮಸ್ತ ಪ್ರಜೆಗಳಿಗೆ ಏಕರೂಪದ ನಾಗರಿಕ ಕಾನೂನುಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನಿಸಬೇಕು ಎಂಬ ನಿಬಂಧನೆಯನ್ನು ಅದು ವಿಧಿಸುತ್ತದೆ. ಸರಳವಾಗಿ ಹೇಳುವುದಾದರೆ, ‘ದೇಶವೊಂದರ ನಿವಾಸಿಗಳಾಗಿರುವ ವ್ಯಕ್ತಿಗಳ ಧರ್ಮ, ಜಾತಿ ಮತ್ತು ಪಂಗಡ ಯಾವುದೇ ಆಗಿರಲಿ ಅಂಥ ಎಲ್ಲರನ್ನೂ ಆಳುವ ಒಂದೇ ತೆರನಾದ ಜಾತ್ಯತೀತ ಪೌರ ಕಾನೂನುಗಳು’ ಎಂಬುದು ‘ಏಕರೂಪ ನಾಗರಿಕ ಸಂಹಿತೆ’ ((Uniform Civil Code- UCC) ) ಎಂಬ ಪರಿಭಾಷೆಯ ಅರ್ಥ. ಸಂಹಿತೆಯ ವ್ಯಾಪ್ತಿಯಲ್ಲಿ ಮದುವೆ, ವಿಚ್ಛೇದನ, ದತ್ತುಸ್ವೀಕಾರ ಮತ್ತು ಆಸ್ತಿಪಾಸ್ತಿಯ ಉತ್ತರಾಧಿಕಾರ, ಗಳಿಕೆ ಮತ್ತು ನಿರ್ವಹಣೆಯ ಕುರಿತಾದ ಕಾನೂನುಗಳು ಸೇರಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ