ಆ್ಯಪ್ನಗರ

ಏನಿದು ಭಾರತ-ಪಾಕಿಸ್ತಾನ ನಡುವಣ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ?

1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದದಲ್ಲಿ ಏನಿದೆ? ಈ ಒಪ್ಪಂದದಲ್ಲಿ ಯಾವ ನದಿಗಳು ಒಳಗೊಂಡಿವೆ? ಪಾಕಿಸ್ತಾನಕ್ಕೆ ಹರಿಯುತ್ತಿರುವ ನದಿಗಳು ಯಾವುವು? ಇಲ್ಲಿದೆ ಮಾಹಿತಿ.

Vijaya Karnataka Web 22 Feb 2019, 9:20 am
Vijaya Karnataka Web Sindhu River
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಲ್ಲಿ ಜೈಶೆ ಮೊಹಮ್ಮದ್‌ ಉಗ್ರರ ಆತ್ಮಾಹುತಿ ದಾಳಿಯಿಂದ ತೀವ್ರ ಆಕ್ರೋಷಗೊಂಡಿರುವ ಭಾರತ ಪಾಕಿಸ್ತಾನದ ಜತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿದೆ.

ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿಗೆ ಪ್ರತೀಕಾರ ಕೈಗೊಂಡಿರುವ ಭಾರತ ಎಲ್ಲಾ ನೆಲೆಗಳಲ್ಲು ಪಾಕಿಸ್ತಾನವನ್ನು ಕಟ್ಟಿಹಾಕಲು ಮುಂದಾಗಿದ್ದು, ಅದರ ಭಾಗವಾಗಿ ಪಾಕಿಸ್ತಾನದ ಜತೆಗಿನ ಸಿಂಧೂ ಒಪ್ಪಂದವನ್ನು ಮರುಪರಿಶೀಲನೆಗೆ ಚಿಂತನೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ.

ಏನಿದು ಸಿಂಧೂ ನೀರು ಒಪ್ಪಂದ?
1960ರಲ್ಲಿ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೂಬ್‌ ಖಾನ್‌ ಸಿಂಧೂ ನದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. 1960ರ ಸೆಪ್ಟಂಬರ್‌ 19ರಂದು ಉಭಯ ನಾಯಕರ ನಡುವೆ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ನಡೆಯಿತು.

ಈ ಒಪ್ಪಂದದ ಪ್ರಕಾರ ಸಿಂಧೂ ನದಿಯಷ್ಟೇ ಅಲ್ಲ, ಸಟ್ಲೇಜ್‌, ಬಿಯಾಸ್‌, ರಾವಿ, ಝೇಲಂ, ಚೆನಾಬ್‌ ನದಿಗಳನ್ನೂ ಒಳಗೊಂಡಿದೆ. ಪೂರ್ವ ಭಾಗದ ನದಿಗಳಾದ ಸಟ್ಲೇಜ್‌, ಬಿಯಾಸ್‌ ಮತ್ತು ರಾವಿ ನದಿಗಳ ನೀರನ್ನು ಭಾರತ ಬಳಸಿಕೊಳ್ಳಬಹುದು ಎಂಬುದು ಒಪ್ಪಂದದ ಸಾರ. ಹಾಗೆಯೇ ಪಶ್ಚಿಮ ನದಿಗಳಾದ ಝೇಲಂ, ಚೆನಾಬ್‌ ಮತ್ತು ಸಿಂಧೂ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಬಿಡಬೇಕು ಎಂಬ ಒಪ್ಪಂದವಿದೆ. ಆದರೆ ಈ ನದಿಗಳ ನೀರನ್ನು ವಿದ್ಯುತ್‌ ಉತ್ಪಾದನೆ, ಕೃಷಿ ಹಾಗೂ ಸಂಗ್ರಹಕ್ಕೆ ಭಾರತ ಬಳಸಿಕೊಳ್ಳಬಹುದು ಎಂದಿದೆ.

ಆದರೆ ಈ ನದಿಗಳ ನೀರನ್ನು ಭಾರತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರಲಿಲ್ಲ. ಹೆಚ್ಚುವರಿಯಾಗಿ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನದಿ ನೀರಿನಿಂದ ಅಲ್ಲಿನ ಕೃಷಿ ಹಸನಾಗಿತ್ತು. ಇದೀಗ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಯಂತ್ರಿಸಿ ಅದನ್ನು ಭಾರತದಲ್ಲೇ ಬಳಸಿಕೊಳ್ಳಲು ನಿರ್ಧರಿಸಿರುವುದರಿಂದ ನೆರೆ ರಾಷ್ಟ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಪಂಜಾಬ್‌ನ ಪಠಾಣ್‌ಕೋಟ್‌ ಜಿಲ್ಲೆಯಲ್ಲಿ ರಾವಿ ನದಿಗೆ ಅಡ್ಡಲಾಗಿ ಶಾಪುರ್‌-ಖಾಂಡಿಯಲ್ಲಿ ಅಣೆಕಟ್ಟು ಕಟ್ಟಲಾಗುತ್ತಿದೆ. ಇದರಿಂದ ಉಳಿಯುವ ಹೆಚ್ಚುವರಿ ನೀರನ್ನು ರಾವಿ-ಬಿಯಾಸ್‌ ನದಿಗಳಿಗೆ ಇಂಟರ್‌ಲಿಂಕ್‌ ಮಾಡುವ ಮೂಲಕ ಇತರ ರಾಜ್ಯಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ.

ಪಾಕಿಸ್ತಾನಕ್ಕೆ ಹರಿಯುತ್ತಿರುವ 3 ನದಿಗಳ ನೀರು ನಿಲ್ಲಿಸುವ ಎಚ್ಚರಿಕೆ ನೀಡಿದ ನಿತಿನ್ ಗಡ್ಕರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ