ಆ್ಯಪ್ನಗರ

ಗುರಿ ಮಿಸ್‌ ಆಗಿಲ್ಲ! 80% ಬಾಂಬ್‌ಗಳು ಟಾರ್ಗೆಟ್‌ ಮೇಲೆ ಬಿದ್ದಿವೆ...

ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಸುದೀರ್ಘ ವರದಿಯಲ್ಲಿ ವಾಯುಪಡೆ ಈ ಸ್ಪಷ್ಟನೆ ನೀಡಿದ್ದು, ಅದಕ್ಕೆ ಪುರಾವೆಯಾಗಿ ದಾಳಿಯಿಂದ ಚಿಂದಿಯಾಗಿರುವ ಶಿಬಿರಗಳ ಹೈರೆಸಲ್ಯೂಷನ್‌ ಚಿತ್ರಗಳನ್ನು ಪೂರೈಸಿದೆ ಎಂದು ಮೂಲಗಳು ಹೇಳಿವೆ.

Vijaya Karnataka 6 Mar 2019, 10:04 pm
ಹೊಸದಿಲ್ಲಿ: ಪಾಕಿಸ್ತಾನದ ರೇಡಾರ್‌ಗಳ ದಿಕ್ಕುತಪ್ಪಿಸಿ ನಮ್ಮ ಮಿರಾಜ್‌ 2000 ಯುದ್ಧ ವಿಮಾನಗಳು ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿ ವೇಳೆ ಬಾಂಬ್‌ಗಳು ಶೇ. 80ರಷ್ಟು ನಿಖರ ಗುರಿಗಳ ಮೇಲೆಯೇ ಬಿದ್ದಿವೆ ಎಂದು ಭಾರತೀಯ ವಾಯುಪಡೆ ಹೇಳಿದೆ. ಅಲ್ಲದೇ, ದಾಳಿಯಲ್ಲಿ ಉಗ್ರರ ಪಡೆಗಳನ್ನು ಕಳೆದುಕೊಂಡು ವಿಲವಿಲ ಒದ್ದಾಡುತ್ತಿರುವ ಪಾಕಿಸ್ತಾನ ನಮ್ಮಲ್ಲೇನೂ ನಷ್ಟವೇ ಆಗಿಲ್ಲ ಎಂದು ತಿರುಚಿದ ವಿಡಿಯೊ/ಚಿತ್ರಿಕೆಗಳ ಮೂಲಕ ಅಪಪ್ರಚಾರ ನಡೆಸುತ್ತಿದೆ ಎಂದು ಕಿಡಿಕಾರಿದೆ.
Vijaya Karnataka Web balakot


ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಸುದೀರ್ಘ ವರದಿಯಲ್ಲಿ ವಾಯುಪಡೆ ಈ ಸ್ಪಷ್ಟನೆ ನೀಡಿದ್ದು, ಅದಕ್ಕೆ ಪುರಾವೆಯಾಗಿ ದಾಳಿಯಿಂದ ಚಿಂದಿಯಾಗಿರುವ ಶಿಬಿರಗಳ ಹೈರೆಸಲ್ಯೂಷನ್‌ ಚಿತ್ರಗಳನ್ನು ಪೂರೈಸಿದೆ ಎಂದು ಮೂಲಗಳು ಹೇಳಿವೆ. ಫೆ.26ರ ವಾಯುದಾಳಿಯಲ್ಲಿ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ಶಿಬಿರಗಳು ಧ್ವಂಸಗೊಂಡಿರುವ ಹಾಗೂ ಸತ್ತ ಉಗ್ರರ ಸಂಖ್ಯೆಯ ಬಗ್ಗೆ ಕರಾರುವಕ್ಕಾದ ಮಾಹಿತಿ ನೀಡುವಂತೆ ಪ್ರತಿಪಕ್ಷಗಳು ಸರಕಾರವನ್ನು ಆಗ್ರಹಿಸುತ್ತಿರುವ ಹೊತ್ತಿನಲ್ಲಿಯೇ ವಾಯುಪಡೆ ಈ ವರದಿ ಸಲ್ಲಿಸಿದೆ.

ಪ್ರತಿಪಕ್ಷಗಳ ಆಗ್ರಹದ ಮಧ್ಯೆ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳೂ ಭಾರತದ ವಾಯುದಾಳಿಯ ಪರಿಣಾಮಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವ ರೀತಿಯಲ್ಲಿ ವರದಿಗಳನ್ನು ಪ್ರಕಟಿಸಿದ್ದವು. ಆದರೆ ಈ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ವಾಯುಪಡೆ, ''ನಮ್ಮಲ್ಲೂ ನುರಿತ ಯುದ್ಧ ವಿಮಾನಗಳಿವೆ. ಕೆಚ್ಚೆದೆಯ ಪೈಲಟ್‌ಗಳಿದ್ದು ಬಾಲಾಕೋಟ್‌ ದಾಳಿಯ ಗುರಿ ಒಂದಿನಿತೂ ತಪ್ಪಿಲ್ಲ. ಲೇಸರ್‌ ನಿರ್ದೇಶಿತ ಎಸ್‌-2000 ಸ್ಮಾರ್ಟ್‌ ಬಾಂಬ್‌ಗಳು ಶೇಕಡ 80ರಷ್ಟು ನಿಖರ ಗುರಿಗಳ ಮೇಲೆಯೇ ಬಿದ್ದಿವೆ,'' ಎಂದು ಸರಕಾರಕ್ಕೆ ಸಲ್ಲಿಸಿದ 12 ಪುಟಗಳ ವರದಿಯಲ್ಲಿ ತಿಳಿಸಿದೆ. ಅಲ್ಲದೇ ದಾಳಿ ಯಶಸ್ವಿಯಾಗಿರುವುದರ ಬಗ್ಗೆ ಪುರಾವೆಗಳಾಗಿ ಉಪಗ್ರಹ ಆಧಾರಿತ ಹೈ ರೆಸಲ್ಯೂಷನ್‌ ಚಿತ್ರಗಳು ಹಾಗೂ ಸಿಂಥೆಟಿಕ್‌ ಅಪಾರ್ಚರ್‌ ರೇಡಾರ್‌ಗಳು ಸೆರೆಹಿಡಿದ ಚಿತ್ರಗಳನ್ನು ಒದಗಿಸಿದೆ.

44 ಯೋಧರನ್ನು ಬಲಿಪಡೆದ ಫೆಬ್ರವರಿ 14ರ ಪುಲ್ವಾಮಾ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಫೆ.26ರ ನಸುಕಿನಲ್ಲಿ ಪಾಕಿಸ್ತಾನದ ಬಾಲಾಕೋಟ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಚಕೋಟಿ, ಮುಜಫ್ಫರಾಬಾದ್‌ ಮೇಲೆ ವಾಯುದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಪುಡಿಗಟ್ಟಿತ್ತು. ಈ ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಹಾಗೂ ಪುರಾವೆ ಕುರಿತು ಪ್ರತಿಪಕ್ಷಗಳು ಮತ್ತು ಸರಕಾರದ ಮಧ್ಯೆ ಜಟಾಪಟಿ ನಡೆಯುತ್ತಲೇ ಇದೆ.

ಮೋದಿಗೆ ದಿಗ್ವಿಜಯ್‌ ಸಿಂಗ್‌ ಸವಾಲು
ಪುಲ್ವಾಮಾ ದಾಳಿ ಆಕಸ್ಮಿಕ ಎಂದು ಟ್ವೀಟಿಸಿ ಬಿಜೆಪಿ ನಾಯಕರಿಂದ ದೇಶದ್ರೋಹಿ, ಪಾಕಿಸ್ತಾನದ ಬೆಂಬಲಿಗ ಎಂದೆಲ್ಲಾ ವಾಗ್ದಾಳಿಗೆ ಗುರಿಯಾದ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ''ತಾಕತ್ತಿದ್ದರೆ ಪ್ರಧಾನಿ ಮೋದಿ ಸರಕಾರ ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಿ,'' ಎಂದು ಸವಾಲು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ