ಆ್ಯಪ್ನಗರ

ಅತಂತ್ರ ಫಲಿತಾಂಶದ ಮುನ್ಸೂಚನೆ, ಗೋವಾಕ್ಕೆ 'ಟ್ರಬಲ್ ಶೂಟರ್‌' ಎಂಟ್ರಿ; ಫಲಿಸುತ್ತಾ ಡಿಕೆಶಿ ತಂತ್ರ?

ಗೋವಾ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ (ಮಾರ್ಚ್‌ 10) ಪ್ರಕಟಗೊಳ್ಳಲಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು 'ಟ್ರಬಲ್‌ ಶೂಟರ್‌' ಡಿಕೆ ಶಿವಕುಮಾರ್‌ರನ್ನು ಕಾಂಗ್ರೆಸ್‌ ಗೋವಾಕ್ಕೆ ಕಳುಹಿಸಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 9 Mar 2022, 1:02 pm
ಬೆಂಗಳೂರು: 40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣಾ ಫಲಿತಾಂಶ ಅತಂತ್ರವಾಗಿರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದ್ದು, ಪರಿಸ್ಥಿತಿ ಎದುರಿಸಲು ಎರಡೂ ಪಕ್ಷಗಳು ಭಾರೀ ತಯಾರಿ ಆರಂಭಿಸಿವೆ. ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗಾಗಲೇ ಗೋವಾಗೆ ದೌಡಾಯಿಸಿದ್ದು, ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ಡಿಕೆಶಿ ತಂತ್ರ ಗೋವಾದಲ್ಲಿ ವರ್ಕೌಟ್ ಆಗುತ್ತಾ ಎಂಬ ಕುತೂಹಲ ಮೂಡಿದೆ.
Vijaya Karnataka Web dk shivkumar new


ಫೆಬ್ರವರಿ 14ರಂದು ಆರಂಭಗೊಂಡ ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ನಾಳೆ ಅಂದರೆ ಗುರುವಾರ (ಮಾರ್ಚ್‌ 10) ಪ್ರಕಟಗೊಳ್ಳಲಿದೆ. ಇದರಲ್ಲಿ ಗೋವಾದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದೆ.

ಎಕ್ಸಿಟ್‌ ಪೋಲ್‌ಗಳು ಇಂಥಹದ್ದೊಂದು ಭವಿಷ್ಯ ನುಡಿದಿದ್ದೇ ತಡ ಗೋವಾದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭಗೊಂಡಿದೆ. ಗೋವಾದಲ್ಲಿ ಸರ್ಕಾರ ರಚನೆ ಮಾಡಲು 21 ಸದಸ್ಯರ ಬೆಂಬಲ ಅಗತ್ಯವಿದೆ. ಸದ್ಯಕ್ಕೆ ಈ ಸಂಖ್ಯೆಯನ್ನು ಯಾರು ತಲುಪಲ್ಲ ಎಂದು ಸಮೀಕ್ಷೆಗಳು ಹೇಳಿದ್ದು, ಕಾಂಗ್ರೆಸ್ 14 - 17 ಸ್ಥಾನ, ಬಿಜೆಪಿಯೂ 14 - 17 ಹಾಗೂ ಎಎಪಿ 2- 4, ಟಿಎಂಸಿ 2-4 ಮತ್ತು ಇತರರು 3- 6 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಿವೆ.

Goa Exit Poll 2022: ಗೋವಾ ಮತ್ತೆ ಅತಂತ್ರ? ಕಾಂಗ್ರೆಸ್‌ಗೆ ಅಧಿಕ ಸ್ಥಾನ, ಎಎಪಿ ಕಿಂಗ್‌ಮೇಕರ್‌?
ಕಳೆದ ಬಾರಿ ಗೋವಾದಲ್ಲಿ ಗರಿಷ್ಠ ಸ್ಥಾನಗಳಲ್ಲಿ ಗೆಲುವು ಸಾಧಿಸಿಯೂ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್‌ ವಿಫಲವಾಗಿತ್ತು. ಹಾಗಾಗಿ ಈ ಬಾರಿ ಆ ತಪ್ಪು ಮರುಕಳಿಸಬಾರದು ಎಂಬ ಕಾರಣಕ್ಕೆ ವೀಕ್ಷಕನ ರೂಪದಲ್ಲಿ ಡಿಕೆ ಶಿವಕುಮಾರ್ ಅವರನ್ನು ಹೈಕಮಾಂಡ್‌ ಗೋವಾಕ್ಕೆ ಕಳುಹಿಸಿದೆ. ಗೋವಾದಲ್ಲಿ ಮತ್ತೋರ್ವ ಕನ್ನಡಿಗ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಉಸ್ತುವಾರಿಯಾಗಿ ಇದ್ದಾರೆ. ಡಿಕೆಶಿ ಅವರಿಗೆ ಸತೀಶ್ ಜಾರಕಿಹೊಳಿ ಕೂಡ ಸಾಥ್‌ ನೀಡಿದ್ದು, ಮೂವರೂ ಕನ್ನಡಿಗರು ಗೋವಾದಲ್ಲಿ ಬೀಡುಬಿಟ್ಟಿದ್ದಾರೆ.

ಗೋವಾ ಕೈ ಶಾಸಕರು ಕರ್ನಾಟಕಕ್ಕೋ ಮುಂಬೈಗೋ?

ಗೋವಾದಲ್ಲಿ ಆಪರೇಷನ್ ಕಮಲದ ಭೀತಿ ಜೋರಾಗಿರುವುದರಿಂದ ಕಾಂಗ್ರೆಸ್ ಶಾಸಕರನ್ನು ಅಗತ್ಯ ಬಿದ್ದರೆ ಕರ್ನಾಟಕ ಅಥವಾ ಮುಂಬೈ ರೆಸಾರ್ಟ್‌ಗಳಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಕಳೆದ ಬಾರಿ ಪಕ್ಷಾಂತರವೇ ಕಾಂಗ್ರೆಸ್ ಗೆ ಬಹುದೊಡ್ಡ ಸವಾಲಾಗಿತ್ತು. ಕಾಂಗ್ರೆಸ್ ಶಾಸಕರು ಪಕ್ಷಾಂತರಗೊಂಡ ಹಿನ್ನೆಲೆಯಲ್ಲಿ ಗೋವಾದಲ್ಲಿ ಕೈ ಪಾಳಯ ಭಾರೀ ಹಿನ್ನಡೆ ಹಾಗೂ ಮುಜುಗರ ಅನುಭವಿಸಿತ್ತು. ಈ ನಿಟ್ಟಿನಲ್ಲಿ ಈ ಬಾರಿ ಅದಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ಗೋವಾದಲ್ಲಿ ಕಾಂಗ್ರೆಸ್​ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಏರೋದು ಖಚಿತ; ಡಿಕೆಶಿ ವಿಶ್ವಾಸ
ಆದರೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಇರುವ ಕಾರಣಕ್ಕಾಗಿ ಕಾಂಗ್ರೆಸ್ ಶಾಸಕರನ್ನು ಕರ್ನಾಟಕದ ರೆಸಾರ್ಟ್‌ಗೆ ಕರೆತರುವ ಸಾಧ್ಯತೆ ಕಡಿಮೆ. ಬದಲಾಗಿ ಮುಂಬೈಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಕಾಂಗ್ರೆಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಡಿಕೆ ಶಿವಕುಮಾರ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದ್ದು, ಅತಂತ್ರ ಫಲಿತಾಂಶ ಬಂದಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ದಿನೇಶ್ ಗುಂಡೂರಾವ್ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಬಿಜೆಪಿಯೂ ಅತಂತ್ರ ಫಲಿತಾಂಶವನ್ನು ಎದುರಿಸಲು ತಂತ್ರ ರೂಪಿಸುತ್ತಿದ್ದು ಸಿಎಂ ಪ್ರಮೋದ್ ಸಾವಂತ್‌ ಮಂಗಳವಾರವೇ ಪ್ರಧಾನಿ ಭೇಟಿಯಾಗಿ ಈ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ನಾಯಕರು ಬಿಜೆಪಿಯ ತಂತ್ರಗಳನ್ನು ಎದುರಿಸಲು ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದ್ದಾರೆ? ಫಲಿತಾಂಶ ಹೇಗಿರಲಿದೆ? ಎಲ್ಲವನ್ನೂ ತಿಳಿದುಕೊಳ್ಳಲು ಒಂದು ದಿನ ಕಾಯಬೇಕಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ