ಆ್ಯಪ್ನಗರ

ಕಾಶ್ಮೀರ ಕ್ರಮ ಬೆಂಬಲಿಸಿದ ಹೂಡಾ, ಕಾಂಗ್ರೆಸ್‌ ಕಂಗಾಲು

ಹೂಡಾ ನೀಡಿರುವ ಹೇಳಿಕೆಯು ಈ ವರ್ಷಾಂತ್ಯಕ್ಕೆ ನಡೆಯುವ ಹರಿಯಾಣ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

Agencies 19 Aug 2019, 5:00 am
ಹೊಸದಿಲ್ಲಿ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡ ದಿಟ್ಟ ಕ್ರಮ ಬೆಂಬಲಿಸಿ ಬಹಿರಂಗ ಹೇಳಿಕೆ ನೀಡುತ್ತಿರುವ ಪ್ರತಿಪಕ್ಷಗಳ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂಥವರ ಸಾಲಿಗೆ ಈಗ ಹರಿಯಾಣದ ಹಿರಿಯ ಕಾಂಗ್ರೆಸ್‌ ಮುಖಂಡ ಭೂಪೇಂದ್ರಸಿಂಗ್‌ ಹೂಡಾ ಸೇರಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
Vijaya Karnataka Web Bhupinder_Singh_Hooda_in_WEF,_2010

ಪಕ್ಷದ ನಿಲುವಿಗೆ ಸಂಪೂರ್ಣ ವಿರುದ್ಧ ಹಾದಿ ತುಳಿದಿರುವ ಹೂಡಾ, ಕಾಶ್ಮೀರ ವಿಷಯದಲ್ಲಿನ ಕಾಂಗ್ರೆಸ್‌ ನಿಲುವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಏನು ಹೇಳಿಕೆ?: ''370 ವಿಧಿ ರದ್ದುಗೊಳಿಸಿದ್ದನ್ನು ನನ್ನ ಅನೇಕ ಜತೆಗಾರರು ವಿರೋಧಿಸಿದ್ದಾರೆ. ಈ ವಿಷಯದಲ್ಲಿ ನನ್ನ ಪಕ್ಷ ಕೂಡ ದಾರಿ ತಪ್ಪಿದೆ. ಹಳೆಯ ಕಾಂಗ್ರೆಸ್‌ನ ತತ್ವಸಿದ್ಧಾಂತ ಈಗ ಉಳಿದಿಲ್ಲ. ದೇಶ ಭಕ್ತಿ ಮತ್ತು ಆತ್ಮ ಗೌರವದ ವಿಷಯ ಬಂದಾಗ ನಾನು ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಪಕ್ಷ ಯಾವುದಾದರೂ ಅದನ್ನು ಕಡೆಗಣಿಸುತ್ತೇನೆ,'' ಎಂದು ಭೂಪೇಂದ್ರ ಹೂಡಾ ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ರಾಜಕೀಯ ರಾರ‍ಯಲಿಯಲ್ಲಿ ಗುಡುಗಿದ್ದಾರೆ.
ನಾಲ್ಕು ದಶಕ ಮೇಲ್ಪಟ್ಟು ಕಾಂಗ್ರೆಸ್ಸಿನ ಕಟ್ಟಾಳಾಗಿ ದುಡಿದು, ಮುಖ್ಯಮಂತ್ರಿ ಸೇರಿದಂತೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ 71 ವರ್ಷದ ಹೂಡಾ ನೀಡಿರುವ ಹೇಳಿಕೆಯು ಈ ವರ್ಷಾಂತ್ಯಕ್ಕೆ ನಡೆಯುವ ಹರಿಯಾಣ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಹೂಡಾ ಅವರ ಪುತ್ರ ದೀಪೇಂದ್ರ ಹೂಡ ಕೂಡ ತಂದೆಯ ನಿಲುವನ್ನು ಬೆಂಬಲಿಸಿದ್ದಾರೆ. ''ರಾಷ್ಟ್ರದ ಹಿತಾಸಕ್ತಿ ವಿಷಯ ಬಂದಾಗ ನನಗೆ ರಾಜಕೀಯ ಮುಖ್ಯವಾಗುವುದಿಲ್ಲ. 370ನೇ ವಿಧಿ ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಅದನ್ನು ಈಗ ತೆಗೆದು ಹಾಕಿರುವುದು ಸರಿಯಿದೆ. ಆದರೆ, ತೆಗೆದು ಹಾಕಿದ ವಿಧಾನ ಮಾತ್ರ ಸರಿಯಿರಲಿಲ್ಲ. ಇದನ್ನು ಕೆಲವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಕೂಡ ತಪ್ಪು,'' ಎಂದು ದೀಪೇಂದ್ರ ಹೂಡಾ ಹೇಳಿದ್ದಾರೆ.
ಏನು ಕಾರಣ?: ಅಪ್ಪ-ಮಗನ ಪಕ್ಷ ವಿರೋಧಿ ಧೋರಣೆಗೆ ಆಂತರಿಕ ಬೆಳವಣಿಗೆಗಳು ಕಾರಣ ಎಂದು ಹೇಳಾಗುತ್ತಿದೆ. ಚುನಾವಣೆ ಹೊಸ್ತಿಲಲ್ಲಿರುವ ಹರಿಯಾಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೆ ಸೀನಿಯರ್‌ ಹೂಡಾ ಲಾಬಿ ನಡೆಸಿದ್ದರು. ಆದರೆ ಅದಕ್ಕೆ ಮನ್ನಣೆ ನೀಡದ ದಿಲ್ಲಿಯ ವರಿಷ್ಠರು ಅಶೋಕ್‌ ತನ್ವರ್‌ ಅವರನ್ನು ಆಯ್ಕೆ ಮಾಡಿದ್ದರು. ಇದು ಹೂಡಾ ಅಸಮಾಧಾನಕ್ಕೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.
ಇನ್ನು ಎರಡು ತಿಂಗಳಲ್ಲಿ ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಹೂಡಾ ಬಿಜೆಪಿ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಗಳೂ ಹರಿದಾಡಿವೆ. ಆದರೆ, ತಾವು ಪಕ್ಷ ತೊರೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ