ಕಳ್ಳಸಾಗಣೆದಾರರ ಕೈಯಲ್ಲಿ ತಿರುಪತಿ ಮುಡಿ;ಆಂಧ್ರದಿಂದ ಚೀನಾಕ್ಕೆ ಗಡಿದಾಟುತ್ತಿದೆ ಭಕ್ತರ ಕೂದಲು!
ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಮುಡಿ ನೀಡುವುದು ಪದ್ಧತಿ. ಹೀಗೆ ಇಲ್ಲಿ ನೀಡುವ ಮುಡಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಆದ್ದರಿಂದ ಕೂದಲಿನ ಕಳ್ಳ ಸಾಗಾಣಿಕೆ ಕೂಡ ಹೆಚ್ಚಿದ್ದು, ಇದನ್ನು ತಡೆಯಲು ಎಷ್ಟೇ ಕ್ರಮ ಕೈಗೊಂಡರೂ ದೇಶದ ಕೂದಲನ್ನು ಕಳ್ಳಮಾರ್ಗಗಳಲ್ಲಿ ಚೀನಾಗೆ ರಫ್ತು ಮಾಡುವ ಜಾಲ ವಿಸ್ತರಿಸುತ್ತಲೇ ಇದೆ.
* ನಾಗರಾಜು ಅಶ್ವತ್ಥ, ಬೆಂಗಳೂರು ಗ್ರಾಮಾಂತರ
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ ತಿರುಪತಿ ವೆಂಕಟರಮಣ ಸ್ವಾಮಿ ಸನ್ನಿಧಾನದಲ್ಲಿ ಭಕ್ತರು ನೀಡುವ ಮುಡಿಗೆ ಚೀನಾ, ವಿಯೆಟ್ನಾಂ, ಅಮೆರಿಕಾ ಸೇರಿ ನಾನಾ ದೇಶಗಳಲ್ಲಿಸಾಕಷ್ಟು ಬೇಡಿಕೆಯಿದ್ದು, ಕಳ್ಳಸಾಗಣೆ ಕರಿನೆರಳು ಬೀಳಲಾರಂಭಿಸಿದೆ. ಕಳೆದೆರಡು ವರ್ಷಗಳ ಹಿಂದೆ ದೊಡ್ಡ ಸದ್ದು ಮಾಡಿದ್ದ ಕೂದಲು ಸಾಗಣೆಗೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ಕಾರ್ಯಾಚರಣೆ ಮೂಲಕ ಬ್ರೇಕ್ ಹಾಕಲು ಪ್ರಯತ್ನಿಸಿತ್ತು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಗ್ಗೆ ಎಲ್ಲರೂ ಪರಿತಪಿಸುತ್ತಿರುವುದರಿಂದ ತಿರುಪತಿ ಮಾತ್ರವಲ್ಲದೆ ದೇಶದ ಕೂದಲನ್ನು ಕಳ್ಳಮಾರ್ಗಗಳಲ್ಲಿ ಚೀನಾಗೆ ರಫ್ತು ಮಾಡುವ ಜಾಲ ವಿಸ್ತರಿಸುತ್ತಿದೆ.
ಮಯನ್ಮಾರ್ಗೆ ಸಾಗಣೆ
ಇಲ್ಲಿಂದ ಹೈದರಾಬಾದ್, ಪಶ್ಚಿಮ ಬಂಗಾಳ ಮಾರ್ಗದಲ್ಲಿ ಮಾಯನ್ಮಾರ್ ಗಡಿಗೆ ಕೂದಲು ಅಕ್ರಮ ಸಾಗಣೆಯಾಗುತ್ತಿದೆ ಎನ್ನುವ ಆರೋಪಗಳು ಸಾಕಷ್ಟಿವೆ. ದೇಶದ ನಾನಾ ದೇವಸ್ಥಾನಗಳಲ್ಲೂ ಮುಡಿ ತೆಗೆಯುವ ಪದ್ಧತಿಯಿದ್ದರೂ, ಮಹಿಳೆಯರ ಉದ್ದನೆಯ ಕೂದಲಿಗೆ ಸಾಕಷ್ಟು ಬೇಡಿಕೆಯಿದೆ. ಜತೆಗೆ, 19 ರಿಂದ 26 ಸೆಂಟಿ ಮೀಟರ್ ಪ್ರತಿ ಕೆಜಿ ಕೂದಲಿಗೆ 25ರಿಂದ 30,000 ರೂ. ದರವಿದೆ. ಹೀಗಾಗಿ, ಮಹಿಳೆಯರು ಮುಡಿ ನೀಡುವ ದೇಗುಲಗಳಲ್ಲಿಈ ಕೂದಲು ದಂಧೆ ಸಕ್ರಿಯವಾಗಿದ್ದು, ಕಳ್ಳದಾರಿಗಳಲ್ಲಿ ಮುಡಿ ಕೂದಲನ್ನು ಪ್ರಮುಖ ನಗರಗಳಿಗೆ ಸಾಗಾಟ ಮಾಡಿ ಅಲ್ಲಿಂದ ವಿದೇಶಿ ನೆಲಕ್ಕೆ ರಫ್ತು ಮಾಡುವ ಜಾಲ ವಿಸ್ತರಿಸಿಕೊಂಡಿವೆ. ಈ ಜಾಲಕ್ಕೆ ಬ್ರೇಕ್ ಹಾಕಲು ಜಾರಿ ನಿರ್ದೇಶನಾಲಯ(ಇಡಿ) ಪ್ರಯತ್ನಿಸಿ, ಹೈದರಾಬಾದ್ನಲ್ಲಿ ಕೆಲ ಪ್ರಭಾವಿ ಕಂಪನಿಗಳಲ್ಲಿ ಶೋಧ ಕಾರ್ಯ ನಡೆಸಿ ಪ್ರಕರಣ ದಾಖಲಿಸಿಕೊಂಡರೂ ಇಂಡೋ - ಬಾಂಗ್ಲಾದೇಶ, ಇಂಡೋ - ಮಾಯನ್ಮಾರ್ ಗಡಿಗಳಲ್ಲಿ ಕೂದಲು ಕಳ್ಳಸಾಗಣೆಗೆ ಬ್ರೇಕ್ ಬಿದ್ದಿಲ್ಲ.
ಕಳ್ಳಸಾಗಾಣಿಕೆಗೆ ಕಾರಣ ಏನು?
ವಿದೇಶಗಳಿಗೆ ಕಾನೂನು ಬಾಹಿರವಾಗಿ ಕೂದಲು ಕಳ್ಳಸಾಗಣೆಗೆ ವಿದೇಶಿ ವ್ಯಾಪಾರ ನಿರ್ದೇಶನಾಲಯ(ಡಿಜಿಎಫ್ಟಿ)ದ ನಿಯಮ ಮತ್ತು ತೆರಿಗೆ ಮುಖ್ಯ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂದಲು ಮಾರಾಟಕ್ಕಿರುವ ಬೇಡಿಕೆಯನುಸಾರ ಡಿಜಿಎಫ್ಟಿ ಪರವಾನಿಗೆ ಪಡೆದು, ಶೇ.28ರಷ್ಟು ತೆರಿಗೆ ಪಾವತಿಸಬೇಕು. ಜತೆಗೆ, ಅಂತಾರಾಷ್ಟ್ರೀಯ ಮಾನದಂಡದನುಸಾರ ಕಚ್ಚಾ ಕೂದಲನ್ನು ಡೈಯಿಂಗ್, ಸಾಫ್ಟಿಂಗ್, ಸ್ಟೆರ್ತ್ರೖಟಿಂಗ್ ಸೇರಿ ನಾನಾ ಹಂತಗಳಲ್ಲಿ ಪರಿಷ್ಕರಣೆಗೊಳಪಡಿಸಲಾಗುತ್ತದೆ. ಈ ನಿಯಮಗಳನ್ನೆಲ್ಲಾ ಪಾಲಿಸಿದ ಬಳಿಕ ವಿದೇಶಿ ರಫ್ತಿಗೆ ಅನುಮತಿ ಸಿಗುತ್ತದೆ. ಪ್ರತಿ ವರ್ಷ ದೇಶದಿಂದ ಸರಾಸರಿ 300ರಿಂದ 500 ಮಿಲಿಯನ್ ಡಾಲರ್ ಮೌಲ್ಯದ ಕೂದಲು ರಫ್ತಾಗುತ್ತದೆ.
ಕಲ್ಯಾಣ ಕಟ್ಟದಿಂದ ಕಳ್ಳಮಾರ್ಗ?
ಆಂಧ್ರದ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ)ನಿಂದ ಮುಡಿ ಹರಕೆ ನೀಡುವ ಭಕ್ತರ ಸೇವೆಗೆ ಪಕ್ಕಾ ವ್ಯವಸ್ಥೆ ಮಾಡಲಾಗಿದೆ. ನಿತ್ಯ ದೇವಸ್ಥಾನಕ್ಕೆ ಆಗಮಿಸುವ ಸಾವಿರಾರು ಭಕ್ತರ ಮುಡಿ ತೆಗೆಯಲು 1316 ಮಂದಿ ಕ್ಷೌರಿಕರ ನಿಯೋಜನೆಯಾಗಿದೆ. ‘ಕಲ್ಯಾಣ ಕಟ್ಟ’ ಎಂದು ಕರೆಯಲ್ಪಡುವ ಒಟ್ಟು 9 ಮುಡಿ ಸೇವೆ ಪ್ರದೇಶಗಳಿದ್ದು, ಪಾಳಿ ವ್ಯವಸ್ಥೆಯಲ್ಲಿ ಮುಡಿ ತೆಗೆಯುವ ಕೆಲಸ ನಿರಂತರವಾಗಿ ನಡೆಯುತ್ತದೆ. ನಿತ್ಯ ಪ್ರತಿ 6 ಗಂಟೆಗೊಂದು ಶಿಫ್ಟ್ ಪ್ರಕಾರ ಮುಡಿ ತೆಗೆಯಲಾಗುತ್ತಿದ್ದು, ಪ್ರತಿಯೊಂದು ಅವಧಿಗೆ 1200ರಿಂದ 1400 ಮಂದಿ ಕೂದಲು ನೀಡುತ್ತಾರೆ.
ಹೀಗೆ, ನಿತ್ಯ 300ರಿಂದ 400 ಕೆಜಿಯಷ್ಟು ಕೂದಲು ಸಂಗ್ರಹವಾಗುತ್ತಿದೆ. ತಿರುಮಲ ದೇವಸ್ಥಾನದ ಕಲ್ಯಾಣ ಕಟ್ಟದಲ್ಲಿಸಂಗ್ರಹವಾಗುವ ಮುಡಿ ಕೂದಲನ್ನು ಸಂಗ್ರಹಿಸಿ, ಬೆಟ್ಟದ ಕೆಳಗಿನ ಹರಾಜು ಪ್ರಕ್ರಿಯೆ ವಿಭಾಗಕ್ಕೆ ಕಳಿಸಲಾಗುತ್ತದೆ. ಪ್ರತಿ 3 ತಿಂಗಳಿಗೊಮ್ಮೆ ಹರಾಜು ಪ್ರಕ್ರಿಯೆ ಮೂಲಕ ಟೆಂಡರ್ ಕರೆಯಲಾಗುತ್ತದೆ. ಈ ವ್ಯವಸ್ಥೆ ಸಂಪೂರ್ಣ ಆನ್ಲೈನ್ನಲ್ಲಿ ನಡೆಯುತ್ತದೆ. ಬೆಟ್ಟದ ಮೇಲೆ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗುವ ಕೂದಲು ಗೋದಾಮುಗಳಿಗೆ ತಲುಪುವ ಮಧ್ಯೆ ಅನ್ಯಮಾರ್ಗ ತಲುಪುವ ಸಾಧ್ಯತೆಗಳಿವ ಎನ್ನುವುದು ಅಧಿಕಾರಿಗಳ ಸಂಶಯ. ಈ ಕಳ್ಳಮಾರ್ಗಗಳನ್ನು ಹತೋಟಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
ಹವಾಲಾ ಹಾದಿ!
ಕೂದಲು ಕಳ್ಳಸಾಗಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ದೇಶಗಳೊಂದಿಗೆ ಸಂಪರ್ಕ ಹೊಂದಿದ್ದು, ಹವಾಲಾ ಸ್ವರೂಪ ಪಡೆದಿರುವುದನ್ನು 2022ರ ಇಡಿ ದಾಳಿ ವೇಳೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದಿದ್ದ ದಾಳಿ ವೇಳೆ ಕೋಟ್ಯಾಂತರ ರೂ. ಬೆಲೆ ಬಾಳುವ ಕಚ್ಚಾ ಕೂದಲು ಮಾತ್ರವಲ್ಲದೇ ಕೆಲ ವ್ಯಾಪಾರಿಗಳು ಸಹ ಸಿಕ್ಕಿಬಿದ್ದಿದ್ದರು. ಇದೇ ವೇಳೆ ಮಾಯನ್ಮಾರ್ ಮಾರ್ಗವಾಗಿ ದೇಶದ ಗಡಿ ದಾಟುತ್ತಿದ್ದ ಅಕ್ರಮ ಕೂದಲು ಕಳ್ಳಸಾಗಣೆ ಯನ್ನು ಆರೋಪಿಗಳು ಬಾಯಿಬಿಟ್ಟಿದ್ದರು.
ಆಂಧ್ರ, ತೆಲಂಗಾಣ, ಪಶ್ಚಿಮಬಂಗಾಳದ ಮೂಲಕ ಇಂಡೋ-ಬಾಂಗ್ಲಾ ಗಡಿ, ಮಯನ್ಮಾರ್ ಮೂಲಕ ಚೀನಾ ಮಾರುಕಟ್ಟೆ ತಲುಪುತ್ತಿದ್ದ ಕಚ್ಚಾ ಕೂದಲು ಆ ಬಳಿಕ ಹವಾಲಾ ದಂಧೆಕೋರರ ಮೂಲಕ ಹಣ, ಚಿನ್ನದ ರೂಪದಲ್ಲಿ ಪುನಃ ದೇಶದ ವ್ಯಾಪಾರಿಗಳ ಕೈಸೇರುತ್ತಿರುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದರು. ಹೈದರಾಬಾದ್ನಲ್ಲಿಈ ಪ್ರಕ್ರಿಯೆಗಳನ್ನು ನಡೆಸಲೆಂದೇ ಮಿಜೋರಾಂ ಮೂಲದ ಆರೋಪಿಗಳು ಎಂಟರ್ಪ್ರೈಸಸ್ ಸಂಸ್ಥೆಗಳನ್ನು ಹೊಂದಿದ್ದ ಬಗ್ಗೆ ಇಡಿ ತನ್ನ ವರದಿಯಲ್ಲಿ ಹೇಳಿತ್ತು. ಆದರೆ, ದಾಳಿ ನಡೆದು ವರ್ಷ ಕಳೆದರೂ ನಂತರದ ಪ್ರಕ್ರಿಯೆಗಳ ಕುರಿತು ಯಾವುದೇ ಮಾಹಿತಿಗಳಿಲ್ಲ.
ಪ್ರಮುಖ ಕಳ್ಳಸಾಗಣೆ ಪ್ರಕರಣಗಳು
* 2021ರಲ್ಲಿಇಂಡೋ ಬಾಂಗ್ಲಾ ಗಡಿಯಲ್ಲಿ ಬಿಎಸ್ಎಫ್ ಯೋಧರಿಂದ 397 ಕೆಜಿ ಅಕ್ರಮ ಕೂದಲು ವಶ
* 2022ರ ಫೆ.14ರಂದು ಹೈದರಾಬಾದ್ನಲ್ಲಿ ಕೂದಲು ರಫ್ತು ಜಾಲದ ಮೇಲೆ ಇಡಿ ದಾಳಿ.
* 2023ರ ಜ.8ರಂದು ಇಂಡೋ-ಬಾಂಗ್ಲಾ ಗಡಿಯಲ್ಲಿ 300ಕೆಜಿ ಅಕ್ರಮವಾಗಿ ಸಾಗಿಸುತ್ತಿದ್ದ ಕೂದಲು ವಶ.
ಬೇಡಿಕೆ- ಪೂರೈಕೆ
* ದೊಡ್ಡ ಪ್ರಮಾಣದಲ್ಲಿ ಕೂದಲು ಪೂರೈಕೆ ರಾಜ್ಯಗಳು ; ಪಶ್ಚಿಮಬಂಗಾಳ, ಆಂದ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು
* ಕಚ್ಚಾ ಕೂದಲು ಬೇಡಿಕೆಯುಳ್ಳ ದೇಶಗಳು ; ಚೀನಾ, ವಿಯೇಟ್ನಾಂ, ಅಮೆರಿಕಾ, ಹಾಂಗ್ಕಾಂಗ್, ಬಾಂಗ್ಲಾದೇಶ
ನಿತ್ಯ 400 ಕೆಜಿ ಕೇಶ
ತಿರುಪತಿ ದೇವಸ್ಥಾನದಲ್ಲಿ ನಿತ್ಯ ಲಕ್ಷಾಂತರ ಭಕ್ತರಿಂದ ಸರಾಸರಿ 400 ಕೆಜಿ ಮುಡಿ ಕೂದಲು ಹರಕೆ ಸ್ವರೂಪದಲ್ಲಿಒಂದೇ ಕಡೆ ಸಂಗ್ರಹವಾಗುತ್ತಿದೆ. ಇಲ್ಲಿ ಸಿಗುವುದು ‘ಎ’ಗ್ರೇಡ್ ಕೂದಲಾಗಿದ್ದು, ಈ ಕಾರಣಕ್ಕೆ ಇಲ್ಲಿಅಕ್ರಮ ಜಾಲ ಹೆಚ್ಚು ಸಕ್ರಿಯವಾಗಿದೆ.
* ಸ್ಮಗ್ಲಿಂಗ್ ರೂಟ್ಮ್ಯಾಪ್!
ತಿರುಪತಿ - ಹೈದರಾಬಾದ್ - ಪಶ್ಚಿಮ ಬಂಗಾಳ - ಮೇಘಾಲಯ - ಮಣಿಪುರ - ಮಾಯನ್ಮಾರ್ - ಚೀನಾ
ಕೇಶ ಕಳ್ಳ ಸಾಗಾಣಿಕೆಗೆ ಯಾರು ಏನಂತಾರೆ?
ರಾಜ್ಯದಲ್ಲಿ ಮನೆಗಳಿಂದ ಸಂಗ್ರಹಿಸುವ ಕೂದಲನ್ನಷ್ಟೇ ಬಳಸಿ ವಿಗ್ಗಳಿಗೆ ಅಗತ್ಯವೆನಿಸುವ ಕಚ್ಚಾ ಉತ್ಪನ್ನವನ್ನು ತಯಾರಿಸುತ್ತೇವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಗುಲಗಳಿಂದ ರಫ್ತಾಗುವ ಕೂದಲನ್ನು ಬಳಸಲಾಗುತ್ತದೆ. ವಿದೇಶಗಳಿಗೆ ಆಮದು ಸುಂಕ ಕೊಡಬೇಕಾಗಿರುವುದರಿಂದ ಕಳ್ಳಮಾರ್ಗಗಳು ಸೃಷ್ಟಿಯಾಗಿವೆ ಎನ್ನುತ್ತಾರೆ ಬೆಂಗಳೂರಿನ ಕಚ್ಚಾ ಕೂದಲು ತಯಾರಕ ವಿರುಪಾಕ್ಷ.
ತಿರುಪತಿಯಲ್ಲಿ ಭಕ್ತರ ಮುಡಿ ಕೂದಲನ್ನು ಅಂತಾರಾಷ್ಟ್ರೀಯ ಮಾನದಂಡಕ್ಕೆ ತಕ್ಕಂತೆ ನಾನಾ ಹಂತಗಳಲ್ಲಿ ಪರಿಷ್ಕರಣೆಗೊಳಿಸಿ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಆನ್ಲೈನ್ನಲ್ಲಿಇ-ಹರಾಜು ನಡೆಸುವ ಮೂಲಕ ವಾರ್ಷಿಕ 120ರಿಂದ 150ಕೋಟಿ ಆದಾಯ ಗಳಿಸಲಾಗುತ್ತಿದೆ ಎಂದು ತಿರುಪತಿ ಮುಡಿ ಕೂದಲು ಹರಾಜು ವಿಭಾಗದ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಹೇಳಿದ್ದಾರೆ.