ಆ್ಯಪ್ನಗರ

ಭಾರತಕ್ಕೆ ಪಾಕ್‌ ವಾಯುಮಾರ್ಗ ಬಂದ್‌

ಭಾರತವು ಅಫಘಾನಿಸ್ತಾನಕ್ಕೆ ವಾಣಿಜ್ಯ ಸರಕು ಸಾಗಣೆಗೆ ಬಳಸುತ್ತಿರುವ ತನ್ನ ರಸ್ತೆ ಮಾರ್ಗವನ್ನೂ ಬಂದ್‌ ಮಾಡಲು ಪಾಕಿಸ್ತಾನ ನಿರ್ಧರಿಸಿದೆ.

PTI 28 Aug 2019, 5:00 am
ಹೊಸದಿಲ್ಲಿ: ಕಾಶ್ಮೀರ ವಿಚಾರದಲ್ಲಿ ಭಾರತದ ದಿಟ್ಟ ನಡೆಯಿಂದ ಹತಾಶಗೊಂಡಿರುವ ಪಾಕಿಸ್ತಾನವು ಮತ್ತೆ ಸೇಡಿನ ಕ್ರಮಕ್ಕೆ ಮುಂದಾಗಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳು ತನ್ನ ರಾಷ್ಟ್ರದ ವಾಯು ಮಾರ್ಗ ಬಳಸುವುದನ್ನು ನಿಷೇಧಿಸಲು ತೀರ್ಮಾನಿಸಿದೆ. ಅಲ್ಲದೇ ಭಾರತವು ಅಫಘಾನಿಸ್ತಾನಕ್ಕೆ ವಾಣಿಜ್ಯ ಸರಕು ಸಾಗಣೆಗೆ ಬಳಸುತ್ತಿರುವ ತನ್ನ ರಸ್ತೆ ಮಾರ್ಗವನ್ನೂ ಬಂದ್‌ ಮಾಡಲು ನಿರ್ಧರಿಸಿದೆ.
Vijaya Karnataka Web flight

370ನೇ ವಿಧಿ ರದ್ದತಿ ನಂತರ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ಮುಂದಿನ ದಿನಗಳಲ್ಲಿ ತಮ್ಮ ದೇಶದ ವಾಯು ಮಾರ್ಗ ಹಾಗೂ ರಸ್ತೆ ಮಾರ್ಗವನ್ನು ಭಾರತದ ವಿಮಾನ ಹಾಗೂ ಸರಕು ಸಾಗಣೆ ವಾಹನಗಳಿಗೆ ಬಳಕೆ ಮಾಡದಂತೆ ನಿರ್ಬಂಧ ಹೇರಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಕಾನೂನಾತ್ಮಕ ಅಡೆತಡೆಗಳ ಚರ್ಚೆ ನಡೆಸಿದ್ದಾರೆ. ಪಾಕ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಾವದ್‌ ಹುಸೇನ್‌ ಟ್ವಿಟರ್‌ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ.

ಚೀನಾ ಜತೆಗೆ ಪಾಕ್‌ ಸೇನೆ ಚರ್ಚೆ: ಪಾಕಿಸ್ತಾನ ಹಾಗೂ ಚೀನಾ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳು ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಸಿ ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿವೆ. ಈ ಬೆಳವಣಿಗೆ ಮೇಲೆ ಭಾರತ ತೀವ್ರ ನಿಗಾ ಇರಿಸಿದೆ ಎಂದು ಮೂಲಗಳು ಹೇಳಿವೆ.

ಜಿ-7 ನೆರವಾಗಿದೆ: 370ನೇ ವಿಧಿ ರದ್ದತಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಭವಿಸಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವಲ್ಲಿ ಇತ್ತೀಚಿನ ಜಿ-7 ಶೃಂಗಸಭೆ ನೆರವಾಗಿದೆ ಎಂದು ಅಮೆರಿಕ ಹೇಳಿದೆ. ''ಕಾಶ್ಮೀರ ವಿವಾದ ಭಾರತ-ಪಾಕ್‌ ನಡುವಿನ ವಿಚಾರ. ಮೋದಿ ಹಾಗೂ ಇ್ರಮಾನ್‌ ಇಬ್ಬರೂ ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳುವಷ್ಟು ಪ್ರಬುದ್ಧರು. ಇಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿತಿಕೆ ಅಗತ್ಯವಿಲ್ಲ,'' ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದನ್ನು ಉಲ್ಲೇಖಿಸಿ ಶ್ವೇತಭವನ ಹೇಳಿಕೆ ನೀಡಿದೆ. ಫ್ರಾನ್ಸ್‌ನ ಬಯಾರಿಟ್ಜ್‌ನಲ್ಲಿ ನಡೆದ ಶೃಂಗದಲ್ಲಿ ಪ್ರಧಾನಿ ಮೋದಿ ಹಾಗೂ ಟ್ರಂಪ್‌ ಮಾತುಕತೆ ನಡೆಸಿದ್ದರು.

ಧಿಧಿಧಿಧಿಧಿಧಿಧಿಧಿ---------

ಪಾಕಿಸ್ತಾನದ ಈ ಮೊದಲ 'ಕಾಶ್ಮೀರ ನೀತಿ'ಯಲ್ಲಿ ಶ್ರೀನಗರವನ್ನು ವಶಕ್ಕೆ ಪಡೆಯುವುದು ಹೇಗೆ ಎಂಬುದು ಪ್ರಮುಖವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು ಪಾಕ್‌ ಆಕ್ರಮಿತ ಕಾಶ್ಮೀರವನ್ನಾದರೂ ಹೇಗೆ ಉಳಿಸಿಕೊಳ್ಳಬೇಕೆಂಬ ಹಂತಕ್ಕೆ ನಮ್ಮ ರಾಷ್ಟ್ರ ಬಂದು ನಿಂತಿದೆ. ಇಮ್ರಾನ್‌ ಖಾನ್‌ಗೆ ಕಾಶ್ಮೀರದ ಬಗ್ಗೆ ಮಾತನಾಡುವ ಯಾವ ಹಕ್ಕೂ ಇಲ್ಲ.

- ಬಿಲಾವಲ್‌ ಭುಟ್ಟೊ, ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಮುಖ್ಯಸ್ಥ

--------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ