ಆ್ಯಪ್ನಗರ

ರೈತ ಮುಖಂಡರ ಜತೆ ಬುಧವಾರ ಕೇಂದ್ರ ಸರಕಾರ ಮಾತುಕತೆ: ಧರಣಿ ಅಂತ್ಯ ಸನ್ನಿಹಿತ?

ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ದಿಲ್ಲಿಯ ಸಿಂಘು, ಟಿಕ್ರಿ, ಘಾಜಿಪುರ ಗಡಿಗಳಲ್ಲಿ ಪಂಜಾಬ್‌, ಹರಿಯಾಣಗಳ ಸಾವಿರಾರು ರೈತರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Vijaya Karnataka Web 29 Dec 2020, 8:53 pm
ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಬುಧವಾರ ಮಧ್ಯಾಹ್ನ ನಿರ್ಣಾಯಕ ಮಾತುಕತೆ ನಡೆಯಲಿದ್ದು, ಬಿಕ್ಕಟ್ಟು ಪರಿಹಾರವಾಗುವ ಆಶಾಭಾವ ಗೋಚರಿಸಿದೆ. ಈ ನಡುವೆ, ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್‌ ರ‍್ಯಾಲಿಯನ್ನು ದಿನದಮಟ್ಟಿಗೆ ಮುಂದೂಡಿರುವುದಾಗಿ ಪ್ರತಿಭಟನಾನಿರತ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ.
Vijaya Karnataka Web ರೈತರ ಪ್ರತಿಭಟನೆ
ರೈತರ ಪ್ರತಿಭಟನೆ


ಕೇಂದ್ರ ಸರಕಾರದ ಮಾತುಕತೆ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿರುವ ರೈತ ಸಂಘಟನೆಗಳು, ಮೂರೂ ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ವಿಧಾನಗಳ ಕುರಿತು ಚರ್ಚಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಕಾನೂನು ಸ್ವರೂಪ ನೀಡುವ ಕುರಿತಂತೆಯೂ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿವೆ. ಆದಾಗ್ಯೂ ಈ ಸಲದ ಮಾತುಕತೆ ಸಕಾರಾತ್ಮಕ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸರಕಾರ ಹೊಂದಿದೆ.

ಶಾ ಜತೆ ತೋಮರ್‌, ಗೋಯಲ್‌ ಚರ್ಚೆ

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮತ್ತು ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್‌ ಅವರು ಮಂಗಳವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸುದೀರ್ಘ ಸಮಲೋಚನೆ ನಡೆಸಿದರು. ರೈತ ಸಂಘಟನೆಗಳ ಜತೆ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಮಾತುಕತೆಯಲ್ಲಿ ಸರಕಾರದ ನಿಲುವು ಏನಿರಬೇಕು, ರೈತ ನಾಯಕರನ್ನು ಹೇಗೆ ಮನವೊಲಿಸಬೇಕು ಎನ್ನುವ ಕುರಿತು ಮೂವರ ನಡುವೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ರೈತರ ಜತೆಗಿನ ಮಾತುಕತೆ ನೇತೃತ್ವವನ್ನು ತೋಮರ್‌ ಮತ್ತು ಗೋಯಲ್‌ ವಹಿಸಿದ್ದಾರೆ. ಈ ಹಿಂದೆ ನಡೆದಿರುವ ಐದು ಸುತ್ತಿನ ಮಾತುಕತೆ ವಿಫಲವಾಗಿದೆ.

ಪ್ರತಿಪಕ್ಷ ಮುಖಂಡರಿಂದಲೂ ಸಭೆ

ಯುಪಿಎ ಮೈತ್ರಿಕೂಟದಲ್ಲಿರುವ ಪಕ್ಷಗಳ ಮುಖಂಡರು ಬುಧವಾರ ಸಂಜೆ ಸಭೆ ನಡೆಸಿ ಕೃಷಿ ಕಾಯಿದೆ ವಿರುದ್ಧ ಹೋರಾಟ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಸರಕಾರ ಮತ್ತು ರೈತರ ನಡುವಿನ ಮಾತುಕತೆ ಫಲಿತಾಂಶ ಏನಿರುತ್ತದೆ ಎನ್ನುವುದನ್ನು ಗಮನಿಸಿ ಪ್ರತಿಪಕ್ಷಗಳು ಹೋರಾಟದ ರೂಪುರೇಷೆ ನಿರ್ಧರಿಸಲಿವೆ ಎಂದು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ತಿಳಿಸಿದ್ದಾರೆ.

''ಟ್ರ್ಯಾಕ್ಟರ್‌ ರ‍್ಯಾಲಿಯಿಂದ ಮಾತುಕತೆಗೆ ಸಮಸ್ಯೆ ಆಗಬಾರದು. ಹೀಗಾಗಿ ಡಿ.30ರ ಬದಲು ಮರುದಿನ ರ‍್ಯಾಲಿಲಿ ನಡೆಸಲು ತೀರ್ಮಾನಿಸಿದ್ದೇವೆ'' ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ಹಿರಿಯ ಮುಖಂಡ ಅಭಿಮನ್ಯು ಕೊಹರ್‌ ತಿಳಿಸಿದ್ದಾರೆ. ಸಿಂಘು ಮತ್ತು ಟಿಕ್ರಿ ಗಡಿಗಳಿಂದ ಕುಂಡ್ಲಿ-ಮಾನೇಸರ್‌-ಪಲ್ವಾಲ್‌ವರೆಗೆ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯಲಿದೆ.

ಬಿಹಾರದಲ್ಲಿ ಲಾಠಿ ಪ್ರಹಾರ:
ಕೃಷಿ ಕಾಯಿದೆಗಳನ್ನು ವಿರೋಧಿಸಿ ಬಿಹಾರ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ನಿರ್ಬಂಧ ಲೆಕ್ಕಸಿದೇ ಪಟನಾದ ಗಾಂಧಿ ಮೈದಾನದಿಂದ ಹೊರಟ ಮೆರವಣಿಗೆಯು ಒಂದೂವರೆ ಕಿ.ಮೀ ದೂರ ಸಾಗಿದ ಬಳಿಕ ಭಾರಿ ಸಂಖ್ಯೆಯಲ್ಲಿದ್ದ ಪೊಲೀಸರು ತಡೆದರು. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆಯೂ ನಡೆಯಿತು. ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿಯೂ ಪ್ರತಿಭಟನೆ ನಡೆಸುತ್ತಿದ್ದ 70 ಮಂದಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಿಲ್ಲಿಯಲ್ಲಿ ಕುಳಿತು ಕೃಷಿ ವಲಯವನ್ನು ಮುನ್ನಡೆಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಹೇಗೆ ಮೊಂಡುತನ ಮಾಡಲು ಸಾಧ್ಯ? ಮೂರೂ ಕೃಷಿ ಕಾಯಿದೆಗಳನ್ನು ರದ್ದುಪಡಿಸುವುದೊಂದೇ ಈಗಿರುವ ಬಿಕ್ಕಟ್ಟಿಗೆ ಪರಿಹಾರ.

- ಶರದ್‌ ಪವಾರ್‌, ಎನ್‌ಸಿಪಿ ವರಿಷ್ಠ

ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಪ್ರತಿಭಟನಾ ನಿರತ ರೈತರೇ ಮುಂದಿನ ಸಲ ಕೇಂದ್ರದಲ್ಲಿನ ಬಿಜೆಪಿ ಸರಕಾರವನ್ನು ಉರುಳಿಸುತ್ತಾರೆ. ರೈತರ ಬೆಂಬಲದಿಂದಲೇ ಉತ್ತರ ಪ್ರದೇಶದಲ್ಲಿಸಮಾಜವಾದಿ ಪಾರ್ಟಿ ಮತ್ತೊಮ್ಮೆ ಸರಕಾರ ರಚಿಸುವುದು ಖಚಿತ.
- ಅಖಿಲೇಶ್‌ ಯಾದವ್‌, ಎಸ್ಪಿ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ