ಆ್ಯಪ್ನಗರ

Asaduddin Owaisi: ಕ್ರಿಮಿನಲ್‌ಗಳನ್ನು ಬಿಡುಗಡೆ ಮಾಡಿದ್ದೇ ನೀವು ಕಲಿಸಿದ ಪಾಠವೇ? ಅಮಿತ್ ಶಾಗೆ ಓವೈಸಿ ತಿರುಗೇಟು

Gujarat Assembly Elections 2022: ಗುಜರಾತ್ ಗಲಭೆಯ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಲಾಗಿದೆ ಎಂಬ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ನೀಡಿದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 26 Nov 2022, 4:32 pm

ಹೈಲೈಟ್ಸ್‌:

  • ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು
  • 2002ರ ಗುಜರಾತ್ ಗಲಭೆ ದುಷ್ಕರ್ಮಿಗಳಿಗೆ ಪಾಠ ಕಲಿಸಿದ್ದಾಗಿ ಹೇಳಿಕೆ
  • ಬಿಲ್ಕಿಸ್ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದು ನೀವು ಕಲಿಸಿದ ಪಾಠ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Asaduddin Owaisi
ಅಹಮದಾಬಾದ್: 2002ರ ಗುಜರಾತ್ ಗಲಭೆಕೋರರಿಗೆ ಬಿಜೆಪಿ ತಕ್ಕ ಪಾಠ ಕಲಿಸಿದ ಬಳಿಕ ರಾಜ್ಯದಲ್ಲಿ ಶಾಂತಿ ನೆಲೆಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಅವರು ಹೇಳಿರುವ 'ಪಾಠಗಳು' ಅಪರಾಧಿಗಳನ್ನು ಹೊರಗೆ ಹೋಗುವಂತೆ ಮುಕ್ತವಾಗಿ ಬಿಡುವುದರ ಕುರಿತಾಗಿದೆ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.
ಗುಜರಾತ್‌ನ ಅತಿ ದೊಡ್ಡ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಜುಹಾಪುರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಓವೈಸಿ, "2002ರಲ್ಲಿ ಗುಜರಾತ್ ಗಲಭೆಕೋರರಿಗೆ ತಾವು ಪಾಠ ಕಲಿಸಿರುವುದಾಗಿ ಮತ್ತು ರಾಜ್ಯದಲ್ಲಿ ಬಿಜೆಪಿ ಕಾಯಂ ಶಾಂತಿ ಸ್ಥಾಪಿಸಿರುವುದಾಗಿ ಅಮಿತ್ ಶಾ ಅವರು ಸಾರ್ವಜನಿಕ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಈ ಕ್ಷೇತ್ರದ (ಅಹಮದಾಬಾದ್) ಸಂಸದ ಅಮಿತ್ ಶಾ ಅವರಿಗೆ ನಾನು ಹೇಳಲು ಬಯಸುತ್ತೇನೆ, 2002ರಲ್ಲಿ ನೀವು ಕಲಿಸಿದ ಪಾಠವೆಂದರೆ ನೀವು ಬಿಲ್ಕಿಸ್ (ಬಾನೊ) ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದು. ನೀವು ಕಲಿಸಿದ ಪಾಠವೆಂದರೆ ಬಿಲ್ಕಿಸ್‌ಳ ಮೂರು ವರ್ಷದ ಮಗಳನ್ನು ಕೊಂದವರನ್ನು ಬಂಧನದಿಂದ ಬಿಡುಗಡೆ ಮಾಡಿರುವುದು. ಅಹ್ಸಾನ್ ಜಾಫ್ರಿಯನ್ನು ಸಾಯಿಸಬಹುದು ಎಂದು ಕೂಡ ನೀವು ನಮಗೆ ಕಲಿಸಿದ್ದೀರಿ" ಎಂದು ಟೀಕಾಪ್ರಹಾರ ನಡೆಸಿದ್ದಾರೆ.
Gujarat Assembly Polls: 2002ರಲ್ಲಿ ಅವರಿಗೆ ಪಾಠ ಕಲಿಸಿದ ಬಳಿಕ ಗುಜರಾತ್‌ನಲ್ಲಿ ಕಾಯಂ ಶಾಂತಿ ನೆಲೆಸಿದೆ: ಅಮಿತ್ ಶಾ

ಆಕ್ರೋಶಭರಿತ ಭಾಷಣ ಮಾಡಿದ ಓವೈಸಿ, 2002ರ ಕೋಮು ಗಲಭೆ ಸಂದರ್ಭದಲ್ಲಿ ಸಾವಿರಾರು ಜೀವಗಳನ್ನು ಬಲಿಪಡೆದುಕೊಂಡ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಮತ್ತು ಬೆಸ್ಟ್ ಬೇಕರಿ ಸುಟ್ಟ ಪ್ರಕರಣಗಳನ್ನು ಪ್ರಸ್ತಾಪಿಸಿದರು.


"ನಿಮ್ಮ ಎಷ್ಟು ಪಾಠಗಳನ್ನು ನಾವು ನೆನಪಿಸಿಕೊಳ್ಳಬೇಕು ಮಿ. ಅಮಿತ್ ಶಾ? ಆದರೆ ನೆನಪಿಡಿ, ಪಾಠ ಕಲಿಸುವುದು ಏನೂ ಅಲ್ಲ. ತಪ್ಪುಗಳಿಗೆ ನ್ಯಾಯ ಒದಗಿಸಿದಾಗ ಶಾಂತಿ ಬಲಗೊಳ್ಳುತ್ತದೆ" ಎಂದು ಹೇಳಿದ್ದಾರೆ.
Indian History: ನಮ್ಮ ಬೆಂಬಲವಿದೆ, ಇತಿಹಾಸವನ್ನು ಮರು ರಚಿಸಿ: ಇತಿಹಾಸಕಾರರಿಗೆ ಅಮಿತ್ ಶಾ ಸಲಹೆ

ಜನರು ತಾವು ಅಧಿಕಾರ ಪಡೆದಾಗ ಎಲ್ಲವನ್ನೂ ಮರೆಯುತ್ತಾರೆ. ಆದರೆ ಅದು ಯಾರ ಬಳಿ ಯಾವಾಗಲೂ ಇರುವುದಿಲ್ಲ ಎಂದು ಅಮಿತ್ ಶಾ ವಿರುದ್ಧ ಓವೈಸಿ ಗುಡುಗಿದ್ದಾರೆ. "ಅಧಿಕಾರ ಯಾರ ಬಳಿಯೂ ಉಳಿದುಕೊಳ್ಳುವುದಿಲ್ಲ. ಒಂದು ದಿನ, ಎಲ್ಲರಿಂದಲೂ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತದೆ. ಅಧಿಕಾರದ ಅಮಲಿನಲ್ಲಿ ಗೃಹ ಸಚಿವರು ನಾವು ಪಾಠ ಕಲಿಸಿದ್ದೇವೆ ಎಂದು ಇಂದು ಹೇಳುತ್ತಿದ್ದಾರೆ. ನೀವು ಯಾವ ಪಾಠ ಕಲಿಸಿದ್ದೀರಿ? ಇಡೀ ದೇಶದಲ್ಲಿ ನೀವು ನಟೋರಿಯಸ್ ಆಗಿದ್ದಿರಿ. ದಿಲ್ಲಿಯಲ್ಲಿ ಕೋಮು ಗಲಭೆಗಳು ನಡೆದಾಗ ನೀವು ಯಾವ ಪಾಠ ಕಲಿಸಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ