ಆ್ಯಪ್ನಗರ

ಶಾಕಿಂಗ್ ವಿಡಿಯೋ: ಸೆಖೆ ತಾಳಲಾಗದೆ ಪಿಪಿಇ ಕಿಟ್ ಕಳಚಿಟ್ಟ ಆರೋಗ್ಯ ಕಾರ್ಯಕರ್ತರು..!

ಜನದಟ್ಟಣೆಯ ರೈಲು ನಿಲ್ದಾಣದಲ್ಲಿ ಕೋವಿಡ್ ಶಂಕಿತರನ್ನು ಪತ್ತೆ ಮಾಡಲು ಹಾಗೂ ಶಂಕಿತ ಕೋವಿಡ್ ಸೋಂಕಿತರ ಮೇಲೆ ನಿಗಾ ವಹಿಸಲು ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್ ಕೊಡಲಾಗಿದೆ. ಆದ್ರೆ, ಸೆಖೆ ವಿಪರೀತವಾಗಿದ್ದು, ಪಿಪಿಇ ಕಿಟ್‌ ಒಳಗೆ ಗಾಳಿ ಆಡದ ಕಾರಣ ಆರೋಗ್ಯ ಕಾರ್ಯಕರ್ತರು ಅದನ್ನು ಕಳಚಿ ಕೂಲರ್‌ ಎದುರು ನಿಂತಿದ್ದರು.

TIMESOFINDIA.COM 20 May 2020, 5:33 pm

ಹೈಲೈಟ್ಸ್‌:

  • ಪಿಪಿಇ ಕಿಟ್ ಕಳಚಿಟ್ಟು ಕೂಲರ್‌ ಮುಂದೆ ಕುಳಿತ ಆರೋಗ್ಯ ಕಾರ್ಯಕರ್ತರು
  • 42 ಡಿಗ್ರಿ ಸೆಲ್ಶಿಯೆಸ್‌ ಸೆಖೆ ತಾಳಲಾರದೆ ಕಂಗಾಲಾದ ಆರೋಗ್ಯ ಕಾರ್ಯಕರ್ತರು
  • ಭೋಪಾಲ್‌ನ ರೈಲು ನಿಲ್ದಾಣದ ಬಳಿ ಚಿತ್ರೀಕರಿಸಿದ ದೃಶ್ಯ ವೈರಲ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಭೋಪಾಲ್ (ಮಧ್ಯಪ್ರದೇಶ): ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ನಿಜಕ್ಕೂ ಪಿಪಿಇ ಕಿಟ್‌ ಧರಿಸಿ ಯಮ ಹಿಂಸೆ ಅನುಭವಿಸುತ್ತಿದ್ದಾರೆ. ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ದೃಶ್ಯಾವಳಿ ಸಮೇತ ಲಭ್ಯವಾಗಿದೆ.
ಬರೋಬ್ಬರಿ 42 ಡಿಗ್ರಿ ಸೆಲ್ಶೀಯಸ್ ಉಷ್ಣಾಂಶವಿರುವ ಉರಿ ಬೇಸಿಗೆಯ ಭೋಪಾಲ್‌ನಲ್ಲಿ ರೈಲ್ವೆ ನಿಲ್ದಾಣವೊಂದರಲ್ಲಿ ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಿರಾರು ಜನರು ರೈಲು ಪ್ರಯಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಬೇಕಾದ ಜವಾಬ್ದಾರಿ ಈ ಆರೋಗ್ಯ ಕಾರ್ಯಕರ್ತರ ಹೆಗಲೇರಿದೆ. ಹೀಗೆ ಪರೀಕ್ಷೆ ಮಾಡುವ ವೇಳೆ ಖುದ್ದು ಆರೋಗ್ಯ ಕಾರ್ಯಕರ್ತರೇ ಕೊರೊನಾ ಸೋಂಕಿಗೆ ತುತ್ತಾಗದಿರಲಿ ಎಂಬ ಸದುದ್ದೇಶದೊಂದಿಗೆ ಸರ್ಕಾರ ಅವರಿಗೆ ಪಿಪಿಇ ಕಿಟ್‌ಗಳನ್ನು ನೀಡಿದೆ.

ಪೊಲೀಸ್‌ ಸಿಬ್ಬಂದಿಗೆ ಪಿಪಿಇ ಕಿಟ್‌ ಕಡ್ಡಾಯ - ಡಿಜಿಪಿ ಪ್ರವೀಣ್‌ ಸೂದ್ ಆದೇಶ

ಆದ್ರೆ, ಭೋಪಾಲ್‌ನ ಹಬೀಬ್‌ಗಂಜ್ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಉರಿವ ಬಿಸಿಲಿನಲ್ಲಿ ದಿನಗಟ್ಟಲೆ ಪಿಪಿಇ ಕಿಟ್‌ ಧರಿಸುವುದು ಅಸಾಧ್ಯದ ಮಾತಾಗಿದೆ. ಏಕಂದರೆ, ಪಿಪಿಇ ಕಿಟ್‌ ಒಳಗೆ ಗಾಳಿ ಆಡದ ಕಾರಣ, ಆರೋಗ್ಯ ಕಾರ್ಯಕರ್ತರು ಸುಸ್ತಾಗುತ್ತಿದ್ದಾರೆ. ಸೆಖೆ ತಾಳಲಾರದೆ ಪರದಾಡುತ್ತಿದ್ದಾರೆ. ಕಾರ್ಯಕರ್ತರು ಕೆಲಸ ಮಾಡುವ ವೇಳೆ, ಆಹಾರವಿರಲಿ ನೀರನ್ನೂ ಸೇವಿಸಲು ಸಾಧ್ಯವಾಗೋದಿಲ್ಲ. ಹೀಗಾಗಿ, ಕೆಲವು ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್ ಕಳಚಿ ಏರ್‌ ಕೂಲರ್‌ ಮುಂದೆ ಕುಳಿತಿದ್ದ ದೃಶ್ಯ ವೈರಲ್ ಆಗಿತ್ತು.

ಸ್ವಯಂ ರಕ್ಷಣೆಗೆ ಮುಂದಾದ ಕೊರೊನಾ ವಾರಿಯರ್ಸ್‌: ಪಿಪಿಇ ಕಿಟ್‌ಗೆ ಹೆಚ್ಚಿದ ಬೇಡಿಕೆ, ಕೊರತೆ ಸಾಧ್ಯತೆ

ಈ ರೀತಿ ಪಿಪಿಇ ಕಿಟ್ ಕಳಚೋದು ಒಂದು ಹಂತದಲ್ಲಿ ಆರೋಗ್ಯ ಕಾರ್ಯಕರ್ತರ ಆರೋಗ್ಯಕ್ಕೇ ಮಾರಕ. ಏಕೆಂದರೆ ಸುಮಾರು 2 ಸಾವಿರ ಮಂದಿ ಭೋಪಾಲ್‌ನಿಂದ ರೈಲುಗಳಲ್ಲಿ ಬಿಹಾರಕ್ಕೆ ಹೊರಟಿದ್ದಾರೆ. ಇವರನ್ನು ಪರೀಕ್ಷೆ ಮಾಡುವ ವೇಳೆ ಕಾರ್ಯಕರ್ತರಿಗೇ ಸೋಂಕು ತಗುಲುವ ಭೀತಿ ಇದೆ. ಇದರ ನಡುವೆ, ಆರೋಗ್ಯ ಕಾರ್ಯಕರ್ತರ ನೀರಿನ ದಾಹಕ್ಕೂ ವ್ಯವಸ್ಥೆ ಇಲ್ಲ.. ಇದೊಂದು ರೀತಿಯ ವಿಚಿತ್ರ ಸನ್ನಿವೇಶ ಎದುರಾಗಿದ್ದು, ಯಾರನ್ನೂ ದೂರುವುದು ಎಂದು ಗೊತ್ತಾಗದೆ ಚಿಂತಿತರಾಗಿದ್ದಾರೆ.

ಕೊರೊನಾ ಸಂಕಷ್ಟ: ಫ್ಲಿಪ್ ಕಾರ್ಟ್, ಗಿವ್ ಇಂಡಿಯಾದಿಂದ ಪಿಪಿಇ ಕಿಟ್ ದೇಣಿಗೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ