ಆ್ಯಪ್ನಗರ

ರಫೇಲ್ ಡೀಲ್‌: ನಾನು ಸುಳ್ಳು ಹೇಳಲ್ಲ, ರಿಲಯನ್ಸ್‌ ಗ್ರೂಪ್ ಆಯ್ಕೆ ನಮ್ಮದೇ: ಡಸಾಲ್ಟ್‌ ಸಿಇಓ

'ಸ್ವತಃ ನಾವೇ ಅಂಬಾನಿಯವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಈಗಾಗಲೇ ರಿಲಯನ್ಸ್‌ ಅಲ್ಲದೆ ಭಾರತದಲ್ಲಿ ಇತರ 30 ಪಾಲುದಾರರ ಜತೆಗೂ ವ್ಯವಹಾರ ಹೊಂದಿದ್ದೇವೆ' ಎಂದು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದರು.

TIMESOFINDIA.COM 13 Nov 2018, 12:18 pm
ಹೊಸದಿಲ್ಲಿ: ರಫೇಲ್‌ ರಕ್ಷಣಾ ಒಪ್ಪಂದದಲ್ಲಿ ಅನಿಲ್ ಅಂಬಾನಿಯವರ ರಿಲಯನ್ಸ್‌ ಗ್ರೂಪ್‌ ಅನ್ನು ಸ್ವತಃ ತಾವೇ ಆಯ್ಕೆ ಮಾಡಿರುವುದಾಗಿ ಡಸಾಲ್ಟ್‌ ಸಿಇಓ ಎರಿಕ್‌ ಟ್ರಾಪಿಯರ್ ಪುನರುಚ್ಚರಿಸಿದ್ದಾರೆ.
Vijaya Karnataka Web Eric Trappier- Dassalut CEO


'ಸ್ವತಃ ನಾವೇ ಅಂಬಾನಿಯವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಈಗಾಗಲೇ ರಿಲಯನ್ಸ್‌ ಅಲ್ಲದೆ ಭಾರತದಲ್ಲಿ ಇತರ 30 ಪಾಲುದಾರರ ಜತೆಗೂ ವ್ಯವಹಾರ ಹೊಂದಿದ್ದೇವೆ' ಎಂದು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆರೋಪಗಳಿಗೆ ಉತ್ತರಿಸುತ್ತ ಡಸಾಲ್ಟ್‌ ಸಿಇಓ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ನಷ್ಟದಲ್ಲಿರುವ ಅನಿಲ್ ಅಂಬಾನಿಯವರ ಕಂಪನಿಗೆ ಲಾಭ ಮಾಡಿಕೊಡಲೆಂದೇ ರಫೇಲ್‌ ಡೀಲ್‌ ಕುದುರಿಸಲಾಗಿದೆ ಎಂದು ರಾಹುಲ್ ಆರೋಪಿಸಿದ್ದು, ಡಸಾಲ್ಟ್‌ ಸಿಇಓ 'ಸುಳ್ಳು' ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.

'ನಾನು ಸುಳ್ಳು ಹೇಳಿಲ್ಲ. ನಾನು ಈ ಮೊದಲು ನೀಡಿದ ಹೇಳಿಕೆ ಸಂಪೂರ್ಣ ಸತ್ಯ. ಈಗಲೂ ಅದನ್ನೇ ಪುನರುಚ್ಚರಿಸುತ್ತೇನೆ. ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ಕಂಪನಿಯ ಸಿಇಓ ಆಗಿ ನಾನು ಸುಳ್ಳು ಹೇಳುವುದಿಲ್ಲ' ಎಂದು ಎರಿಕ್ ಟ್ರಾಪಿಯರ್ ತಿಳಿಸಿದರು.

ತಮ್ಮ ವಿರುದ್ಧ ಹಾಗೂ ತಮ್ಮ ಕಂಪನಿ ವಿರುದ್ಧ ಕಾಂಗ್ರೆಸ್ ಪಕ್ಷ ಮಾಡಿದ ಆರೋಪದಿಂದ ನೋವಾಗಿದೆ ಎಂದು ಡಸಾಲ್ಟ್ ಸಿಇಓ ನುಡಿದರು.

'ಕಾಂಗ್ರೆಸ್ ಪಕ್ಷದ ಜತೆಗೆ ನಮಗೆ ದೀರ್ಘಕಾಲದಿಂದ ವ್ಯವಹರಿಸಿದ ಅನುಭವ ಇದೆ. 1953ರಲ್ಲಿ ನೆಹರೂ ಪ್ರಧಾನಿಯಾಗಿದ್ದಾಗಲೇ ನಮ್ಮ ಮೊದಲ ವ್ಯವಹಾರ ಆರಂಭವಾಯಿತು. ನಂತರದ ಪ್ರಧಾನಿಗಳ ಅವಧಿಯಲ್ಲೂ ಅದು ಮುಂದುವರಿದಿದೆ. ನಾವು ಭಾರತದ ಜತೆ ವ್ಯವಹರಿಸುತ್ತಿದ್ದೇವೆ. ಯಾವುದೇ ಪಕ್ಷದ ಜತೆಗಲ್ಲ. ಭಾರತೀಯ ವಾಯುಪಡೆಗೆ ಮತ್ತು ಭಾರತ ಸರಕಾರಕ್ಕೆ ಅಗತ್ಯವಿರುವ ರಕ್ಷಣಾ ಉತ್ಪನ್ನಗಳನ್ನು ನಾವು ಒದಗಿಸುತ್ತಿದ್ದೇವೆ. ಇದೇ ಅತ್ಯಂತ ಮಹತ್ವದ ವಿಚಾರ' ಎಂದು ಅವರು ನುಡಿದರು.

ಫ್ರೆಂಚ್‌ ನಗರ ಮಾರ್ಸೀಲ್ಲೆಯಲ್ಲಿ ಇಸ್ಟ್ರೆಸ್‌-ಲಿ-ಟ್ಯೂಬ್ ಏರ್‌ಬೇಸ್‌ನಲ್ಲಿ ಅವರು ಎಎನ್‌ಐಗೆ ಸಂದರ್ಶನ ನೀಡಿದರು.

'ನಾವು ರಿಲಯನ್ಸ್‌ ಕಂಪನಿಗೆ ಹಣ ಹೂಡುತ್ತಿಲ್ಲ. ನಾವು ಹೂಡುವ ಹಣ ಜಂಟಿ ಉದ್ಯಮಕ್ಕೆ ಹೋಗುತ್ತದೆ. ಕೌಶಲ್ಯಭರಿತ ಜನರ ಉತ್ಪಾದನೆ ಹೇಗೆ ಎಂಬ ಬಗ್ಗೆ ನನ್ನ ಅನುಭವ, ಜ್ಞಾನವನ್ನು ಉಚಿತವಾಗಿ ಹಂಚಿಕೊಳ್ಳುತ್ತಿದ್ದೇನೆ. ಡಸಾಲ್ಟ್‌ನ ಎಂಜಿನಿಯರ್‌ಗಳು, ಕಾರ್ಮಿಕರು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ತಮ್ಮ ಕೌಶಲ್ಯವನ್ನು ಭಾರತದ ತಂತ್ರಜ್ಞರ ಜತೆ ಹಂಚಿಕೊಳ್ಳುತ್ತಾರೆ. ಅದೇ ವೇಳೆಗೆ, ರಿಲಯನ್ಸ್‌ನಂತಹ ಭಾರತದ ಕಂಪನಿ ಜತೆ ಜಂಟಿ ಉದ್ಯಮಕ್ಕೆ ಬಂಡವಾಳ ಹೂಡುವ ಮೂಲಕ ಭಾರತದ ಅಭಿವೃದ್ಧಿಯಲ್ಲೂ ಭಾಗೀದಾರರಾಗುತ್ತೇವೆ' ಎಂದು ಡಸಾಲ್ಟ್ ಸಿಇಓ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ