ಆ್ಯಪ್ನಗರ

20 ದಿನಗಳಿಂದ ಹಾರ್ದಿಕ್‌ ಪಟೇಲ್‌ ನಾಪತ್ತೆ, ಪತ್ನಿ ಗಂಭೀರ ಆರೋಪ

ಸದ್ಯಕ್ಕೆ ಹಾರ್ದಿಕ್‌ ಪಟೇಲ್‌ ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಇದೇ ಹಾರ್ದಿಕ್‌ ಪಟೇಲ್‌ ಅಧಿಕೃತ ಟ್ಟಿಟರ್‌ ಖಾತೆಯಿಂದ ಫೆಬ್ರವರಿ 11ರಂದು ಕೊನೆಯ ಬಾರಿಗೆ ಟ್ಟೀಟ್‌ ಮಾಡಲಾಗಿದೆ. ದಿಲ್ಲಿ ಚುನಾವಣೆ ಗೆದ್ದ ಅರವಿಂದ ಕೇಜ್ರಿವಾಲ್‌ಗೆ ಈ ಖಾತೆಯಿಂದ ಅಭಿನಂದನೆ ಸಂದೇಶ ಕಳುಹಿಸಲಾಗಿದೆ.

Agencies 14 Feb 2020, 4:26 pm
ಅಹಮದಾಬಾದ್: ಪಾಟಿದಾರ್‌ ನಾಯಕ, ಕಾಂಗ್ರೆಸ್‌ ರಾಜಕಾರಣಿ ಹಾರ್ದಿಕ್‌ ಪಟೇಲ್‌ ಕಳೆದ 20 ದಿನಗಳಿಂದ ಕಾಣಿಸುತ್ತಿಲ್ಲ ಎಂದು ಅವರ ಪತ್ನಿ ಕಿಂಜಾಲ್‌ ಪಟೇಲ್‌ ಗಂಭೀರ ಆರೋಪ ಮಾಡಿದ್ದಾರೆ.
Vijaya Karnataka Web Hardik Patel


“ಕಳೆದ 20 ದಿನಗಳಿಂದ ನನ್ನ ಗಂಡ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರ ನಾಪತ್ತೆಯಿಂದ ನಮಗೆ ನೋವಾಗಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಪತ್ನಿ ವಿಡಿಯೋ ಮಾಡಿ ಹಾಕಿದ್ದಾರೆ. ಇದೇ ವೇಳೆ ಅವರು ಗುಜರಾತ್‌ ಸರಕಾರ ತಮ್ಮ ಪತಿಯನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ದೂರಿದ್ದಾರೆ.

“2017ರಲ್ಲಿ ಸರಕಾರ ಪಾಟಿದಾರರ ಮೇಲಿನ ಎಲ್ಲಾ ಕೇಸುಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿತ್ತು. ಮತ್ಯಾಕೆ ಅವರು ಹಾರ್ದಿಕ್‌ರನ್ನು ಮಾತ್ರ ಟಾರ್ಗೆಟ್‌ ಮಾಡುತ್ತಿದೆ. ಬಿಜೆಪಿ ಸೇರಿದ ಇನ್ನಿಬ್ಬರು ಪಾಟಿದಾರ್‌ ಆಂದೋಲನದ ನಾಯಕರನ್ನು ಯಾಕೆ ಟಾರ್ಗೆಟ್‌ ಮಾಡುತ್ತಿಲ್ಲ,” ಎಂದು ಅವರು ಪ್ರಶ್ನಿಸಿದ್ದಾರೆ.

“ಹಾರ್ದಿಕ್‌ ಪಟೇಲ್‌ ಜನರನ್ನು ಭೇಟಿಯಾಗಿ ಚರ್ಚಿಸುವುದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಈ ಸರಕಾರಕ್ಕೆ ಬೇಕಾಗಿಲ್ಲ,” ಎಂದು ಕಿಂಜಾಲ್‌ ಆರೋಪಿಸಿದ್ದಾರೆ.

ಸದ್ಯಕ್ಕೆ ಹಾರ್ದಿಕ್‌ ಪಟೇಲ್‌ ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಇದೇ ಹಾರ್ದಿಕ್‌ ಪಟೇಲ್‌ ಅಧಿಕೃತ ಟ್ಟಿಟರ್‌ ಖಾತೆಯಿಂದ ಫೆಬ್ರವರಿ 11ರಂದು ಕೊನೆಯ ಬಾರಿಗೆ ಟ್ಟೀಟ್‌ ಮಾಡಲಾಗಿದೆ. ದಿಲ್ಲಿ ಚುನಾವಣೆ ಗೆದ್ದ ಅರವಿಂದ ಕೇಜ್ರಿವಾಲ್‌ಗೆ ಈ ಖಾತೆಯಿಂದ ಅಭಿನಂದನೆ ಸಂದೇಶ ಕಳುಹಿಸಲಾಗಿದೆ.

ಇದಕ್ಕೂ ಮೊದಲು ಫೆಬ್ರವರಿ 10ರಂದು, ಗುಜರಾತ್‌ನಲ್ಲಿ ಪಂಚಾಯತ್‌ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಸರಕಾರ ನನ್ನನ್ನು ಜೈಲಿನಲ್ಲಿ ಕೂಡಿಹಾಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದರು.

ಜನವರಿ 24ರವರೆಗೆ ಪೊಲೀಸರು ಹಾರ್ದಿಕ್‌ ಪಟೇಲ್‌ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ತಳ್ಳಿದ್ದರು. ಅಹಮದಾಬಾದ್‌ ನ್ಯಾಯಾಲಯಕ್ಕೆ ದೇಶದ್ರೋಹ ಪ್ರಕರಣ ಸಂಬಂಧ ವಿಚಾರಣೆಗ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನ ಮುಗಿದ ಬಳಿಕ ಟ್ಟೀಟ್‌ನಲ್ಲಿ ಅವರು ನನ್ನ ಹೋರಾಟ ಮುಂದುವರಿಸುತ್ತೇನೆ ಎಂದಿದ್ದರು. ಆದರೆ ಅದಾದ ಬಳಿಕ ಅವರ ಇರುವಿಕೆ ಬಗ್ಗೆ ಹೆಚ್ಚಿನ ಮಾಹಿತಿಗಳು ಎಲ್ಲೂ ಲಭ್ಯವಿಲ್ಲ.

2015ರಲ್ಲಿ ಪಾಟಿದಾರ್‌ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಪೊಲೀಸರನ್ನು ಕೊಲೆ ಮಾಡಲು ಕರೆ ನೀಡಿದ ಆರೋಪ ಅವರ ಮೇಲಿದೆ. ಈ ಸಂಬಂಧ ಕ್ರೈಂ ಬ್ರಾಂಚ್‌ ಪೊಲೀಸರು ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ