ಆ್ಯಪ್ನಗರ

ರಾಜಸ್ಥಾನದ ಸರಿಸ್ಕಾ ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು; 2 IAF ಹೆಲಿಕಾಪ್ಟರ್‌ಗಳಿಂದ ಬೆಂಕಿ ನಂದಿಸುವ ಕಾರ್ಯ

ರಾಜಸ್ಥಾನದ ಸರಿಸ್ಕಾ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಭಾರೀ ಕಾಡ್ಗಿಚ್ಚು ಈಗಾಗಲೇ ಸುಮಾರು 10 ಚದರ ಕಿಮೀ ಅರಣ್ಯವನ್ನು ಆಹುತಿ ತೆಗೆದುಕೊಂಡಿದೆ. ಹುಲಿ ಸಂರಕ್ಷಿತ ಪ್ರದೇಶವಾಗಿರುವುದರಿಂದ ಹುಲಿಗಳ ಜೀವಕ್ಕೆ ಅಪಾಯ ಒದಗಿದ್ದು, ವಾಯುಸೇನೆಯ 2 ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

Authored byಅವಿನಾಶ ವಗರನಾಳ | Vijaya Karnataka Web 29 Mar 2022, 5:15 pm

ಹೈಲೈಟ್ಸ್‌:


  • ರಾಜಸ್ಥಾನದ ಸರಿಸ್ಕಾ ಸಂರಕ್ಷಿತ ಹುಲಿ ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು
  • 10 ಚದರ ಕಿಮೀ ವ್ಯಾಪಿಸಿರುವ ಬೆಂಕಿ, 1800 ಫುಟ್ಬಾಲ್‌ ಮೈದಾನದಷ್ಟು ಅರಣ್ಯ ಭಸ್ಮ
  • 2 IAF ಹೆಲಿಕಾಪ್ಟರ್‌ಗಳಿಂದ ಬೆಂಕಿ ನಂದಿಸುವ ಕಾರ್ಯ, ಅಪಾಯದಲ್ಲಿ ಹುಲಿಗಳು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Sariska Tiger Reserve
ಜೈಪುರ: ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ದೇಶದಲ್ಲಿ ಕಾಡ್ಗಿಚ್ಚು ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸೋಮವಾರ ಹೊತ್ತಿಕೊಂಡಿರುವ ಬೆಂಕಿ ಈಗಾಗಲೇ 10 ಚದರ ಕಿಮೀ ಅರಣ್ಯವನ್ನು ವ್ಯಾಪಿಸಿದ್ದು, ಸುಮಾರು 1,800 ಪುಟ್‌ಬಾಲ್‌ ಮೈದಾನಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಹುಲಿಗಳ ಜೀವಕ್ಕೂ ಅಪಾಯ ತಂದೊಡ್ಡಿದೆ.
ಬೆಂಕಿ ನಂದಿಸಲು ಭಾರತೀಯ ವಾಯುಪಡೆ ನೆರವಿಗೆ ಧಾವಿಸಿದ್ದು, ಎರಡು ಹೆಲಿಕಾಪ್ಟರ್‌ಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ವ್ಯಾಪಿಸಿರುವ ಪ್ರದೇಶದಲ್ಲಿ ಎಸ್‌ಟಿ-17 ಎಂಬ ಸಂಕೇತ ಹೊಂದಿರು ಹುಲಿ ತನ್ನ ಎರಡು ಮರಿಗಳೊಂದಿಗೆ ವಾಸವಾಗಿದ್ದು, ಆ ಹುಲಿಗಳು ಉಸಿರುಗಟ್ಟಿ ಸಾಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಹುಲಿಗಳಿವೆ.

ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಬೆಂಕಿ ಹತೋಟಿಗೆ ಬರುತ್ತಿಲ್ಲ. ಈ ಹಿನ್ನೆಲೆ ಎರಡು ಐಎಎಫ್‌ ವಿಮಾನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ಅರಣ್ಯದಿಂದ 43 ಕಿಮೀ ದೂರವಿರುವ ರಾಜಸ್ಥಾನದ ಸಿಲಿಸೆರ್ಹ್‌ ಸರೋವರದಿಂದ ನೀರನ್ನು ತಂದು ಕಾಡ್ಗಿಚ್ಚಿನ ಮೇಲೆ ಸುರಿಯುತ್ತಿವೆ. ಆದರೂ ಪರಿಸ್ಥಿತಿ ಮಾತ್ರ ಇನ್ನು ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ನಾಗರಹೊಳೆ ಅರಣ್ಯಕ್ಕೆ ಫೈರ್‌ಲೈನ್‌ ರಕ್ಷಣೆ: ಕಾಡ್ಗಿಚ್ಚು ತಡೆಯುವ ಉದ್ದೇಶ, ತಿಂಗಳಾಂತ್ಯಕ್ಕೆ ಬೆಂಕಿರೇಖೆ ನಿರ್ಮಾಣ ಪೂರ್ಣ!
ಈ ಬಗ್ಗೆ ಭಾರತೀಯ ವಾಯುಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಭವಿಸಿದ ದೊಡ್ಡ ಮಟ್ಟದ ಕಾಡ್ಗಿಚ್ಚನ್ನು ನಿಯಂತ್ರಿಸಲು ಸಹಾಯ ಮಾಡುವಂತೆ ಅಲ್ವಾರ್ ಜಿಲ್ಲಾಡಳಿತ ತುರ್ತು ಸಂದೇಶ ಕಳುಹಿಸಿದ ಬಳಿಕ ನಾವು ಎರಡು Mi-17 V5 ಹೆಲಿಕಾಪ್ಟರ್‌ಗಳನ್ನು ಬೆಂಕಿ ನಂದಿಸಲು ಕಳುಹಿಸಿದ್ದೇವೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದೆ.

ಬೇಸಿಗೆ ಆರಂಭದಲ್ಲೇ ನಾಗರಹೊಳೆಯಲ್ಲಿ ಕಾಡ್ಗಿಚ್ಚು, ಬೆಂಕಿಯ ಕೆನ್ನಾಲಿಗೆಗೆ 40 ಎಕರೆ ಅರಣ್ಯ ಭಸ್ಮ
ಇನ್ನು, ಅರಾವಳಿ ಶ್ರೇಣಿಯ ಬೆಟ್ಟಗಳು ಮತ್ತು ಕಿರಿದಾದ ಕಣಿವೆಗಳನ್ನು ಸರಿಸ್ಕಾ ಮೀಸಲು ಅರಣ್ಯ ಪ್ರದೇಶ ಒಳಗೊಂಡಿದೆ. ಇಲ್ಲಿನ ಅರಣ್ಯಗಳು ಶುಷ್ಕ ವಾತಾವರಣ ಹೊಂದಿದ್ದು, ಚಿರತೆ, ಕಾಡು ನಾಯಿ, ಹುಲಿ, ಕಾಡು ಬೆಕ್ಕು, ಹೈನಾ ಮತ್ತು ನರಿ ಸೇರಿ ಹಲವಾರು ಮಾಂಸಾಹಾರಿ ಪ್ರಾಣಿಗಳಿಗೆ ನೆಲೆಯಾಗಿದೆ. ಅದರಲ್ಲೂ ಪ್ರಮುಖವಾಗಿ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ.

ನಮಗೂ ಬೇಕು ಕಾಡ್ಗಿಚ್ಚು ಆರಿಸಲು 'ಗ್ಲೋಬಲ್‌ ಸೂಪರ್‌ ಟ್ಯಾಂಕರ್‌' ವಿಮಾನ!
ಇನ್ನು, ದೇಶದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಣತಿ ನಡೆಯುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹುಲಿ ಗಣತಿಯ ವರದಿ ಬಂದಿದ್ದು, 2021ರಲ್ಲಿ 126 ಹುಲಿಗಳು ಸಾವನ್ನಪ್ಪಿವೆ ಎಂದು ಆ ವರದಿ ಹೇಳಿತ್ತು. ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಪ್ರದೇಶ, ಕರ್ನಾಟಕದಲ್ಲಿ ಕಂಡುಬರುತ್ತಿದ್ದು, ಅತಿ ಹೆಚ್ಚು ಹುಲಿಗಳು ಇರುವ ರಾಜ್ಯಗಳಲ್ಲಿ ಮೊದಲೆರಡು ಸ್ಥಾನಗಳನ್ನು ಈ ರಾಜ್ಯಗಳು ಪಡೆದುಕೊಂಡಿವೆ. ವಿಶ್ವದಲ್ಲಿರುವ ಹುಲಿಗಳಲ್ಲಿ ಶೇ.75 ರಷ್ಟು ಹುಲಿಗಳು ಭಾರತದಲ್ಲಿ ಇವೆ.


ಕರ್ನಾಟಕಕ್ಕೂ ಎಚ್ಚರಿಕೆ ಗಂಟೆ!
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲು ನೆತ್ತಿ ಸುಡುತ್ತಿದೆ. ಕರ್ನಾಟಕವು ಅತಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಹೊಂದಿರುವುದರಿಂದ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಸಾಧ್ಯತೆ ಇದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತಿ ಅವಶ್ಯಕವಾಗಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ