ಆ್ಯಪ್ನಗರ

ಉಗ್ರರ ಆಕ್ರಮಣ ಭೀತಿ: ಅಯೋಧ್ಯೆ ಹೈ ಅಲರ್ಟ್‌

ಅಯೋಧ್ಯೆ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

Agencies 16 Jun 2019, 5:00 am
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ಪಟ್ಟಣದ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.
Vijaya Karnataka Web BNG-1506-2-2-AYODHYA2


ವಿವಾದಿತ ರಾಮ ಜನ್ಮಭೂಮಿ ಪ್ರದೇಶವೂ ಸೇರಿದಂತೆ ಪಟ್ಟಣಕ್ಕೆ ದಾಳಿ ಭೀತಿ ಎಂದು ಎಚ್ಚರಿಸಲಾಗಿದ್ದು, ಎಲ್ಲ ಕಡೆ ಭದ್ರತಾ ವ್ಯವಸ್ಥೆ ಮತ್ತು ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.

ಅಯೋಧ್ಯೆ ಪಟ್ಟಣವನ್ನು ಪ್ರವೇಶಿಸುವ ಎಲ್ಲ ನಾಲ್ಕು ದಿಕ್ಕುಗಳಲ್ಲೂ ಕಠಿಣ ತಪಾಸಣೆ ನಡೆಸಲಾಗುತ್ತಿದ್ದು, ಪಟ್ಟಣವನ್ನು ಪ್ರವೇಶಿಸುತ್ತಿರುವ ಎಲ್ಲ ರೈಲು ಮತ್ತು ಬಸ್‌ಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಹೋಟೆಲ್‌ಗಳು, ಲಾಡ್ಜ್‌ಗಳು, ಗೆಸ್ಟ್‌ ಹೌಸ್‌ಗಳ ಮೇಲೆ ಕಣ್ಣಿಡಲಾಗಿದೆ. ವಿವಾದಿತ ಪ್ರದೇಶಕ್ಕೆ ಬರುವ ಪ್ರತಿಯೊಬ್ಬರನ್ನೂ ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರಸಿದ್ಧ ಹನುಮಗಢಿ ದೇವಾಲಯ, ಕನಕ ಭವನ ದೇವಸ್ಥಾನ ಮತ್ತು ನಾಗೇಶ್ವರನಾಥ ದೇಗುಲಕ್ಕೆ ಇನ್ನಷ್ಟು ಭದ್ರತೆ ಒದಗಿಸಲಾಗಿದೆ.

ಈ ನಡುವೆ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ 18 ಸಂಸದರ ತಂಡ ಭಾನುವಾರ ಅಯೋಧ್ಯೆಗೆ ಭೇಟಿ ನೀಡಲಿದೆ.

ಜೂ. 18ರ ಮೇಲೆ ಕಣ್ಣು
ಅಯೋಧ್ಯೆಯಲ್ಲಿ ಜೂನ್‌ 18ಕ್ಕೆ ದಾಳಿ ನಡೆಯಲಿದೆ ಎಂಬುದು ಗುಪ್ತಚರ ಇಲಾಖೆಗೆ ಸಿಕ್ಕಿದ ಮಾಹಿತಿ. 2005ರ ಜೂನ್‌ 5ರಂದು ಅಯೋಧ್ಯೆಯಲ್ಲಿ ನಡೆದ ಉಗ್ರ ದಾಳಿಯಲ್ಲಿ ಬಂಧಿತರಾದ ನಾಲ್ವರ ವಿಚಾರಣೆ ಮುಗಿದು ಜೂನ್‌ 18ರಂದು ಅಂತಿಮ ತೀರ್ಪು ಹೊರಬೀಳಲಿದೆ. ಅವರಿಗೆ ಕಠಿಣ ಶಿಕ್ಷೆ ವಿಧಿಸಬಹುದೆಂಬ ನಿರೀಕ್ಷೆ ಇದ್ದು, ಹೀಗಾಗಿ ದಾಳಿಯ ಸುದ್ದಿ ಹರಡಿದೆ. ಇತ್ತೀಚೆಗೆ ಬಯಲಾದ ಉಗ್ರ ಜಾಲವೊಂದು ಅಯೋಧ್ಯೆಯನ್ನು ಟಾರ್ಗೆಟ್‌ ಆಗಿ ಇಟ್ಟುಕೊಂಡಿದ್ದು ಬಯಲಾಗಿತ್ತು.


ಅಂದು ಏನಾಗಿತ್ತು?
2005ರ ಜೂನ್‌ 5ರಂದು ಮಾತಾ ಸೀತಾ ರಸೋಯಿಗೆ ಉಗ್ರರು ಗುಂಡಿನ ದಾಳಿ ನಡೆಸುತ್ತಾ ನುಗ್ಗಿದ್ದರು. ಇವರ ದಾಳಿಯನ್ನು ಅತ್ಯಂತ ಬಲವಾಗಿ ಪ್ರತಿರೋಧಿಸಿದ ಸಿಆರ್‌ಪಿಎಫ್‌ ತಂಡ ಐವರನ್ನು ಕೊಂದು ಹಾಕಿತ್ತು. ಬಳಿಕದ ನಡೆದ ತನಿಖೆ ವೇಳೆ ಕಾಶ್ಮೀರದ ನಾಲ್ವರನ್ನು ಬಂಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ