ಏಜೆನ್ಸೀಸ್ ಹೊಸದಿಲ್ಲಿ
ಹಲವು ಪರಿಷ್ಕರಣೆಗಳೊಂದಿಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ತ್ರಿವಳಿ ತಲಾಕ್ ನಿಷೇಧ ವಿಧೇಯಕಕ್ಕೆ ಆದಷ್ಟು ಬೇಗ ರಾಜ್ಯಸಭೆಯ ಅನುಮೋದನೆ ಪಡೆಯುವ ತವಕದಲ್ಲಿದ್ದ ಸರಕಾರದ ಪ್ರಯತ್ನ ಸೋಮವಾರ ಈಡೇರಿಲ್ಲ. ನಿರೀಕ್ಷೆಯಂತೆಯೇ ವಿಧೇಯಕವನ್ನು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿ ಗದ್ದಲ ನಡೆಸಿದ್ದರಿಂದ ಯಾವುದೇ ಚರ್ಚೆ ನಡೆಯದೇ ರಾಜ್ಯಸಭೆ ಕಲಾಪ ಬುಧವಾರಕ್ಕೆ ಮುಂದೂಡಿಕೆ ಕಂಡಿತು. ಜ.2ರಂದು ವಿಧೇಯಕ ಚರ್ಚೆಗೆ ಬರಲಿದೆ.
ತಲಾಕ್ ವಿಧೇಯಕ ಮಂಡನೆಗೂ ಮುನ್ನ ಎಐಎಡಿಎಂಕೆ ಸದಸ್ಯರು ಮೇಕೆದಾಟು ಅಣೆಕಟ್ಟು ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದ ಕಲಾಪ ಆರಂಭದಲ್ಲಿ ಎರಡು ಬಾರಿ ಮುಂದೂಡಿಕೆ ಕಂಡಿತ್ತು. ಮಧ್ಯಾಹ್ನದ ಹೊತ್ತಿಗೆ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತಲಾಕ್ ನಿಷೇಧಿಸುವ 'ಮುಸ್ಲಿಂ ಮಹಿಳಾ (ಮದುವೆ ಹಕ್ಕುಗಳ ರಕ್ಷಣೆ) ವಿಧೇಯಕ-2018ಅನ್ನು ಮಂಡಿಸಿದರು. ಇದರ ಬೆನ್ನಲ್ಲೇ ಪ್ರತಿಪಕ್ಷ ಸದಸ್ಯರು, ''ರಾಜ್ಯಸಭೆ ರಬ್ಬರ್ಸ್ಟಾಂಪ್ ಅಲ್ಲ, ಬಹುಚರ್ಚಿತ ವಿಧೇಯಕವನ್ನು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕು,'' ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸುಗಮ ಕಲಾಪಕ್ಕೆ ಮನವಿ ಮಾಡಿಕೊಂಡರೂ ಅದು ಫಲ ನೀಡದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.
''ವಿಧೇಯಕವನ್ನು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಬಹುತೇಕ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದರೂ ಸರಕಾರ ಬೇಡಿಕೆಯನ್ನು ಮನ್ನಿಸುತ್ತಿಲ್ಲ. ಸಮಿತಿಗೆ ಕಳುಹಿಸುವ ಸಂಪ್ರದಾಯ ಬದಿಗೊತ್ತಿ ಕಾನೂನು ಮಾಡಲು ಹೊರಟಿದೆ,'' ಎಂದು ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಕಿಡಿಕಾರಿದರು. ಇದಕ್ಕೆ ಟಿಎಂಸಿ ನಾಯಕ ಡೆರೆಕ್ ಓಬ್ರಿಯಾನ್ ಧ್ವನಿಗೂಡಿಸಿದರು.
ಒಂದು ಹಂತದಲ್ಲಿ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿಜಯ್ ಗೋಯೆಲ್, ''ಸರಕಾರ ಎಲ್ಲ ವಿಷಯಗಳ ಚರ್ಚೆಗೆ ಸಿದ್ಧವಿದೆ. ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸಿ ಸುಗಮ ಕಲಾಪಕ್ಕೆ ತಡೆಯೊಡ್ಡುತ್ತಿದೆ,'' ಎಂದು ತಿರುಗೇಟು ನೀಡಿದರು.
......
12 ಪಕ್ಷಗಳ ಸಭೆ
ಸೋಮವಾರ ಬೆಳಗ್ಗೆ ರಾಜ್ಯಸಭೆ ಕಲಾಪ ಆರಂಭಕ್ಕೂ ಮುನ್ನ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ 12 ಪಕ್ಷಗಳ ನಾಯಕರು ಸಭೆ ನಡೆಸಿ, ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವ ನಿರ್ಧಾರ ಕೈಗೊಂಡಿದ್ದರು. ಈ ಸಭೆಯಲ್ಲಿ ಸಮಾಜವಾದಿ ಪಕ್ಷ ರಾಮ್ ಗೋಪಾಲ್ ಯಾದವ್, ಟಿಎಂಸಿಯ ಡೆರೆಕ್ ಓಬ್ರಿಯಾನ್, ಸಿಪಿಐನ ಡಿ.ರಾಜಾ ಮತ್ತು ಕೇರಳ ಕಾಂಗ್ರೆಸ್ನ ಜೋಸ್ ಕೆ. ಮಾಣಿ ಸೇರಿ ಹಲವರು ಭಾಗವಹಿಸಿದ್ದರು. ಎಐಎಡಿಎಂಕೆ ಹಾಗೂ ಬಿಜು ಜನತಾದಳ ಸಹ ವಿಧೇಯಕವನ್ನು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ಒತ್ತಾಯಿಸಿವೆ.
..........
ಯಾವ ಪಕ್ಷವವೂ ವಿಧೇಯಕವನ್ನು ವಿರೋಧಿಸುತ್ತಿಲ್ಲ. ಈ ವಿಚಾರದಲ್ಲಿ ಸರಕಾರವೇ ರಾಜಕೀಯ ಮಾಡುತ್ತಿದೆ. ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಲು ಹಿಂದೇಟು ಹಾಕುತ್ತಿರುವುದೇಕೆ?
- ಆನಂದ ಶರ್ಮಾ, ಕಾಂಗ್ರೆಸ್ ಸಂಸದ
ಇಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ. ಮುಸ್ಲಿಂ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಪ್ರಮುಖ ಉದ್ದೇಶವಾಗಿದೆ. ವಿಧೇಯಕ ಕುರಿತ ಚರ್ಚೆಗೆ ಸರಕಾರ ಸಿದ್ಧವಿದೆ.
- ರವಿಶಂಕರ ಪ್ರಸಾದ್, ಕಾನೂನು ಸಚಿವ
......