ಆ್ಯಪ್ನಗರ

58 ಜನಪ್ರತಿನಿಧಿಗಳ ವಿರುದ್ಧ ದ್ವೇಷ ಭಾಷಣದ ಪ್ರಕರಣ

ಚುನಾವಣಾ ಅಫಿಡವಿಟ್‌ ಆಧರಿಸಿ ವಿಶ್ಲೇಷಣೆ | ಬಿಜೆಪಿ ಮುಖಂಡರೇ ಎಲ್ಲರಿಗಿಂತ ಮುಂದೆ

Vijaya Karnataka Web 26 Apr 2018, 6:30 am
ಹೊಸದಿಲ್ಲಿ : 'ದ್ವೇಷ ಭಾಷಣ'ಕ್ಕೆ ಸಂಬಂಧಿಸಿದಂತೆ 58 ಸಂಸದರು ಮತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಲ್ಲಿ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸರಕಾರೇತರ ಸಂಸ್ಥೆಯ ವರದಿ ತಿಳಿಸಿದೆ.
Vijaya Karnataka Web Par


''15 ಹಾಲಿ ಸಂಸದರ ವಿರುದ್ಧ ಪರಸ್ಪರ ದ್ವೇಷ ಭಾಷಣ ಮಾಡಿದ್ದಕ್ಕಾಗಿಪ್ರಕರಣ ದಾಖಲಾಗಿವೆ. ಆದರೆ, ರಾಜ್ಯಸಭೆಯ ಯಾವೊಬ್ಬ ಸದಸ್ಯರ ವಿರುದ್ಧವೂ ದ್ವೇಷ ಭಾಷಣಕ್ಕಾಗಿ ಮೊಕದ್ದಮೆ ದಾಖಲಾಗಿಲ್ಲ. ಬಿಜೆಪಿಯ 10 ಹಾಗೂ ಎಐಯುಡಿಎಫ್‌ (ಅಖಿಲ ಭಾರತ ಸಂಯುಕ್ತ ಪ್ರಜಾಪ್ರಭುತ್ವ ವೇದಿಕೆ), ಟಿಆರ್‌ಎಸ್‌ (ತೆಲಂಗಾಣ ರಾಷ್ಟ್ರ ಸಮಿತಿ), ಪಿಎಂಕೆ (ಪಟ್ಟಾಳಿ ಮಕ್ಕಳ್‌ ಕಚ್ಚಿ), ಎಐಎಂಐಎಂ ಮತ್ತು ಎಸ್‌ಎಚ್‌ಎಸ್‌ (ಶಿವ ಸೇನಾ) ಪಕ್ಷದ ತಲಾ ಒಬ್ಬರು ಸದಸ್ಯರು ದ್ವೇಷದ ಭಾಷಣ ಮಾಡಿದವರ ಪಟ್ಟಿಯಲ್ಲಿದ್ದಾರೆ,'' ಎಂದು ಹೊಸದಿಲ್ಲಿ ಮೂಲದ ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ (ಎಡಿಆರ್‌) ಮಾಹಿತಿ ಒದಗಿಸಿದೆ.

ಅಸಾದುದ್ದೀನ್‌ ಒವೈಸಿ (ಎಐಎಂಐಎಂ), ಬದ್ರುದ್ದೀನ್‌ ಅಜ್ಮಲ್‌ (ಎಐಯುಡಿಎಫ್‌) ಮುಂತಾದ ರಾಜಕೀಯ ಪಕ್ಷಗಳ ಮುಖಂಡರ ವಿರುದ್ಧ 'ದ್ವೇಷ ಭಾಷಣ' ಘೋಷಿತ ಪ್ರಕರಣಗಳಿವೆ ಎಂದು ಎಡಿಆರ್‌ ತಿಳಿಸಿದೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವೆ ಉಮಾ ಭಾರತಿ ಹಾಗೂ ಇತರ ಎಂಟು ಸಹಾಯಕ ಸಚಿವರ ವಿರುದ್ಧವೂ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.

43 ಹಾಲಿ ಶಾಸಕರ ವಿರುದ್ಧ ಪ್ರಕರಣ

ಬಿಜೆಪಿಯ 17, ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳ ತಲಾ 5, ಟಿಡಿಪಿ ಪಕ್ಷದ 3, ಐಎನ್‌ಸಿ, ಎಐಟಿಸಿ, ಜೆಡಿ(ಯು) ಮತ್ತು ಎಸ್‌ಎಚ್‌ಎಸ್‌ ಪಕ್ಷಗಳ ತಲಾ 2 ಹಾಗೂ ಡಿಎಂಕೆ, ಬಿಎಸ್‌ಪಿ, ಎಸ್‌ಪಿ ಮತ್ತು ಇಬ್ಬರು ಪಕ್ಷೇತರ ಶಾಸಕರ ವಿರುದ್ಧ ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿವೆ ಎಂದು ಎಡಿಆರ್‌ ವರದಿಯಲ್ಲಿ ಹೇಳಲಾಗಿದೆ.

ಅಭ್ಯರ್ಥಿಗಳು ಮತ್ತು ಸಂಸದರು/ಶಾಸಕರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಸಲ್ಲಿಸಿದ್ದ ಅಫಿಡವಿಟ್‌ಗಳ ಆಧಾರದಲ್ಲಿ ಈ ವಿಶ್ಲೇಷಣೆ ಮಾಡಲಾಗಿದೆ.

5 ವರ್ಷಗಳಲ್ಲಿ 198 ಅಭ್ಯರ್ಥಿಗಳು

ಕಳೆದ 5 ವರ್ಷಗಳಲ್ಲಿ, 'ದ್ವೇಷ ಭಾಷಣ' ಪ್ರಕರಣದಲ್ಲಿ ಹೆಸರು ನಮೂದಾಗಿರುವ 198 ಅಭ್ಯರ್ಥಿಗಳು ವಿಧಾನಸಭೆ, ಲೋಕಸಭೆ/ರಾಜ್ಯಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲದೆ, 28 ಪಕ್ಷೇತರ ಅಭ್ಯರ್ಥಿಗಳೂ ವಿಧಾನಸಭೆ, ಲೋಕಸಭೆÜ/ರಾಜ್ಯ ಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.

ದ್ವೇಷದ ಮಾತಿನಲ್ಲಿ ಯಾರು ಮುಂದೆ?

ಬಿಜೆಪಿ 27
ಎಐಎಂಐಎಂ 6
ಟಿಆರ್‌ಎಸ್‌ 6
ಟಿಡಿಪಿ 3
ಎಸ್‌ಎಚ್‌ಸ್‌ 3
ಎಐಟಿಸಿ 2
ಐಎನ್‌ಸಿ 2
ಐಎನ್‌ಡಿ 2
ಜೆಡಿಯು 2
ಎಸ್ಪಿ, ಬಿಎಸ್ಪಿ, ಡಿಎಂಕೆ ಇತರರು 5

ರಾಜ್ಯವಾರು ಮಾಹಿತಿ
ಉತ್ತರ ಪ್ರದೇಶ 15
ತೆಲಂಗಾಣ 13
ಕರ್ನಾಟಕ 5
ಮಹಾರಾಷ್ಟ್ರ 5

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ