ಆ್ಯಪ್ನಗರ

#MeToo ಸಾರ್ವಜನಿಕ ವಿಚಾರಣೆಗೆ ಸಮಿತಿ ರಚನೆ

ಇಂತಹ ದೂರಿನ ಹಿಂದೆ ಇರುವಂತಹ ನೋವು ಮತ್ತು ಒತ್ತಡವನ್ನು ನಾನು ಅರಿತಿದ್ದೇನೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ 'ಶೂನ್ಯ ಸಹನೆ' ನೀತಿಯೊಂದಿಗೆ ವ್ಯವಹರಿಸಬೇಕು. ಮುಕ್ತ ಮತ್ತು ಸ್ವತಂತ್ರ ರೀತಿಯಲ್ಲಿ ಈ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ಸಂತ್ರಸ್ತೆಯರಿಗೆ ಸಲಹೆ ನೀಡಲು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದೇವೆ ಎಂದು ಮೇನಕಾ ಮಾಹಿತಿ ನೀಡಿದ್ದಾರೆ.

Vijaya Karnataka Web 12 Oct 2018, 10:27 pm
ಹೊಸದಿಲ್ಲಿ: ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಮಿ ಟೂ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಇಂತಹ ಪ್ರಕರಣಗಳ ಸಾರ್ವಜನಿಕ ವಿಚಾರಣೆಗಾಗಿ ನಾಲ್ವರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚಿಸಲಿದೆ.
Vijaya Karnataka Web me too


ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ.

ಇಂತಹ ದೂರಿನ ಹಿಂದೆ ಇರುವಂತಹ ನೋವು ಮತ್ತು ಒತ್ತಡವನ್ನು ನಾನು ಅರಿತಿದ್ದೇನೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ 'ಶೂನ್ಯ ಸಹನೆ' ನೀತಿಯೊಂದಿಗೆ ವ್ಯವಹರಿಸಬೇಕು. ಮುಕ್ತ ಮತ್ತು ಸ್ವತಂತ್ರ ರೀತಿಯಲ್ಲಿ ಈ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ಸಂತ್ರಸ್ತೆಯರಿಗೆ ಸಲಹೆ ನೀಡಲು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದೇವೆ ಎಂದು ಮೇನಕಾ ಮಾಹಿತಿ ನೀಡಿದ್ದಾರೆ.

ಉನ್ನತ ಅಧಿಕಾರದಲ್ಲಿರುವ ಪುರುಷರು ಇಂತಹ ಕೃತ್ಯಗಳನ್ನು ಎಸಗುತ್ತಾರೆ. ಮಾಧ್ಯಮ, ರಾಜಕೀಯ, ಸಿನಿಮಾ ಅಥವಾ ಕಚೇರಿಗಳ ಹಿರಿಯ ಅಧಿಕಾರಿಗಳಿಗೂ ಇದು ಅನ್ವಯಿಸುತ್ತದೆ. ಮಹಿಳೆಯರು ತಾವು ಅಪಹಾಸ್ಯಕ್ಕೆ ಗುರಿಯಾಗುವ ಅಥವಾ ತಮ್ಮ ಚಾರಿತ್ರ್ಯದ ಬಗ್ಗೆ ಶಂಕೆಗೆ ಗುರಿಯಾಗುವ ಭೀತಿಯಿಂದ ಬಹಿರಂಗವಾಗಿ ಈ ಬಗ್ಗೆ ಮಾನತಾಡಲು ಹೆದರುತ್ತಾರೆ. ಈಗ ಈ ವಿಷಯವನ್ನು ಬಯಲು ಮಾಡಿದ ಬಳಿಕ, ಪ್ರತಿಯೊಂದು ಆರೋಪದಲ್ಲೂ ಕ್ರಮ ಜರುಗಿಸಲೇಬೇಕು ಎಂದು ಹೇಳಿದ್ದಾರೆ.

ದೂರು ದಾಖಲಿಗೆ ಸೂಚನೆ:
ಸಂತ್ರಸ್ತೆಯರು ನೀಡುವ ದೂರು ಎಷ್ಟೇ ಹಳೆಯದಾಗಿದ್ದರೂ, ಯಾವುದೇ ಕಾಲಮಿತಿ ಇಲ್ಲದೆ ಅದನ್ನು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚಿಸುವಂತೆ ಕಾನೂನು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಹೀಗಾಗಿ 10-15 ವರ್ಷ ಹಳೆಯ ಪ್ರಕರಣಗಳಲ್ಲೂ ದೂರು ದಾಖಲಿಸಬಹುದು ಎಂದು ಅವರು ಸಂತ್ರಸ್ತೆಯರಿಗೆ ಅಭಯ ನೀಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಂ.ಜೆ. ಅಕ್ಬರ್‌ ಅವರು ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿ, ರಾಜೀನಾಮೆ ಒತ್ತಡಕ್ಕೆ ಸಿಲುಕಿರುವ ನಡುವೆಯೇ, ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ವೇದಿಕೆ ಸಜ್ಜುಗೊಳಿಸಿದೆ.

ರಿಜಿಸ್ಟ್ರಾರ್‌ಗೆ ನೋಟಿಸ್‌: ನ್ಯಾಯಾಧೀಶರೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ, ತನಿಖೆ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಬಾಂಬೆ ಹೈಕೋರ್ಟ್‌ನ ನ್ಯಾಯಾಂಗ ಅಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೊರ್ಟ್‌ ರಿಜಿಸ್ಟ್ರಾರ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ತಮ್ಮ ಸೇವಾ ಹಿರಿತನವನ್ನು ಪುನಸ್ಥಾಪಿಸಿ, ವೇತನ ಪಾವತಿಸಬೇಕೆಂದು ಕೋರಿ ಮಹಿಳೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿ ಬೆಂಬಲ
ಮಿ ಟೂ ಅಭಿಯಾನಕ್ಕೆ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಅವರು ಬೆಂಬಲ ವ್ಯಕ್ತಪಡಿಸಿದ್ದು, ನ್ಯಾಯಾಂಗ ವ್ಯವಸ್ಥೆಯೂ ಮಹಿಳೆಯರ ಕುರಿತಾಗಿ ಪೂರ್ವಾಗ್ರಹ ವ್ಯಾಪಕವಾಗಿದೆ ಎಂದು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೈಂಗಿಕ ಕಿರುಕುಳದ ನೋವನ್ನು ಮತ್ತು ಅದಕ್ಕೆ ಕಾರಣರಾದವರ ಹೆಸರನ್ನು ಬಹಿರಂಗಪಡಿಸುವ ಮಹಿಳೆಯರನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದರು.

ಸತ್ಯವನ್ನು ಸ್ಪಷ್ಟವಾಗಿ,ಜೋರಾಗಿ ಹೇಳಿ: ರಾಹುಲ್‌
ಮಿ ಟೂ ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬೆಂಬಲ ಸೂಚಿಸಿದ್ದಾರೆ. ಸಂತ್ರಸ್ತೆಯರು ಸತ್ಯವನ್ನು ಜೋರಾಗಿ, ಸ್ಪಷ್ಟವಾಗಿ ಹೇಳಬೇಕು. ಆಗಷ್ಟೇ ಬದಲಾವಣೆ ಸಾಧ್ಯ ಎಂದು ಟ್ವೀಟ್‌ ಮಾಡಿದ್ದಾರೆ.

ಅಕ್ಷ ಯ್‌ ಕುಮಾರ್‌ ದಿಟ್ಟ ನಿರ್ಧಾರ
ನಿರ್ದೇಶಕ ಸಾಜಿದ್‌ ಖಾನ್‌ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹಿನ್ನೆಲೆಯಲ್ಲಿ ಹೌಸ್‌ ಫುಲ್‌-4 ಚಿತ್ರದಿಂದ ಹೊರಬಂದಿರುವುದಾಗಿ ನಟ ಅಕ್ಷಯ್‌ ಕುಮಾರ್‌ ಘೋಷಿಸಿದ್ದಾರೆ. ಈ ಮಧ್ಯೆ, ಈ ಚಿತ್ರದ ನಿರ್ದೇಶನದಿಂದ ದೂರವಿರುವುದಾಗಿ ನಟ ಸಾಜಾದ್‌ ಖಾನ್‌ ಸಹ ಘೋಷಿಸಿದ್ದಾರೆ.

ರೇಪ್‌ ಅಲ್ಲ, ಎಲ್ಲಾ ಮ್ಯೂಚುವಲ್‌: ಶಿಲ್ಪಾ ಶಿಂಧೆ
ನಿರ್ಮಾಪಕ ಸಂಜಯ್‌ ಕೊಹ್ಲಿ ವಿರುದ್ಧ ಕಳೆದ ವರ್ಷ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಹಿಂದಿ ಕಿರುತೆರೆ ನಟಿ, ಬಿಗ್‌ಬಾಸ್‌ 11 ವಿನ್ನರ್‌ ಶಿಲ್ಪಾ ಶಿಂಧೆ, 'ಮಿ-ಟೂ ಶುದ್ಧ ಬಾಲಿಶತನ. ಆಗ ಮಾತನಾಡದೆ ಈಗ ಮಾತನಾಡುವುದರಲ್ಲಿ ಅರ್ಥ ಏನಿದೆ? ಬಾಲಿವುಡ್‌ನಲ್ಲಿ ಎಲ್ಲವೂ ಪರಸ್ಪರ ಸಹಕಾರದೊಂದಿಗೆ ನಡೆಯುತ್ತದೆ. ಅತ್ಯಾಚಾರದ ಮಾತು ಬಾಲುವುಡ್‌ನಲ್ಲೇ ಇಲ್ಲ ಎಂದು ಹೇಳಿದ್ದಾರೆ.

ಆರೋಪದ ಸುಳಿಯಲ್ಲಿ ಟಾಟಾ ಮೋಟರ್ಸ್‌ ಅಧಿಕಾರಿ

ಮಿ-ಟೂ ಚಳವಳಿ ಕಾರ್ಪೊರೇಟರ್‌ ರಂಗಕ್ಕೂ ಹಬ್ಬಿದ್ದು, ಟಾಟಾ ಮೋಟರ್ಸ್‌ ನ ಸಂವಹನ ವಿಭಾಗದ ಮುಖ್ಯಸ್ಥ ಸುರೇಶ್‌ ರಂಗರಾಜನ್‌ ಅವರನ್ನು ಲೈಂಗಿಕ ಶೋಷಣೆ ಆರೋಪದ ಹಿನ್ನೆಲೆಯಲ್ಲಿ ರಜೆ ಮೇಲೆ ಕಳುಹಿಸಲಾಗಿದೆ.

ಮೋದಿ ಮೌನ ಮುರಿಯಬೇಕು: ಸ್ವಾಮಿ

ಸಚಿವ ಎಂ.ಜೆ. ಅಕ್ಬರ್‌ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಮೌನ ಮುರಿಯಬೇಕೆಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ. ''ಹಲವು ಮಹಿಳೆಯರು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಎಷ್ಟೇ ಹಳೆಯ ಪ್ರಕರಣವಾದರೂ ಈಗ ಹೇಳಿದ್ದರಲ್ಲಿ ತಪ್ಪಿಲ್ಲ. ಪ್ರಧಾನಿ ಈ ಬಗ್ಗೆ ಮಾತನಾಡಬೇಕು,'' ಎಂದು ಸ್ವಾಮಿ ಹೇಳಿದ್ದಾರೆ.

ಕಮಲ್‌ ಆಗ್ರಹ:
ಈ ಮಧ್ಯೆ, ತಮಿಳು ನಟ ಕಮಲ್‌ ಹಾಸನ್‌ ಸಹ ಆರೋಪಕ್ಕೆ ಗುರಿಯಾದವರು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ