ಆ್ಯಪ್ನಗರ

ಭಾರತದ ಕ್ರಮ ಅಕ್ರಮ ಎಂದ ಪಾಕ್‌

ಕಣಿವೆ ರಾಜ್ಯ ಹಾಗೂ ಪಾಕಿಸ್ತಾನದ ಜನ ಇದನ್ನು ಒಪ್ಪಲು ಸಾಧ್ಯವಿಲ್ಲ,'' ಎಂದು ಪಾಕ್‌ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

Vijaya Karnataka 6 Aug 2019, 10:03 am
ಇಸ್ಲಾಮಾಬಾದ್‌: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮದ ಬಗ್ಗೆ ಪಾಕಿಸ್ತಾನದಿಂದ ನಿರೀಕ್ಷಿತ ವಿರೋಧ ವ್ಯಕ್ತವಾಗಿದೆ. ತನ್ನದಲ್ಲದ ಪ್ರದೇಶದ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಿರುವ ನೆರೆ ರಾಷ್ಟ್ರ , ಭಾರತದ ಕ್ರಮ ಅಕ್ರಮ ಮತ್ತು ಏಕಪಕ್ಷೀಯ ಎಂದು ಬೊಬ್ಬೆ ಹಾಕಿದೆ. ಇದರ ವಿರುದ್ಧ ವಿಶ್ವಸಂಸ್ಥೆಗೆ ಮನವಿ ಸಲ್ಲಿಸುವುದಾಗಿಯೂ ಹೇಳಿಕೊಂಡಿದೆ.
Vijaya Karnataka Web imran


''ಜಮ್ಮು-ಕಾಶ್ಮೀರ ವಿವಾದಗ್ರಸ್ತ ಪ್ರದೇಶ ಎಂದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದೆ. ಹೀಗಿರುವಾಗ ಇದರ ವಿಷಯದಲ್ಲಿ ಭಾರತ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಈಗ ತೆಗೆದುಕೊಂಡ ಕ್ರಮವು ಅಕ್ರಮವಾದದ್ದು. ಕಣಿವೆ ರಾಜ್ಯ ಹಾಗೂ ಪಾಕಿಸ್ತಾನದ ಜನ ಇದನ್ನು ಒಪ್ಪಲು ಸಾಧ್ಯವಿಲ್ಲ,'' ಎಂದು ಪಾಕ್‌ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಏತನ್ಮಧ್ಯೆ, ಶತ್ರು ರಾಷ್ಟ್ರ ನಡೆಸುವ ಯಾವುದೇ ಕಾನೂನು ಹೋರಾಟಕ್ಕೂ ಬಗ್ಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಭಾರತ, ಹದ್ದು ಮೀರಿ ವರ್ತಿಸಿದರೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದೆ. ಪಾಕ್‌ನಿಂದ ಇಂತಹ ನಡೆ ನಿರೀಕ್ಷಿಸಿದ್ದ ಭಾರತವು ರಾಜ್ಯಸಭೆಯಲ್ಲಿ ಘೋಷಣೆಯಾಗುತ್ತಿದ್ದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌, ಜರ್ಮನಿಗಳಿಗೆ ಮಾಹಿತಿ ನೀಡಿತ್ತು.

ತುರ್ತು ಜಂಟಿ ಅಧಿವೇಶನ:

ಭಾರತದ ಕ್ರಮದಿಂದ ದಿಕ್ಕೆಟ್ಟು ಹೋಗಿರುವ ಪಾಕಿಸ್ತಾನ ಅಧ್ಯಕ್ಷ ಆರೀಫ್‌ ಅಲ್ವಿ , ತರಾತುರಿಯಲ್ಲಿ ಸಂಸತ್ತಿನ ಜಂಟಿ ಅಧಿವೇಶನ ಕರೆದು ಚರ್ಚಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಭಾರತದ ಕ್ರಮ ಕಾನೂನುಬಾಹಿರ ಮತ್ತು ವಿಶ್ವಸಂಸ್ಥೆ ನಿರ್ಣಯಕ್ಕೆ ವಿರುದ್ಧವಾದುದು. ಇದರಿಂದ ಅಣ್ವಸ್ತ್ರ ಹೊಂದಿರುವ ಎರಡು ನೆರೆದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಹದಗೆಡುವುದು ನಿಶ್ಚಿತ- ಇಮ್ರಾನ್‌ ಖಾನ್‌, ಪಾಕಿಸ್ತಾನ ಪ್ರಧಾನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ