ಆ್ಯಪ್ನಗರ

ಪಂಜಾಬಿಗಳನ್ನು ಖಲಿಸ್ತಾನಿಗಳೆಂದು ನಿಮ್ಮ ಅಜ್ಜಿ ಕೂಡ ಜರೆದಿದ್ದರು: ರಾಹುಲ್‌ಗೆ ಹರ್‌ಸಿಮ್ರತ್ ಕ್ಲಾಸ್!

ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಇಂದು(ಜ.15-ಶುಕ್ರವಾರ) ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಟೀಕಿಸಿದ್ದಾರೆ.

Vijaya Karnataka Web 15 Jan 2021, 9:07 pm
ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಇಂದು(ಜ.15-ಶುಕ್ರವಾರ) ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಟೀಕಿಸಿದ್ದಾರೆ.
Vijaya Karnataka Web harsimrat kaur badal
ಸಂಗ್ರಹ ಚಿತ್ರ


ಕೃಷಿ ಕಾಯ್ದೆ ಹಾಗೂ ಪಂಜಾಬ್ ರೈತರ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಹರ್‌ಸಿಮ್ರತ್ ಕೌರ್, ಕೃಷಿ ಕಾಯ್ದೆಗಳು ಸಂಸತ್ತಿನ ಅನುಮೋದನೆ ಪಡೆಯುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ರೈತರು ಧರಣಿ ನಡೆಸುತ್ತಿರುವಾಗ ರಾಹುಲ್ ಎಲ್ಲಿದ್ದರು, ರಾಜ್ಯಸಭೆಯಲ್ಲಿ ಮಸೂದೆ ಪಾಸಾಗುವ ವೇಳೆ 40 ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದೇಕೆ ಎಂದು ಪ್ರಶ್ನಿಸಿರುವ ಹರ್‌ಸಿಮ್ರತ್ ಕೌರ್ ಬಾದಲ್, ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.

ರೈತ ಸಂಘಟನೆಗಳು-ಕೇಂದ್ರದ ನಡುವಿನ 9ನೇ ಸುತ್ತಿನ ಮಾತುಕತೆಯೂ ವಿಫಲ: ಜ.19ಕ್ಕೆ ಮತ್ತೆ ಸಭೆ ನಿಗದಿ!
ಇದೇ ವೇಳೆ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಪಂಜಾಬ್ ರೈತರನ್ನು ಖಲಿಸ್ತಾನಿಗಳು ಎಂದು ಕರೆಯುತ್ತಿರುವ ಕುರಿತು ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು. ಹರ್‌ಸಿಮ್ರತ್ ಕೌರ್ ಬಾದಲ್ ಈ ಕುರಿತೂ ರಾಹುಲ್ ಗಾಂಧಿ ಅವರನ್ನು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.


ಕಾಟಾಚಾರಕ್ಕೆ ಪತ್ರಿಕಾಗೋಷ್ಠಿ ಮಾಡಿ ಪಂಜಾಬ್ ರೈತರ ಕುರಿತು ಮೊಸಳೆ ಕಣ್ಣೀರು ಸುರಿಸುವ ಮೊದಲು, ನಿಮ್ಮ ಅಜ್ಜಿ(ಇಂದಿರಾ ಗಾಂಧಿ) ಕೂಡ ಪಂಜಾಬಿಗಳ ಕುರಿತು ಇದೇ ಭಾಷೆಯನ್ನು ಬಳಸುತ್ತಿದ್ದರು ಎಂಬುದನ್ನು ನೆನೆಪಸಿಕೊಳ್ಳಿ ಎಂದು ಹರ್‌ಸಿಮ್ರತ್ ಕೌರ್ ಬಾದಲ್ ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ

ನಿಮ್ಮ ತಂದೆ(ರಾಜೀವ್ ಗಾಂಧಿ)ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಂಜಾಬಿಗಳ ಮಾರಣಹೋಮ ನಡೆಯಲು ಏಕೆ ಬಿಟ್ಟರು ಎಂಬುದನ್ನು ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಹರ್‌ಸಿಮ್ರತ್ ಕೌರ್ ಬಾದಲ್ ಆಗ್ರಹಿಸಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ದಿಲ್ಲಿ ಹೃದಯ ಭಾಗದಲ್ಲೇ ಕಾಂಗ್ರೆಸ್ ಪ್ರತಿಭಟನೆ: ರಾಹುಲ್, ಪ್ರಿಯಾಂಕಾ ಭಾಗಿ
ಪಂಜಾಬ್ ರೈತರ ಕುರಿತು ಮಾತನಾಡುವುದಕ್ಕೂ ಮೊದಲು ರಾಹುಲ್ ಗಾಂಧಿ ಈ ಪ್ರಶ್ನೆಗಳಿಗೆ ಉತ್ತರಿಸಲಿ. ಇಲ್ಲದಿದ್ದರೆ ಅವರ ರೈತ ಕಾಳಜಿ ಕೇವಲ ನಾಟಕ ಎಂಬುದು ಸಾಬೀತಾಗಲಿದೆ ಎಂದು ಹರ್‌ಸಿಮ್ರತ್ ಕೌರ್ ಬಾದಲ್ ಹರಿಹಾಯ್ದಿದ್ದಾರೆ.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ