ಆ್ಯಪ್ನಗರ

ಐದು ನದಿ ಜೋಡಣೆ ಯೋಜನೆಗಳಿಗೆ ಕೇಂದ್ರ ಆದ್ಯತೆ

ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ಅದರ ಹರಿವಿನ ಪಥ ಜೋಡಣೆ ಮೂಲಕ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯುಂಟು ಮಾಡುವ ನಿರೀಕ್ಷೆಯೊಂದಿಗೆ ಕೇಂದ್ರ ಸರಕಾರ ಕೈಗೊಂಡಿರುವ ಐದು ನದಿಗಳ ಜೋಡಣೆ ಯೋಜನೆಗಳಿಗೆ ಈ ವರ್ಷದ ಮಾರ್ಚ್‌ ಹೊತ್ತಿಗೆ ಚಾಲನೆ ದೊರೆಯಲಿದೆ.

Vijaya Karnataka 7 Aug 2018, 11:05 am
ಹೊಸದಿಲ್ಲಿ: ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ಅದರ ಹರಿವಿನ ಪಥ ಜೋಡಣೆ ಮೂಲಕ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯುಂಟು ಮಾಡುವ ನಿರೀಕ್ಷೆಯೊಂದಿಗೆ ಕೇಂದ್ರ ಸರಕಾರ ಕೈಗೊಂಡಿರುವ ಐದು ನದಿಗಳ ಜೋಡಣೆ ಯೋಜನೆಗಳಿಗೆ ಈ ವರ್ಷದ ಮಾರ್ಚ್‌ ಹೊತ್ತಿಗೆ ಚಾಲನೆ ದೊರೆಯಲಿದೆ. ವಿಶ್ವಬ್ಯಾಂಕ್‌ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಸಾಲ ನೆರವಿನ 2 ಲಕ್ಷ ಕೋಟಿ ರೂ. ವೆಚ್ಚದ ಈ ಬೃಹತ್‌ ಯೋಜನೆ ಕಾಮಗಾರಿ ವೇಗ ಪಡೆಯಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.
Vijaya Karnataka Web Nitin Gadkari


ರಾಜ್ಯಸಭೆಯಲ್ಲಿ ಸೋಮವಾರ ಈ ವಿಚಾರ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಮಾಹಿತಿ ಹಂಚಿಕೊಳ್ಳುವ ಮೂಲಕ ಪ್ರತಿಪಕ್ಷ ಸದಸ್ಯರು ನದಿ ಜೋಡಣೆ ಕುರಿತು ಎದ್ದಿದ್ದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವ ಯತ್ನ ಮಾಡಿದರು. ಇದೂ ಅಲ್ಲದೇ ಈ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.

ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಗೆ ಮೊದಲ ಹಂತದ ಐದು ನದಿಗಳ ಜೋಡಣೆಯಿಂದ ಲಾಭವಾಗಲಿದೆ. ಗೋದಾವರಿ-ಕಾವೇರಿ, ಪಾರ್‌-ತಾಪಿ-ನರ್ಮದಾ, ಕ್ವೆನ್‌-ಬೆಟ್ವಾ, ದಮನ್‌ಗಂಗಾ-ಪಿಂಜಾಲ್‌, ಪಾರ್‌ಬತಿ-ಕಾಳಿಸಿಂಧ್‌-ಚಂಬಲ್‌ ನದಿ ಜೋಡಣೆ ಯೋಜನೆಗಳ ಕುರಿತು ಯೋಜನಾ ಕಾರ‍್ಯಸಾಧ್ಯತೆ ವರದಿ ಸಿದ್ಧಗೊಂಡಿದ್ದು ಸದ್ಯದಲ್ಲೇ ರಾಜ್ಯಗಳ ನಡುವೆ ಒಪ್ಪಂದ ಏರ್ಪಡಲಿದೆ. ಯೋಜನೆ ಸಾಕಾರಕ್ಕೆ ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವುದರ ಜತೆಗೆ ಖಾಸಗಿ ಹೂಡಿಕೆದಾರರನ್ನೂ ಆಕರ್ಷಿಸಲಿದೆ ಎಂದು ಸಚಿವರು ಹೇಳಿದರು.

ವಿವಾದ ಇತ್ಯರ್ಥ:
ನದಿ ಜೋಡಣೆಯಿಂದ ಕರ್ನಾಟಕ-ತಮಿಳುನಾಡು ನಡುವಿನ ಜಲ ವಿವಾದ ಶಾಶ್ವತವಾಗಿ ಬಗೆಹರಿಯುತ್ತದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

ಗೋದಾವರಿಯ ಹಿನ್ನೀರು ಕೃಷ್ಣಾಕ್ಕೆ ಹರಿಯುತ್ತದೆ. ಕೃಷ್ಣಾ ನದಿಯನ್ನು ಪೆನ್ನಾರ್‌ ನದಿ ಮೂಲಕ ಕಾವೇರಿಗೆ ಜೋಡಿಸಲಾಗುತ್ತದೆ. ಇದರಿಂದ ಈ ಕೊಳ್ಳದಲ್ಲಿ 3,000 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿಯಲಿದೆ. 40 ಟಿಎಂಸಿಗಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ಸಂಘರ್ಷವೂ ಕೊನೆಯಾಗಲಿದೆ ಎಂದು ವಿವರಿಸಿದರು.

ಇದೇ ವೇಳೆ ಸದನದಲ್ಲಿ ಮಾತನಾಡಿದ ಜಲಸಂಪನ್ಮೂಲ ಖಾತೆ ಸಹಾಯಕ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಅವರು ದೇಶಾದ್ಯಂತ ಇಂತಹ 30 ನದಿಗಳ ಜೋಡಣೆಗೆ ಕೇಂದ್ರ ಉತ್ಸುಕತೆ ತೋರಿದೆ ಎಂದರು.

ಪಟ್ಟಿಯಲ್ಲಿ ಹಂಪಿ ಸೇರಿಸಿ: ರಾಮಮೂರ್ತಿ

ಭಾರತೀಯ ಪುರಾತತ್ವ ಇಲಾಖೆಯ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಹಂಪಿಯನ್ನು ಸೇರಿಸುವಂತೆ ಕಾಂಗ್ರೆಸ್‌ ಸದಸ್ಯ ಕೆ.ಸಿ.ರಾಮಮೂರ್ತಿ ಅವರು ರಾಜ್ಯಸಭೆಯಲ್ಲಿ ಸರಕಾರವನ್ನು ಆಗ್ರಹಿಸಿದರು. ವಿಜಯನಗರ ಸಾಮ್ರಾಜ್ಯದ ಗತ ವೈಭವದ ಇತಿಹಾಸ ಸಾರುವ ಹಂಪಿಯ ದೇವಸ್ಥಾನಗಳು ಹಾಗೂ ಅಲ್ಲಿನ ವಾಸ್ತುಶಿಲ್ಪವು ಅಧ್ಯಯನಶೀಲ ವಸ್ತುವಾಗಿದೆ. ಐತಿಹಾಸಿಕವಾಗಿ ಮಹತ್ವ ಪಡೆದಿರುವ ಇಂತಹ ಸ್ಥಳವನ್ನು ಪುರಾತತ್ವ ಇಲಾಖೆಯು ನೋಡಲೇಬೇಕಾದ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ. ಕೂಡಲೇ ಸೇರಿಸಬೇಕೆಂದು ಅವರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ