ಆ್ಯಪ್ನಗರ

ರೈತರ ಸಾಲ ಮನ್ನಾದ ಶೇ.50ರಷ್ಟು ಹಣ ನೀಡುವಂತೆ ಮೋದಿಗೆ ಎಚ್‌ಡಿಕೆ ಮನವಿ

ರೈತರ ಸಾಲ ಮನ್ನಾವನ್ನು ತುರ್ತಾಗಿ ಘೋಷಿಸಬೇಕಾದ ಅನಿವಾರ್ಯತೆಯಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮನ್ನಾ ಮಾಡುವ ಮೊತ್ತದ ಅರ್ಧದಷ್ಟು ಹೊರೆಯನ್ನು ಕೇಂದ್ರ ಸರಕಾರ ಹೊರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

Vijaya Karnataka 18 Jun 2018, 7:22 am
ಹೊಸದಿಲ್ಲಿ: ರೈತರ ಸಾಲ ಮನ್ನಾವನ್ನು ತುರ್ತಾಗಿ ಘೋಷಿಸಬೇಕಾದ ಅನಿವಾರ್ಯತೆಯಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮನ್ನಾ ಮಾಡುವ ಮೊತ್ತದ ಅರ್ಧದಷ್ಟು ಹೊರೆಯನ್ನು ಕೇಂದ್ರ ಸರಕಾರ ಹೊರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
Vijaya Karnataka Web Loan


''ಸತತ ಬರ ಮತ್ತು ನೆರೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರು ಬ್ಯಾಂಕುಗಳಿಂದ ಪಡೆದ ಸಾಲ ತೀರಿಸುವ ಸ್ಥಿತಿಯಲ್ಲಿಲ್ಲ. ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ರಾಜ್ಯದ ಬೊಕ್ಕಸದ ಮೇಲೆ ಆಗುವ ಹೊರೆ ಕಡಿಮೆ ಮಾಡಲು ಸಾಲ ಮನ್ನಾದ ಶೇ.50ರಷ್ಟು ಹಣವನ್ನು ಕೇಂದ್ರ ಸರಕಾರ ನೆರವಿನ ರೂಪದಲ್ಲಿ ನೀಡಬೇಕು,'' ಎನ್ನುವುದು ಕುಮಾರಸ್ವಾಮಿಯವರ ಮನವಿಯಾಗಿದೆ.

ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೆ ಸಭೆಯಲ್ಲಿ ಮಾತನಾಡಿದ ಎಚ್‌ಡಿಕೆ, ''ಇಡೀ ದೇಶದಲ್ಲಿ ಕೃಷಿ ಕ್ಷೇತ್ರ ಸಮಸ್ಯೆ ಎದುರಿಸುತ್ತಿರುವಂತೆ ರಾಜ್ಯದ ರೈತರೂ ಸಮಸ್ಯೆಯ ಸುಳಿಯಲ್ಲಿದ್ದಾರೆ. ರಾಜ್ಯದ ಸುಮಾರು 85 ಲಕ್ಷ ರೈತರು ಬ್ಯಾಂಕುಗಳಲ್ಲಿ ಸಾಲ ಹೊಂದಿದ್ದಾರೆ. ಈಗ ಅವರ ನೆರವಿಗೆ ಧಾವಿಸುವುದು ಸರಕಾರಗಳ ಕರ್ತವ್ಯ,'' ಎಂದು ಸಿಎಂ ಅಭಿಪ್ರಾಯಪಟ್ಟರು.

ಕೃಷಿ ಉತ್ಪನ್ನಗಳಿಗೆ ಬೆಲೆ

ಕೃಷಿ ಮಾರುಕಟ್ಟೆ ಕ್ಷೇತ್ರದಲ್ಲಿ ರಾಜ್ಯದ ಸಾಧನೆ ಉಲ್ಲೇಖಿಸಿದ ಸಿಎಂ ''ಕೃಷಿ ಮಾರುಕಟ್ಟೆ ನಿಯಮದಲ್ಲಿ 2013ರಿಂದ ಹಲವಾರು ಹೊಸ ಹೊಸ ಪ್ರಯೋಗಗಳನ್ನು ರಾಜ್ಯ ಸರಕಾರ ಮಾಡಿದೆ. ಏಕೀಕೃತ ಮಾರುಕಟ್ಟೆ ವೇದಿಕೆ (ಯುಪಿಎಂ) ಮೂಲಕ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಲಾಗುತ್ತಿದೆ. ಈ ಯೋಜನೆಗಳ ಕುರಿತು ಕೇಂದ್ರ ಸರಕಾರ ಮತ್ತು ಇ-ನಾಮ್‌ ಕೂಡ ಅಧ್ಯಯನ ನಡೆಸಿವೆ,'' ಎಂದು ಹೇಳಿದರು.

ಕೃಷಿ ಚಟುವಟಿಕೆಗಳಿಗೆ ನೀರಿನ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ''ನೀರು ಸಂರಕ್ಷಣೆಗಾಗಿ ಕೆರೆ ಸಂಜೀವಿನಿಯಂಥ ವಿಶೇಷ ಕಾರ‍್ಯಕ್ರಮಗಳನ್ನು ರಾಜ್ಯದಲ್ಲಿ ಅಳವಡಿಸಲಾಗಿದೆ. ಹವಾಮಾನ ಚೇತರಿಕೆ ಕೃಷಿಯನ್ನು ಅಭಿವೃದ್ಧಿಪಡಿಸಲು ದೇಶದಲ್ಲಿ ಈ ಬಗ್ಗೆ ಸಮಗ್ರ ಚೌಕಟ್ಟು, ತಂತ್ರಗಳು ಮತ್ತು ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು,'' ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.

ಎರಡೂ ಆರೋಗ್ಯ ಯೋಜನೆ ಜಾರಿ

ಕೇಂದ್ರದ ರಾಷ್ಟ್ರೀಯ ಸ್ವಾಸ್ಥ್ಯ ರಕ್ಷಣಾ ಮಿಷನ್‌ಗಿಂತಲೂ ದೊಡ್ಡದಾದ ಯಶಸ್ವಿನಿ ಯೋಜನೆ ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. 1.45 ಕೋಟಿ ಕೋಟಿ ಕುಟುಂಬಗಳು ಇದರ ಉಪಯೋಗ ಪಡೆಯುತ್ತಿವೆ. ಜನರಿಗೆ ಇನ್ನಷ್ಟು ಪರಿಣಾಮಕಾರಿ ಆರೋಗ್ಯ ಸೇವೆ ನೀಡಲು ಕೇಂದ್ರ ಮತ್ತು ರಾಜ್ಯದ ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯಕ್ಕೆ ನಿಧಿ ಹಂಚಿಕೆ ಕೊರತೆ

''ನಿರಂತರವಾಗಿ ಮರಕಳಿಸುತ್ತಿರುವ ನೈಸರ್ಗಿಕ ವಿಪತ್ತುಗಳಿಂದಾಗಿ ರಾಜ್ಯ ತೀವ್ರ ಸಮಸ್ಯೆ ಎದುರಿಸುತ್ತಿದೆ. ರಾಜ್ಯ ವಿಪತ್ತು ಪರಿಹಾರದ ರೂಪದಲ್ಲಿ 2015-20ರ ಅವಧಿಗೆ ರಾಜ್ಯಕ್ಕೆ ಕೇವಲ 1375 ಕೋಟಿ ರೂ. ಮಾತ್ರ ನಿಗದಿಪಡಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಈ ಮೊತ್ತ ಬಹಳ ಕಡಿಮೆಯಾಗಿದೆ. ಈ ಕಾರಣಕ್ಕಾಗಿ ಇನ್ನೂ ಹೆಚ್ಚಿನ ಪ್ರಮಾಣದ ವಿಪತ್ತು ಪರಿಹಾರ ಧನ ನೀಡಬೇಕು,'' ಎಂದೂ ಸಿಎಂ ಕುಮಾರಸ್ವಾಮಿ ಕೋರಿದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳನ್ನು ಹೊಂದಿದ್ದರೂ, ಅಭಿವೃದ್ಧಿ ಮತ್ತು ರೈತರ ಸಮಸ್ಯೆಗಳಿಗೆ ಸಮಾನವಾಗಿ ಸ್ಪಂದಿಸಬೇಕಿದೆ. ಸಾಲ ಮನ್ನಾದ ಶೇ.50ರಷ್ಟು ಹಣವನ್ನು ನೀಡುವ ಮೂಲಕ ಕೇಂದ್ರ ಸರಕಾರ ನಮ್ಮ ನೆರವಿಗೆ ಬರಬೇಕು.
- ಎಚ್‌ ಡಿ ಕುಮಾರಸ್ವಾಮಿ, ಸಿಎಂ
*****************************

ಜಾಯಿನ್‌ಗೆ ಹೋಗಲಿ ಹವಾಮಾನ ಪೂರಕ ಕೃಷಿ

ಕೃಷಿ ಕ್ಷೇತ್ರದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು ಈಗ ವಾಸ್ತವ. ಹಾಗಾಗಿ, ಹವಾಮಾನ ಪೂರಕ ಕೃಷಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರ ಅನುಭವಗಳನ್ನು ಬಳಸಿಕೊಂಡು ಸಮಗ್ರ ಯೋಜನೆ ರೂಪಿಸಬೇಕು ಎಂದು ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಮನವಿ ಮಾಡಿದರು.

ನಿಧಿ ಹಂಚಿಕೆ ಕೊರತೆ

ರಾಜ್ಯ ವಿಕೋಪ ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌)ಯಡಿ 2015-20ರ ಅವಧಿಗೆ ಕರ್ನಾಟಕಕ್ಕೆ ಕೇವಲ 1375 ಕೋಟಿ ರೂ. ನಿಗದಿ ಮಾಡಲಾಗಿದೆ. ಇದು ಇತರ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಹಣಕಾಸು ಆಯೋಗವಾಗಲೀ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯೂ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಲಾಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರಾಯಚೂರು, ಯಾದಗಿರಿ ಅಭಿವೃದ್ಧಿಗೆ ನೆರವು ಬೇಕಿದೆ

ಹಿಂದುಳಿದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಗೆ ಪ್ರತಿ ವರ್ಷ 100 ಕೋಟಿ ರೂಪಾಯಿಯಂತೆ ಐದು ವರ್ಷಗಳ ಕಾಲ ನೆರವು ನೀಡಬೇಕೆಂದೂ ಮನವಿ ಮಾಡಿದ ಸಿಎಂ ಕುಮಾರಸ್ವಾಮಿ ''ಜನಸಂಖ್ಯೆ ದೃಷ್ಟಿಯಿಂದ ಬೆಂಗಳೂರು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಸಹಜವಾಗಿಯೇ ಮೂಲಸೌಕರ‍್ಯಗಳ ಕೊರತೆಯೂ ಇದೆ. ಈ ಹಿನ್ನೆಲೆಯಲ್ಲಿ ಎರಡನೇ ಸ್ತರದ ನಗರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ,'' ಎಂದು ಪ್ರತಿಪಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ