ಆ್ಯಪ್ನಗರ

ಭಾರಿ ವಿರೋಧದ ಹಿನ್ನೆಲೆ; ಏಷಿಯಾನೆಟ್‌ ನ್ಯೂಸ್‌, ಮೀಡಿಯಾ ವನ್‌ ಮೇಲಿನ ನಿಷೇಧ ತೆರವು

ಏಷಿಯಾನೆಟ್ ನ್ಯೂಸ್ ಮತ್ತು ಮೀಡಿಯಾ ವನ್ ಎರಡೂ ಚಾನೆಲ್‌ಗಳು ಕಾರ್ಯಕ್ರಮದ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದವು. “ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಎತ್ತಿ ತೋರಿಸಿದ್ದವು,” ಮತ್ತು ಒಂದು ನಿರ್ದಿಷ್ಟ ಸಮುದಾಯದ ಪರವಾಗಿವೆ ಎಂಬುದಾಗಿ ಸಚಿವಾಲಯವು ಆರೋಪಿಸಿತ್ತು.

TIMESOFINDIA.COM 7 Mar 2020, 2:26 pm
ಹೊಸದಿಲ್ಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯಿಂದ 48 ಗಂಟೆಗಳ ನಿಷೇಧಕ್ಕೆ ಗುರಿಯಾಗಿದ್ದ ಕೇರಳದ ಜನಪ್ರಿಯ ಸುದ್ದಿವಾಹಿನಿಗಳಾದ ಏಷಿಯಾನೆಟ್‌ ನ್ಯೂಸ್‌ ಮತ್ತು ಮೀಡಿಯಾ ವನ್‌ ಶನಿವಾರ ಬೆಳಗ್ಗೆ ಮತ್ತೆ ಪ್ರಸಾರ ಆರಂಭಿಸಿವೆ.
Vijaya Karnataka Web Delhi Violence


ನಿಷೇಧವನ್ನು ಹಿಂಪಡೆಯುತ್ತಿದ್ದಂತೆ ಏಷಿಯಾನೆಟ್‌ ನ್ಯೂಸ್‌ ಮಧ್ಯ ರಾತ್ರಿ 1.30ಕ್ಕೆ ಪ್ರಸಾರ ಆರಂಭಿಸಿದರೆ, ಮೀಡಿಯಾ ವನ್‌ 9.30 ಕ್ಕೆ ಪ್ರಸಾರ ಆರಂಭಿಸಿದೆ. ಶುಕ್ರವಾರ ಸಂಜೆ 7.30 ರಿಂದ ಆರಂಭಿಸಿ ಎರಡೂ ಮಾಧ್ಯಮಗಳ ಮೇಲೆ ಕೇಂದ್ರ ಸರಕಾರ 48 ಗಂಟೆಗಳ ನಿಷೇಧವನ್ನು ಹೇರಿತ್ತು. ದಿಲ್ಲಿ ಗಲಭೆ ಸಂದರ್ಭ ತಾರತಮ್ಯದ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಈ ನಿರ್ಬಂಧ ಹೇರಿತ್ತು.

ಏಷಿಯಾನೆಟ್ ನ್ಯೂಸ್ ಮತ್ತು ಮೀಡಿಯಾ ವನ್ ಎರಡೂ ಚಾನೆಲ್‌ಗಳು ಕಾರ್ಯಕ್ರಮದ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದವು. “ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಎತ್ತಿ ತೋರಿಸಿದ್ದವು,” ಮತ್ತು ಒಂದು ನಿರ್ದಿಷ್ಟ ಸಮುದಾಯದ ಪರವಾಗಿವೆ ಎಂಬುದಾಗಿ ಸಚಿವಾಲಯವು ಆರೋಪಿಸಿತ್ತು.

ಇದಕ್ಕೆ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಧ್ಯಮಗಳ ಮೇಲೆ ಕೇಂದ್ರ ಸರಕಾರ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ದಾಳಿ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ಕಿಡಿಕಾರಿದ್ದವು. ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಮತ್ತು ಸಿಪಿಎಂ ಮುಖ್ಯಸ್ಥ ಸೀತಾರಾಮ್‌ ಯೆಚೂರಿ ಕೇಂದ್ರದ ಕ್ರಮ 'ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ನಡೆ' ಎಂದು ವಾಗ್ದಾಳಿ ನಡೆಸಿದ್ದರು.

ಮೀಡಿಯಾ ವನ್‌ಗೆ ನೀಡಿದ ಆದೇಶದಲ್ಲಿ ಸರಕಾರ, ವಾಹಿನಿಯು ಸಿಎಎ ಪ್ರತಿಭಟನಾಕಾರರ ವಿಧ್ವಂಸಕ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಕೇಂದ್ರೀಕರಿಸಿದೆ ಎಂದು ಹೇಳಿತ್ತು. “ಅಷ್ಟೇ ಅಲ್ಲದೆ ಆರ್‌ಎಸ್‌ಎಸ್‌ನ್ನು ಪ್ರಶ್ನೆ ಮಾಡಿತ್ತು ಮತ್ತು ದಿಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಪ್ರಶ್ನಿಸಿತ್ತು. ಚಾನೆಲ್‌ ಆರ್‌ಎಸ್ಎಸ್‌ ಮತ್ತು ದಿಲ್ಲಿ ಪೊಲೀಸರ ಬಗ್ಗೆ ಹುಳುಕು ಹುಡುಕುವಂತೆ ಕಾಣಿಸುತ್ತಿದೆ,” ಎಂದು ಇಲಾಖೆ ತನ್ನ ಮಾರ್ಚ್‌ 6ರ ಆದೇಶದಲ್ಲಿ ಹೇಳಿತ್ತು. ಇದಕ್ಕೆ ಚಾನೆಲ್‌ ನೀಡಿದ ಉತ್ತರ ಇಲಾಖೆಗೆ ತೃಪ್ತಿಕರವಾಗಿರಲಿಲ್ಲ.

ಕೇಂದ್ರದ ಈ ಕ್ರಮವನ್ನು ಖಂಡಿಸಿದ್ದ ಮೀಡಿಯಾ ವನ್‌ ಮುಖ್ಯ ಸಂಪಾದಕ ಸಿಎಲ್‌ ಥೋಮಸ್‌, ಇದು ಮುಕ್ತ ಮತ್ತು ನ್ಯಾಯಸಮ್ಮತ ಪತ್ರಿಕೋದ್ಯಮದ ಮೇಲಿನ ದಾಳಿ ಎಂದು ಟೀಕಿಸಿದ್ದರು. ಕಾನೂನಾತ್ಮಕವಾಗಿ ಸರಕಾರದ ಈ ನಿರ್ಧಾರವನ್ನು ವಾಹಿನಿ ಪ್ರಶ್ನಿಸಲಿದೆ ಎಂದು ಅವರು ತಿಳಿಸಿದ್ದರು.

ಇನ್ನು ಏಷಿಯಾನೆಟ್ ಪ್ರಕರಣದಲ್ಲಿ ಇಲಾಖೆಯು, “ಗಲಭೆ ನಿಯಂತ್ರಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿಲ್ಲ ಮತ್ತು ಅಮಿತ್‌ ಶಾ ಅವರನ್ನು ಭೇಟಿಯಾದ ದೀರ್ಘ ಕಾಲದ ಬಳಿಕ ಕೇಂದ್ರ ಪಡೆಗಳು ಗಲಭೆ ಪೀಡಿತ ಪ್ರದೇಶವನ್ನು ತಲುಪಿದವು,” ಎಂಬುದಾಗಿ ಚಾನೆಲ್‌ ವರದಿ ಮಾಡಿತ್ತು ಎಂದು ಆರೋಪಿಸಿತ್ತು.

ಈ ಸಂಬಂಧ ಎರಡೂ ಚಾನೆಲ್‌ಗಳಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಶೋಕಾಸ್‌ ನೋಟಿಸ್‌ಗಳನ್ನು ನೀಡಿತ್ತು. ಇದಕ್ಕೆ ಎರಡೂ ವಾಹಿನಿಗಳು ಉತ್ತರ ಬರೆದಿದ್ದವು. ತಮ್ಮ ವರದಿಯನ್ನು ಸಮರ್ಥಿಸಿಕೊಂಡಿದ್ದ ವಾಹಿನಿಗಳು, ಯಾವುದೇ ಧಾರ್ಮಿಕ ಗುಂಪನ್ನು ತಿರಸ್ಕರಿಸಿಲ್ಲ ಎಂದು ವಾದಿಸಿದ್ದವು. ಆದರೆ ಈ ಉತ್ತರ ತೃಪ್ತಿದಾಯಕವಾಗದ ಹಿನ್ನೆಲೆಯಲ್ಲಿ ಎರಡೂ ವಾಹಿನಿಗಳ ಮೇಲೆ ನಿಷೇಧ ಹೇರಿತ್ತು.

ನಿಷೇಧ ಹಿಂತೆಗೆದುಕೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, "ನಿಷೇಧ ಹೇರಿದ ಬಳಿಕ ನಿಜವಾಗಿ ಏನು ನಡೆಯಿತು ಎಂಬುದನ್ನು ನಾವು ತಕ್ಷಣವೇ ಕಂಡುಕೊಂಡಿದ್ದೇವೆ. ಆದ್ದರಿಂದ ನಾವು ತಕ್ಷಣವೇ ಚಾನೆಲ್‌ಗಳ ಪ್ರಸಾರವನ್ನು ಮರುಸ್ಥಾಪಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅತ್ಯಗತ್ಯ ಎಂಬುದು ನಮ್ಮ ಮೂಲ ಆಲೋಚನಾ ಪ್ರಕ್ರಿಯೆ,” ಎಂದು ತೇಪೆ ಹಚ್ಚಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ