ಆ್ಯಪ್ನಗರ

ಬರಸೆಳೆದು ಅಪ್ಪಿಕೊಂಡ ರಾಜ್ಯಪಾಲರು: ತರುಣಿ

ಲೈಂಗಿಕ ಹಗರಣದ ಕಳಂಕದೊಂದಿಗೆ ಮೇಘಾಲಯ ರಾಜ್ಯಪಾಲ ಹುದ್ದೆಯಿಂದ ಹೊರ ಬಿದ್ದಿರುವ ವಿ.ಷಣ್ಮುಗನಾಥನ್‌ ಅವರ ಅಧಿಕಾರಾವಧಿಯ ಬಾನಗಡಿಗಳು ಇದೀಗ ಒಂದೊಂದಾಗಿ ಹೊರ ಬೀಳತೊಡಗಿವೆ.

ಏಜೆನ್ಸೀಸ್ 28 Jan 2017, 7:34 am

ಹೊಸದಿಲ್ಲಿ: ಲೈಂಗಿಕ ಹಗರಣದ ಕಳಂಕದೊಂದಿಗೆ ಮೇಘಾಲಯ ರಾಜ್ಯಪಾಲ ಹುದ್ದೆಯಿಂದ ಹೊರ ಬಿದ್ದಿರುವ ವಿ.ಷಣ್ಮುಗನಾಥನ್‌ ಅವರ ಅಧಿಕಾರಾವಧಿಯ ಬಾನಗಡಿಗಳು ಇದೀಗ ಒಂದೊಂದಾಗಿ ಹೊರ ಬೀಳತೊಡಗಿವೆ.

ರಾಜ್ಯಭವನದಲ್ಲಿ ಕೆಲಸ ಕೊಡುವುದಾಗಿ ಸಂದರ್ಶನಕ್ಕೆ ಆಹ್ವಾನಿಸಿ ಯುವತಿಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಸಂಗತಿ ಬಯಲಾಗಿದೆ. 'ಸಂದರ್ಶನಕ್ಕೆ ಕರೆ ಬಂದಿದ್ದರಿಂದ ರಾಜ್ಯಭವನಕ್ಕೆ ತೆರಳಿದ್ದೆ. ಆಗ ಖುದ್ದು ಷಣ್ಮುಗನಾಥನ್‌ ಅವರೇ ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೆಗಳು ಅಸಂಬದ್ಧವಾಗಿದ್ದವು... ನನ್ನ ವೈಯಕ್ತಿಕ ಜೀವನದ ಕುರಿತು ಕೇಳಿದರು. ಬಳಿಕ ಬಲವಂತವಾಗಿ ನನ್ನನ್ನು ಸೆಳೆದುಕೊಂಡು ಆಲಂಗಿಸಿದರು, ಬಿಡಿಸಿಕೊಳ್ಳುವ ಯತ್ನದ ನಡುವೆಯೂ ಚುಂಬಿಸಿದರು,' ಎಂದು ಸಂತ್ರಸ್ತ್ರ ಯುವತಿಯೊಬ್ಬರು ಖಾಸಗಿ ವಾಹಿನಿಯೊಂದರ ಜತೆ ನೋವು ಹಂಚಿಕೊಂಡಿದ್ದಾರೆ.

ಈ ಯುವತಿ ನೀಡಿದ ದೂರಿನ ಬಳಿಕ ಎಚ್ಚೆತ್ತ ರಾಜ್ಯಭವನದ 98 ಜನ ಸಿಬ್ಬಂದಿ ರಾಜ್ಯಪಾಲ ಹುದ್ದೆಯ ಘನತೆ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ನೇರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಪ್ರಕರಣದ ಗಂಭೀರತೆಯನ್ನು ವಿವರಿಸಿದ್ದರು. 'ಷಣ್ಮುಗನಾಥನ್‌ ಅವರು ರಾಜ್ಯಭವನವನ್ನು ಯುವತಿಯರ ಕ್ಲಬ್‌ ಆಗಿ ಪರಿವರ್ತಿಸುವ ಮೂಲಕ ಪ್ರತಿಷ್ಠಿತ ಹುದ್ದೆಯ ಘನತೆಗೆ ಚ್ಯುತಿ ತಂದಿದ್ದು ಅವರನ್ನು ತಕ್ಷಣವೇ ವಜಾಗೊಳಿಸಬೇಕು,' ಎಂದು ಸಿಬ್ಬಂದಿ ಕೋರಿದ್ದರು.

ಕಳೆದ ವಾರ ಪ್ರಕರಣ ಕುರಿತು ಕೇಂದ್ರ ಸರ್ಕಾರ ಷಣ್ಮುಗನಾಥನ್‌ ಅವರಿಂದ ಸ್ಪಷ್ಟನೆ ಕೇಳಿತ್ತು. ಅದಾಗಿ ಈ ಬಗ್ಗೆ ಮಾಧ್ಯಮಗಳಿಗೆ ಸುದ್ದಿ ಸೋರಿಕೆಯಾದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದರೊಂದಿಗೆ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು.

ಕಪ್ಪುಚುಕ್ಕೆ ಅಂಟಿಸಿಕೊಂಡು ಅಧಿಕಾರ ತ್ಯಜಿಸಿ ದಿಲ್ಲಿಗೆ ತೆರಳುವ ಮೊದಲು 67 ವರ್ಷದ ಷಣ್ಮುಗನಾಥನ್‌, ಗುವಾಹಟಿಯ ಪ್ರಸಿದ್ಧ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Vijaya Karnataka Web governor shanmuganathan hugged me young lady
ಬರಸೆಳೆದು ಅಪ್ಪಿಕೊಂಡ ರಾಜ್ಯಪಾಲರು: ತರುಣಿ


ರಾಜೀನಾಮೆ ಅಂಗೀಕಾರ:

ರಾಜ್ಯಭವನವನ್ನು ಯುವತಿಯರ ಕ್ಲಬ್‌ ಆಗಿ ಪರಿವರ್ತಿಸಿದ ಆರೋಪಕ್ಕೆ ಗುರಿಯಾಗಿರುವ ಮೇಘಾಲಯ ಮತ್ತು ಅರುಣಾಚಲ ಪ್ರದೇಶದ ರಾಜ್ಯಪಾಲ ವಿ.ಷಣ್ಮುಗನಾಥನ್‌ ಗುರುವಾರ ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಿನ್ನೆ ಅಂಗೀಕರಿಸಿದ್ದು ಅವರ ಸ್ಥಾನಕ್ಕೆ ನೂತನ ರಾಜ್ಯಪಾಲರ ನೇಮಕ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದ್ದಾರೆ.

ಷಣ್ಮುಗನಾಥನ್‌ ನಿರ್ಗಮನದೊಂದಿಗೆ ತೆರವಾದ ಎರಡು ರಾಜ್ಯಗಳ ರಾಜ್ಯಪಾಲ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಮಾಡಲಾಗಿದೆ. 'ಮುಂದಿನ ವ್ಯವಸ್ಥೆ ಆಗುವವರೆಗೆ ಮೇಘಾಲಯ ರಾಜ್ಯಪಾಲ ಹೊಣೆಗಾರಿಕೆಯನ್ನು ಅಸ್ಸಾಂನ ಹಾಲಿ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರಿಗೂ, ಅರುಣಾಚಲ ಪ್ರದೇಶದ ಹೊಣೆಗಾರಿಕೆಯನ್ನು ನಾಗಾಲ್ಯಾಂಡ್‌ ರಾಜ್ಯಪಾಲ ಬಾಲಕೃಷ್ಣ ಆಚಾರ್ಯ ಅವರಿಗೂ ಹೆಚ್ಚುವರಿಯಾಗಿ ವಹಿಸಲಾಗಿದೆ,' ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ಯುವತಿಯರ ವಿಷಯದಲ್ಲಿ ಷಣ್ಮುಗನಾಥನ್‌ ತೀರಾ ಲಘುವಾಗಿ ವರ್ತಿಸುವ ಮೂಲಕ ರಾಜ್ಯಭವನವನ್ನು 'ಯಂಗ್‌ ಲೇಡಿಸ್‌ ಕ್ಲಬ್‌' ಆಗಿ ಪರಿವರ್ತಿಸುವುದರೊಂದಿಗೆ ರಾಜ್ಯಪಾಲ ಹುದ್ದೆಯ ಘನತೆಗೆ ಚ್ಯುತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಭವನದ ಸುಮಾರು ನೂರು ಜನ ಸಿಬ್ಬಂದಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ