ಆ್ಯಪ್ನಗರ

ಗಣೇಶ ವಿಸರ್ಜನೆ: ದೇಶದ್ಯಂತ 33 ಮಂದಿ ನೀರುಪಾಲು

ಮಹಾರಾಷ್ಟ್ರದ ಅಮರಾವತಿ, ನಾಸಿಕ್‌, ಠಾಣೆ, ಸಿಂಧುದುರ್ಗ, ರತ್ನಗಿರಿ, ಬಾಂದ್ರಾ, ನಾಂದೇಡ್‌, ಸತಾರ ಸೇರಿದಂತೆ 11 ಜಿಲ್ಲೆಗಳಲ್ಲಿನಡೆದ ಪ್ರತ್ಯೇಕ ದುರಂತಗಳಲ್ಲಿ18 ಮಂದಿ ಅಸುನೀದ್ದಾರೆ.

PTI 14 Sep 2019, 6:20 am
ಮುಂಬಯಿ/ಹೊಸದಿಲ್ಲಿ: ದೇಶದ ಹಲವು ಕಡೆ ಗುರುವಾರ ನಡೆದ ಗಣೇಶ ವಿಸರ್ಜನೆ ಕಾರ‍್ಯಕ್ರಮದ ವೇಳೆ ನೀರಿನಲ್ಲಿಮುಳುಗಿ 33 ಜನ ಮೃತಪಟ್ಟಿರುವ ಘಟನೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ18, ಮಧ್ಯಪ್ರದೇಶದಲ್ಲಿ 11 ಹಾಗೂ ದಿಲ್ಲಿಯಲ್ಲಿನಾಲ್ಕು ಮಂದಿ ಜಲ ಸಮಾಧಿಯಾಗಿದ್ದಾರೆ.
Vijaya Karnataka Web bhopal


ಅನಂತ ಚತುರ್ದಶಿಯ ದಿನವಾದ ಗುರುವಾರದಿಂದ ಆರಂಭಗೊಂಡು ಶುಕ್ರವಾರದವರೆಗೆ ದೇಶಾದ್ಯಂತ ವಿವಿಧ ಗಣೇಶ ಪೆಂಡಾಲ್‌ಗಳು ಅದ್ಧೂರಿ ಮೆರವಣಿಗೆ ಮೂಲಕ ವಿಘ್ನ ನಿವಾರಕನ ವಿಸರ್ಜನೆ ಕೈಗೊಂಡಿದ್ದವು. ಮಹಾರಾಷ್ಟ್ರದ ಅಮರಾವತಿ, ನಾಸಿಕ್‌, ಠಾಣೆ, ಸಿಂಧುದುರ್ಗ, ರತ್ನಗಿರಿ, ಬಾಂದ್ರಾ, ನಾಂದೇಡ್‌, ಸತಾರ ಸೇರಿದಂತೆ 11 ಜಿಲ್ಲೆಗಳಲ್ಲಿನಡೆದ ಪ್ರತ್ಯೇಕ ದುರಂತಗಳಲ್ಲಿ18 ಮಂದಿ ಅಸುನೀದ್ದಾರೆ. ಮೃತಪಟ್ಟವರಲ್ಲಿಬಹುತೇಕರು 20 ವರ್ಷದೊಳಗಿನ ಯುವಕರಾಗಿದ್ದಾರೆ. ನವಿ ಮುಂಬಯಿನಲ್ಲಿಗಣೇಶ ವಿಸರ್ಜನೆ ವೇಳೆ ಸೇತುವೆಯೊಂದರ ಬಳಿ ವಿದ್ಯುತ್‌ ತಂಗಿ ತಗುಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಳುಗಿದ ದೋಣಿ: ಮಧ್ಯಪ್ರದೇಶದ ಭೋಪಾಲ್‌ ಜಿಲ್ಲೆಯ ಖಟ್ಲಾಪುರದ ಕೆರೆಯಲ್ಲಿಗಣೇಶ ವಿಸರ್ಜನೆ ವೇಳೆ ದೋಣಿ ಮುಳುಗಿ 11 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ನಸುಕಿನ 4.30ರ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ. ಕೆರೆಯ ಮಧ್ಯಭಾಗಕ್ಕೆ ಗಣೇಶ ಮೂರ್ತಿಯನ್ನು ಕೊಂಡೊಯ್ದು ವಿಸರ್ಜಿಸಲು 16 ಮಂದಿ ದೋಣಿಯಲ್ಲಿತೆರಳಿದ್ದರು. ಆದರೆ ಆಕಸ್ಮಿಕವಾಗಿ ದೋಣಿ ಪಲ್ಟಿಯಾಗಿ ಅದರಲಿದ್ದವರು ನೀರಿಗೆ ಬಿದ್ದರು. ಕೆಲವೇ ಹೊತ್ತಿನಲ್ಲಿ ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿತೊಡಗಿದರು. ಆದರೆ ಸುಮಾರು ಹೊತ್ತಿನ ಕಾರ್ಯಾಚರಣೆ ಬಳಿಕ ಐವರನ್ನು ಮಾತ್ರ ಬದುಕಿಸಲು ಸಾಧ್ಯವಾಗಿದೆ.

ದಿಲ್ಲಿಯ ಯಮುನಾ ನದಿಯಲ್ಲಿ ಗಣೇಶ ವಿಸರ್ಜನೆ ವೇಳೆ ಕಾಲು ಜಾರಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ನಾಲ್ಕೂ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

11 ಲಕ್ಷ ರೂ.ಪರಿಹಾರ: ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭೋಪಾಲ್‌ನಲ್ಲಿಮೃತಪಟ್ಟವರ ಕುಟುಂಬಗಳಿಗೆ ಮಧ್ಯಪ್ರದೇಶ ಸರಕಾರ ತಲಾ 11 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ