ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಪಕ್ಷೇತರ ಶಾಸಕನ ಹೇಳಿಕೆ
ಹೊಸದಿಲ್ಲಿ: ಹೇಮಾ ಮಾಲಿನಿ ಪ್ರತಿ ದಿನ ಕುಡೀತಾರೆ, ಹಾಗಂತ ಅವರೇನು ಆತ್ಮಹತ್ಯೆ ಮಾಡಿಕೊಂಡಿದಾರಾ?
- ಇದು ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಾಡುನ ವಿವಾದಾತ್ಮಕ ಹೇಳಿಕೆ. ಸಂಸದೆಯೂ ಆಗಿರುವ ನಟಿ ಹೇಮಾಮಾಲಿನಿ ಅವರ ಬಗ್ಗೆ ಕಾಡು ಅಲಿಯಾಸ್ ಓಂ ಪ್ರಕಾಶ್ ಅಲಿಯಾಸ್ ನೀಡಿರುವ ಈ ಹೇಳಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಏನೋ ಹೇಳಲು ಹೋಗಿ..
ನಿಜವೆಂದರೆ, ಬಚ್ಚು ಕಾಡು ಸಹಜ ಸತ್ಯವನ್ನೇ ಹೇಳಿದ್ದರು. ಬಚ್ಚುಕಾಡು ಮಾತನಾಡಿದ್ದು ರೈತರ ಆತ್ಮಹತ್ಯೆಯ ಬಗ್ಗೆ. ರೈತರು ಕುಡಿತದ ದಾಸ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಕೆಲವರ ಮಾತನ್ನು ಅಲ್ಲಗಳೆಯುವುದು ಬಚ್ಚು ಕಾಡು ಮೂಲ ಉದ್ದೇಶವಾಗಿತ್ತು. ಆದರೆ, ಅದಕ್ಕೆ ಸಿನಿಮಾ ಲೋಕದ ದಂತ ಕಥೆ ಹೇಮಾ ಮಾಲಿನಿ ಅವರನ್ನು ಟ್ಯಾಗ್ ಮಾಡಲು ಹೋಗಿ ಎಡವಟ್ಟು ಮಾಡಿದ್ದಲ್ಲದೆ, ಆಕ್ರೋಶಕ್ಕೆ ಒಳಗಾದರು.
ಹೇಳಿದ್ದೇನು?: ''ರೈತರು ಕುಡಿಯೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಜನರು ಹೇಳುತ್ತಾರೆ. ಇದು ಸರಿಯಲ್ಲ. ಆಲ್ಕೋಹಾಲ್ ಯಾರು ಕುಡಿಯೊಲ್ಲ ಹೇಳಿ? ಸಂಸದರು, ಶಾಸಕರು, ಪತ್ರಕರ್ತರಲ್ಲಿ ಶೇ. 75ರಷ್ಟು ಜನ ಕುಡೀತಾರೆ. ಹೇಮಾ ಮಾಲಿನಿ ಪ್ರತಿ ದಿನ ಕುಡೀತಾರೆ. ಆದರೆ, ಅವರೇನು ಆತ್ಮಹತ್ಯೆ ಮಾಡ್ಕೊಂಡಿದ್ದಾರಾ?,'' ಎಂದು ಗುರುವಾರ ನಾಂದೇಡ್ನಲ್ಲಿ ರಾರಯಲಿಯೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು ಬಚ್ಚುಕಾಡು.
ಕುಡಿತಕ್ಕೂ ಆತ್ಮಹತ್ಯೆಗೂ ಸಂಬಂಧ ಕಲ್ಪಿಸಬಾರದು ಎಂಬ ವಾದ ಮಂಡಿಸಿದ ಅವರು, ''ನಿಜವೆಂದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹಣದ ಕೊರತೆಯಿಂದ. ಅವರ ಉತ್ಪಾದಕತೆಯೇನೋ ಹೆಚ್ಚುತ್ತಿದೆ. ಆದರೆ, ಆದಾಯ ಹೆಚ್ಚುತ್ತಿಲ್ಲ,'' ಎಂದರು. ಆದರೆ, ಹೇಮಾ ಮಾಲಿನಿಯನ್ನು ಎಳೆದು ತಂದಿದ್ದರಿಂದ ಎಲ್ಲ ಬಣ್ಣ ಮಸಿ ನುಂಗಿದಂತಾಯಿತು.
ವಿವಾದಗಳ ಸರದಾರ
ಮಹಾರಾಷ್ಟ್ರದ ಅಚಲ್ಪುರ ಕ್ಷೇತ್ರವನ್ನು ಆರನೇ ಬಾರಿ ಪ್ರತಿನಿಧಿಸುತ್ತಿರುವವರು ಬಚ್ಚು ಕಾಡು. 46 ವರ್ಷದ ಈ ನಾಯಕನ ಸುತ್ತ ವಿವಾದಗಳ ಹುತ್ತವೇ ಇದೆ.
* ಹಿಂದೊಮ್ಮೆ ಸರಕಾರಿ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿದ್ದರು.
* 2006ರಲ್ಲಿ ವಿದರ್ಭದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯ ಬಗ್ಗೆ ಸರಕಾರದ ಗಮನ ಸೆಳೆಯುವುದಕ್ಕಾಗಿ ನೀರಿನ ಟ್ಯಾಂಕ್ ಹತ್ತಿ, ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು. ಅಚ್ಚರಿ ಎಂದರೆ, ಆವತ್ತು ಅವರಿಗೆ ಸ್ಪೂರ್ತಿ ನೀಡಿದ್ದು ಬಾಲಿವುಡ್ನ ಕ್ಲಾಸಿಕ್ ಚಿತ್ರ ಶೋಲೆ. ಇದು ಹೇಮಾಮಾಲಿನಿ ಚಿತ್ರ ಬದುಕಿನ ಅತಿ ದೊಡ್ಡ ಹಿಟ್ ಚಿತ್ರ!
ಮಹಾ ರೈತರ ಆತ್ಮಹತ್ಯೆ
ಅಧಿಕೃತ ವರದಿಗಳ ಪ್ರಕಾರ, 2014ರಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 5650. ಇದರಲ್ಲಿ ಅರ್ಧ ಸಾವು ಸಂಭವಿಸಿದ್ದು ಮಹಾರಾಷ್ಟ್ರದಲ್ಲೆ. ಈ ವರ್ಷವೂ ಮರಾಠವಾಡಾದಲ್ಲಿ ಆಗಲೇ 200 ಮಂದಿ ರೈತರು ಪ್ರಾಣ ತ್ಯಾಗ ಮಾಡಿದ್ದಾರೆ.