ಆ್ಯಪ್ನಗರ

18 ಗಂಟೆಗಳ ಸತತ ಮಳೆಗೆ ಕಂಗೆಟ್ಟ ವಡೋದರ: ವ್ಯವಹಾರ ಸ್ಥಬ್ಧ

ಕಳೆದ 18 ಗಂಟೆಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಗುಜರಾತ್‌ ಕಂಗೆಟ್ಟಿದೆ. ಸತತ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಎನ್‌ಡಿಆರ್‌ಎಫ್‌ ಹಾಗೂ ಪೊಲೀಸರು ತಗ್ಗು ಪ್ರದೇಶದ ಜನರನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Vijaya Karnataka Web 1 Aug 2019, 5:08 pm
ಗಾಂಧಿನಗರ: ಗುಜರಾತ್‌ನ ವಡೋದರ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Vijaya Karnataka Web rain


ಕಳೆದ 18 ಗಂಟೆಗಳಿಂದ ಸುರಿಯುತ್ತಿರುವ ಮಳೆಯಿಂದ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ವಾರ್ಷಿಕ ವಾಡಿಕೆ ಮಳೆಯ ಶೇ.46ರಷ್ಟು ಪ್ರಮಾಣದ ಮಳೆ ಕಳೆದ 18 ಗಂಟೆಗಳಲ್ಲಿ ಬಿದ್ದಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬುಧವಾರ ಸಂಜೆ 6 ರಿಂದ ಈ ವರೆಗೆ(ಗುರುವಾರ ಸಂಜೆ) ನಿರಂತರವಾಗಿ ಮಳೆ ಸುರಿದಿದ್ದು, ವಡೋದರದಲ್ಲಿ ದಾಖಲೆಯ 49.9 ಸೆಂಮೀ ಮಳೆ ಬಿದ್ದಿದೆ.

ಈ ಸಂಬಂಧ ಸಿಎಂ ವಿಜಯ್‌ ರೂಪಾನಿ, ಬುಧವಾರ ರಾತ್ರಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು, ಸ್ಥಳೀಯ ಆಡಳಿತಗಳಿಗೆ ಮಳೆಯಿಂದ ತೊಂದರೆಗೆ ಸಿಲುಕಿದವರಿಗೆ ಅಗತ್ಯ ನೆರವು ನೀಡಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. 5 ಸಾವಿರಕ್ಕೂ ಅಧಿಕ ಮಂದಿಯನ್ನು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ತಂಡಗಳು ರಕ್ಷಿಸಿದ್ದು, ಸಂಪೂರ್ಣ ನಗರ ವ್ಯಾವಹಾರಿಕವಾಗಿ ಸ್ಥಗಿತಗೊಂಡಿದೆ.

ವಾರ್ಷಿಕ ವಾಡಿಕೆ ಮಳೆ ಪ್ರಮಾಣದಲ್ಲಿ ಕಚ್‌ನಲ್ಲಿ ಶೇ. 35.45, ಸೌರಾಷ್ಟ್ರದಲ್ಲಿ ಶೇ. 42.14, ಗುಜರಾತ್‌ ಕೇಂದ್ರದಲ್ಲಿ ಶೇ. 38.43, ಉತ್ತರ ಗುಜರಾತ್‌ನಲ್ಲಿ ಶೇ.31.11, ದಕ್ಷಿಣದಲ್ಲಿ ಶೇ.60.58 ರಷ್ಟು ಮಳೆ ಕನಿಷ್ಠ ಅವಧಿಯಲ್ಲಿ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜಲಸಂಪನ್ಮೂಲ ಇಲಾಖೆ ಮಾಹಿತಿಯ ಪ್ರಕಾರ ಒಟ್ಟಾರೆ ಗುಜರಾತ್‌ನಲ್ಲಿರುವ 204 ಅಣೆಕಟ್ಟುಗಳ ಪೈಕಿ, 2 ಭರ್ತಿಯಾಗಿದೆ. 7 ಅಣೆಕಟ್ಟುಗಳು ಶೇ.70 ರಷ್ಟು, 12 ಅಣೆಕಟ್ಟುಗಳು ಶೇ.50 ರಿಂದ 70 ರಷ್ಟು ಹಾಗೂ 38 ಅಣೆಕಟ್ಟುಗಳು ಶೇ.25 ರಿಂದ 50ರಷ್ಟು ತುಂಬಿಕೊಂಡಿದೆ ಎಂದು ತಿಳಿದು ಬಂದಿದೆ. ವಡೋದರದ ಸರ್ದಾರ್‌ ಸರೋವರ್‌ ಡ್ಯಾಮ್‌ನಲ್ಲಿ ಶೇ.56.30 ರಷ್ಟು ನೀರು ಭರ್ತಿಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಸತತ ಮಳೆಯಿಂದಾಗಿ ಸರೋವರದ ಹರಿವು ಹೆಚ್ಚಿದೆ. ಅಂತೆಯೇ ಇನ್ನುಳಿದ ಅನೇಕ ಅಣೆಕಟ್ಟೆಗಳಿ ನೀರು ಹರಿದು ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ