ಆ್ಯಪ್ನಗರ

ನಮ್ದು ದೊಡ್ಡ ದೇಶ, ಒಂದೆರಡು ರೇಪ್‌ ಆಗ್ತಾವೆ ಬಿಡಿ!...ಸಂತೋಷ್‌ ಗಂಗ್ವಾರ್‌

'ಭಾರತದಂಥ ದೊಡ್ಡ ದೇಶದಲ್ಲಿ ಒಂದೆರಡು ರೇಪ್‌ಗಳು ಆಯಿತು ಅಂದ ಕೂಡಲೇ ರಾದ್ಧಾಂತ ಎಬ್ಬಿಸಬಾರದು, ಇದು ಸರಿಯಲ್ಲ'

Vijaya Karnataka 23 Apr 2018, 9:43 am
ಲಖನೌ: 'ಭಾರತದಂಥ ದೊಡ್ಡ ದೇಶದಲ್ಲಿ ಒಂದೆರಡು ರೇಪ್‌ಗಳು ಆಯಿತು ಅಂದ ಕೂಡಲೇ ರಾದ್ಧಾಂತ ಎಬ್ಬಿಸಬಾರದು, ಇದು ಸರಿಯಲ್ಲ'
Vijaya Karnataka Web santosh


- ಇದು ಕೇಂದ್ರ ಸಚಿವ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್‌ ಗಂಗ್ವಾರ್‌ ಅವರ ವಿವಾದಾತ್ಮಕ ಹಿತನುಡಿ!

''ಇಂಥ ಘಟನೆಗಳು ದುರದೃಷ್ಟಕರ. ಆದರೆ, ಕೆಲವೊಮ್ಮೆ ಇವುಗಳನ್ನು ನೀವು ತಡೆಯೋಕ್ಕಾಗಲ್ಲ. ಸರಕಾರ ಎಲ್ಲ ಕಡೆ ಸಕ್ರಿಯವಾಗಿದೆ. ಅದು ಕ್ರಮಗಳನ್ನು ಕೈಗೊಳ್ಳುತ್ತಿರುವುದು ಎಲ್ಲರಿಗೂ ಕಾಣಿಸುತ್ತಿದೆ,'' ಎಂದು ಬರೇಲಿ ಸಂಸದರಾಗಿರುವ ಗಂಗ್ವಾರ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

ಕಠುವಾ, ಸೂರತ್‌ನಲ್ಲಿ ನಡೆದ ಬಾಲಕಿಯರ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೊ ಅತ್ಯಾಚಾರ ವಿದ್ಯಮಾನದ ಹಿನ್ನೆಲೆಯಲ್ಲಿ ದೇಶಾದ್ಯಂತ ರೇಪ್‌ ಪ್ರಕರಣಗಳ ವಿರುದ್ಧ ಜನಾಕ್ರೋಶ ಭುಗಿಲೆದ್ದ ಸಂದರ್ಭದಲ್ಲಿ ಗಂಗ್ವಾರ್‌ ಅವರ ಹೇಳಿಕೆ ವಿವಾದ ಹುಟ್ಟುಹಾಕಿದೆ.

ಹೇಳಿಕೆ ವಿವಾದಕ್ಕೊಳಗಾಗಿದ್ದನ್ನು ಕಂಡ ಗಂಗ್ವಾರ್‌ ಟ್ವಿಟರ್‌ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ''ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಬಾರದು ಎಂದು ಮೊದಲೇ ಹೇಳಿದ್ದೆ. ಇದು ತುಂಬ ಗಂಭೀರ ಮತ್ತು ಸೂಕ್ಷ್ಮ ವಿಚಾರ. ನರೇಂದ್ರ ಮೋದಿ ಸರಕಾರ ಸಂವೇದನಾಶೀಲವಾಗಿದ್ದು, ಮಕ್ಕಳು ಮತ್ತು ಮಹಿಳೆಯ ಸುರಕ್ಷತೆಗೆ ಸುಗ್ರೀವಾಜ್ಞೆಯೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ,'' ಎಂದು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ನಾಯಕರೊಬ್ಬರು ಇಂಥ ಸಂವೇದನಾರಹಿತ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಅವರು, ''ಮನೋವಿಜ್ಞಾನದ ದೃಷ್ಟಿಯಿಂದ ಹೇಳುವುದಾದರೆ, ಯಾರೂ ಕೂಡಾ ಮೂರು ಮಕ್ಕಳ ತಾಯಿಯನ್ನು ರೇಪ್‌ ಮಾಡಲಾರರು. ಇದು ಸಾಧ್ಯವಿಲ್ಲ. ಇದೆಲ್ಲವೂ ಕುಲದೀಪ್‌ ಸಿಂಗ್‌ ಸೆಂಗಾರ್‌ ವಿರುದ್ಧದ ಸಂಚು,'' ಎಂದು ಹೇಳಿದ್ದರು!

ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ಹೊಸದಿಲ್ಲಿ: 12ರ ಕೆಳ ಹರೆಯದ ಹೆಣ್ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆಗೆ ಅವಕಾಶ ಒದಗಿಸುವ ಕ್ರಿಮಿನಲ್‌ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭಾನುವಾರ ಅಂಕಿತ ಹಾಕಿದ್ದಾರೆ. ''ಪ್ರಸಕ್ತ ಸಂಸತ್‌ ಅಧಿವೇಶನ ನಡೆಯುತ್ತಿಲ್ಲದಿರುವುದರಿಂದ ಮತ್ತು ಸುಗ್ರೀವಾಜ್ಞೆಯ ತುರ್ತು ಜಾರಿಯನ್ನು ಮನಗಂಡು ರಾಷ್ಟ್ರಪತಿಗಳು ತಕ್ಷಣದ ಕ್ರಮ ಕೈಗೊಂಡರು,'' ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ