ಆ್ಯಪ್ನಗರ

ಮನೆಯಲ್ಲಿ ಯಾರಿಲ್ಲದಿದ್ದಾಗ, ಆನ್ಲೈನ್‌ನಲ್ಲಿ ಊಟ ಡೆಲಿವರಿ ಪಡೆಯುತ್ತದೆ ಈ ನಾಯಿ

ನಗರ ಪ್ರದೇಶಗಳಲ್ಲಿ ವಾಸಿಸುವರು ಆನ್ಲೈನ್ ಊಟ ಆರ್ಡರ್ ಮಾಡುವುದು ಸಾಮಾನ್ಯ. ಅದು ಮನುಷ್ಯ ಕಥೆ. ಆದರೆ ಕೇರಳದಲ್ಲೊಂದು ನಾಯಿಗೆ ಪ್ರತಿದಿನ ಆನ್ಲೈನ್ ಆಹಾರ ಸರಬರಾಜಾಗುತ್ತದೆ. ಅಷ್ಟಕ್ಕೂ ಈ ಸ್ವಾರಸ್ಯಕರ ಕತೆ ಹಿಂದಿನ ವಾಸ್ತವವೇನು?

TIMESOFINDIA.COM 24 Sep 2019, 6:20 pm
ತಿರುವನಂತಪುರಂ: ಕೆಲ ದಿನಗಳ ಹಿಂದೆ ಶ್ಯಾಡೋ ಊಟವಿಲ್ಲದೆ ಬೀದಿಯಲ್ಲಿ ಅಲೆದಾಡುತ್ತಿದ್ದಳು. ಮತ್ತಿಂದು ಆನ್ಲೈನ್‌ನಲ್ಲಿ ಊಟ ಪಡೆದು ಹೊಟ್ಟೆ ತುಂಬಾ ತಿಂದುಕೊಂಡಿದ್ದಾಳೆ. ಆಕೆ ಒಂದು ತುತ್ತು ಆಹಾರಕ್ಕೂ ಪರದಾಡುತ್ತಿದ್ದ ದಿನಗಳೆಲ್ಲ ಎರಡು ವರ್ಷದ ಹಿಂದೆಯೇ ಮುಗಿದು ಹೋಯಿತು. ನರಪೇತಲಳಂತಿದ್ದ ಅವಳೀಗ ಗುಂಡು ಗುಂಡಾಗಿ ಆರೋಗ್ಯವಾಗಿದ್ದಾಳೆ. ತಿಂದುಂಡುಕೊಂಡು ಖುಷ್ ಖುಷಿಯಾಗಿದ್ದಾಳೆ.
Vijaya Karnataka Web Dog


ಇದು ಯಾವುದೋ ಬಡ, ಅನಾಥ ಮನುಷ್ಯನ ಕಥೆ ಎಂದುಕೊಂಡರೆ ತಪ್ಪು. ಇದು ಬೀದಿನಾಯಿಯೊಂದರ ಕಥೆ. ಇದರ ಹಸಿವಿನ ಬವಣೆಗೆ ಮುಕ್ತಿ ನೀಡಿದ್ದು ವರ್ಗೀಸ್ ಉಮ್ಮನ್ ಎಂಬ ಪ್ರಾಣಿ ಪ್ರೇಮಿ. ಕೌದಿಯಾರ್ ವಸತಿ ಸಂಕೀರ್ಣದ ಮುಂದೆ ಓಡಾಡಿಕೊಂಡಿದ್ದ ಶ್ಯಾಡೋ ಒಂದು ದಿನ ಉಮ್ಮನ ಕಣ್ಣಿಗೆ ಬಿದ್ದಳು. ಕರುಣಾಜನಕ ಸ್ಥಿತಿಯಲ್ಲಿದ್ದ ಆಕೆಯ ಮೇಲೆ ಪ್ರೀತಿಯ ಮಳೆ ಹರಿಸಿದ ಅವರು ಮೂರು ಹೊತ್ತು ಆಹಾರ ನೀಡತೊಡಗಿದರು.

ಯಾರಿಲ್ಲದಿದ್ದರೂ ಶ್ಯಾಡೋಗೆ ಊಟ ತಪ್ಪಲ್ಲ

ಆದರೆ ವೃತ್ತಿಯಲ್ಲಿ ಪ್ರವಾಸ ಆಯೋಜಕರಾಗಿದ್ದ ಅವರು ಸದಾ ಮನೆಯಲ್ಲಿರಲಾಗುವುದಿಲ್ಲ. ಹೀಗಿದ್ದಾಗ ಮನೆಯ ಸದಸ್ಯರು ಆಕೆಗೆ ಊಟ ನೀಡುತ್ತಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತಮ್ಮ ಪ್ರೀತಿಯ ಶ್ಯಾಡೋ ಹೊಟ್ಟೆ ಹಸಿದುಕೊಂಡಿರಬೇಕು ಎಂಬುದನ್ನು ಯೋಚಿಸಿಯೇ ಅವರ ಕರುಳು ಹಿಂಡಿತು. ತಾನು ಇಲ್ಲದಿದ್ದಾಗಲೂ ಅವಳಿಗೆ ಊಟಕ್ಕೆ ತೊಂದರೆಯಾಗಬಾರದೆಂದು ಯೋಚಿಸಿದವರಿಗೆ ಹೊಳೆದದ್ದು ಆನ್ಲೈನ್. ತಕ್ಷಣ ಫುಡ್ ಡೆಲಿವರಿ ಆ್ಯಪ್‌ನಲ್ಲಿ ಶ್ಯಾಡೋ ಹೆಸರಲ್ಲೊಂದು ಖಾತೆ ತೆರೆದರು.

ಮತ್ತೀಗ ಸಮಯಕ್ಕೆ ಸರಿಯಾಗಿ ಡೆಲಿವರಿ ಎಕ್ಸಿಕ್ಯೂಟಿವ್ ಸ್ಥಳಕ್ಕೆ ಬಂದು ಉಮ್ಮನ್‌ಗೆ ಮೊಬೈಲ್ ಕರೆ ಮಾಡುತ್ತಾರೆ. ಅವರು ವಸತಿ ಸಂಕೀರ್ಣದ ಗೇಟ್ ಬಳಿ ಶ್ಯಾಡೋ ಊಟಕ್ಕೆ ಕಾಯುತ್ತಿರಬಹುದು. ಅವನಿಗೆ ನೀಡಿ ಬಿಡಿ ಎಂದು ಸೂಚಿಸುತ್ತಾರೆ. ಫ್ಲ್ಯಾಟ್ ಸೆಕ್ಯೂರಿಟಿ ಗಾರ್ಡ್ ರಾಧಾಕೃಷ್ಣನ್ ಪ್ಯಾಕಿಂಗ್ ಬಿಚ್ಚಿ ಶ್ಯಾಡೋಗೆ ನೀಡುತ್ತಾರೆ. ಅದು ತಿಂದಾದ ಬಳಿಕ ಊಟ ತಂದಿದ್ದ ಪ್ಯಾಕೇಟ್‌ನ್ನು ಕಸದ ತೊಟ್ಟಿಗೆ ಹಾಕಿ ಬಿಡುತ್ತಾರೆ.

ಸದಾ ನೆರಳಂತೆ ಹಿಂಬಾಲಿಸುತ್ತಾಳೆ

ದೂರದಿಂದ ಕಾರು ಬರುತ್ತಿದ್ದುದನ್ನೇ ಗ್ರಹಿಸಿ ಓಡುತ್ತ ಬಂದು ಸ್ವಾಗತಿಸಿ, ಸದಾ ತಮ್ಮ ಹಿಂದೆ ನೆರಳಿನಂತೆ ಸುತ್ತುತ್ತಿದ್ದಕ್ಕಾಗಿ ಆಕೆಗೆ ಶ್ಯಾಡೋ (ನೆರಳು) ಎಂದು ಹೆಸರಿಟ್ಟಿದ್ದೇನೆ. ಅವಳಿಗಾಗಿ ರಸ್ತೆಯ ಹತ್ತಿರದಲ್ಲಿರುವ ಮನೆಯನ್ನೇ ಆಯ್ದುಕೊಂಡು ವಾಸಿಸುತ್ತಿದ್ದೇನೆ ಎನ್ನುತ್ತಾರೆ ಪ್ರಾಣಿ ಪ್ರೇಮಿ ಉಮ್ಮನ್.

ಬೇರೆಯವರು ಕೊಟ್ಟ ಆಹಾರ ಮುಟ್ಟಲ್ಲ

ಶ್ಯಾಡೋ ಮತ್ತು ಉಮ್ಮನ್ ಬಂಧವನ್ನು ಕಳೆದೆರಡು ವರ್ಷಗಳಿಂದ ನೋಡುತ್ತಿರುವ ರಾಧಾಕೃಷ್ಣನ್ ಹೇಳುತ್ತಾರೆ, ''ನನ್ನ ಊಟದಲ್ಲಿ ಆಕೆಗೆ ಪಾಲು ಕೊಟ್ಟರೆ ತಿನ್ನುವುದಿಲ್ಲ. ಉಮ್ಮನ್ ಊಟ ಕೊಡಲು ಆರಂಭಿಸಿದ್ದಾಗಿನಿಂದ ಜಂಕ್ ಪುಡ್‌ ಅಂತೂ ಮುಟ್ಟುವುದಿಲ್ಲ. ಊಟವಾದ ಬಳಿಕ ನೀರು ಬೇಕಾದರೆ ಅದನ್ನು ಸಂಕೇತಿಸುವ ಸೌಂಡು ಮಾಡುತ್ತಾಳೆ. ನಾನಾಗ ನೀರು ಕೊಡುತ್ತೇನೆ''.

ಸುಸೂತ್ರ ಹೆರಿಗೆ ಮಾಡಿಸಿದ ಕುಟುಂಬ

ಇತ್ತೀಚಿಗೆ ಆಕೆ ತಾಯಿಯಾದಳು. ಆಕೆಯ ಹೆರಿಗೆ ಸಮಯದಲ್ಲಿ ಉಮ್ಮನ್ ಅವರ ಇಬ್ಬರು ಗಂಡು ಮಕ್ಕಳಾದ ಜೋಶುವಾ ಮತ್ತು ಜಾಕೋಬ್ ಕಾಳಜಿ ವಹಿಸಿದರು.

''ಆಕೆ ಮರಿ ಹಾಕುತ್ತಿದ್ದಾಗ ಭಾರಿ ಮಳೆಯಾಗುತ್ತಿತ್ತು. ಮರಿ ಹಾಕಲು ಸಣ್ಣ ಸುರಂಗವನ್ನು ಆಯ್ದುಕೊಂಡಿದ್ದ ಆಕೆ ಮಳೆ ಬಂದು ಅಲ್ಲಿ ನೀರು ನುಗ್ಗಿದಾಗ ಆತಂಕದಿಂದ ಕಿರುಚಾಡಲು ಆರಂಭಿಸಿದಳು. ನಾವು ಅಲ್ಲಿಗೆ ಹೋಗಿ ತಾಯಿ ಮತ್ತು ಶಿಶುಗಳನ್ನು ರಕ್ಷಿಸಿದೆವು. ನಮ್ಮ ಅಪಾರ್ಟಮೆಂಟ್ ನಿಯಮದ ಪ್ರಕಾರ ನಾವು ನಾಯಿಯನ್ನು ಸಾಕುವಂತಿಲ್ಲ. ಆದರೂ ಅವುಗಳ ಸುರಕ್ಷತೆಗೆ ತಕ್ಕ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದೆವು. ಸ್ವಲ್ಪ ದೊಡ್ಡದಾದ ಬಳಿಕ ಮರಿಗಳನ್ನು ಜವಾಬ್ದಾರಿಯುತ ಮತ್ತು ಪ್ರೀತಿಯಿಂದ ನೋಡಿಕೊಳ್ಳುವಂತವರಿಗೆ ದತ್ತು ನೀಡಿದೆವು,'' ಎಂದು ಜೋಶುವಾ ಹೇಳುತ್ತಾರೆ.

ಶ್ಯಾಡೋಗೆ ಆಗಾಗ ಲಸಿಕೆಯನ್ನು ಹಾಕಿಸಲು ಸಹ ಉಮ್ಮನ್ ಮರೆಯುವುದಿಲ್ಲ.

ಇವರ ಪ್ರಾಣಿ ಪ್ರೇಮಕ್ಕೆ ನಿಜಕ್ಕೂ ಸೆಲ್ಯೂಟ್ ಹೊಡೆಯಬೇಕಲ್ಲವೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ