ಆ್ಯಪ್ನಗರ

ಭಾರತಕ್ಕೆ ರಾಯಭಾರಿಯ ನೇಮಕಕ್ಕೆ ಹಿಂದೇಟು ಹಾಕುತ್ತಿರುವ ಚೀನಾ ಪರ ಓಲಿ

ಭಾರತದ ನೆರೆಯ ಪುಟ್ಟ ದೇಶವಾದ ನೇಪಾಳ ಹಲವು ವರ್ಷಗಳಿಂದ ಭಾರತದ ಜತೆ ಸ್ನೇಹ ಕಾಪಾಡಿಕೊಂಡು ಬಂದಿತ್ತು. ಆದರೆ, ಕೆ.ಪಿ.ಓಲಿ ಸರಕಾರ ಚೀನಾ ಜತೆಗೆ ನಿಕಟ ಸಂಬಂಧ ಹೊಂದಿದ್ದು, ಭಾರತದ ಜತೆ ಸ್ನೇಹ ಸಂಪಾದನೆಗೆ ಹಿಂದೇಟು ಹಾಕುತ್ತಿದೆ.

TIMESOFINDIA.COM 17 Oct 2018, 12:26 pm
[This story originally published in Times Of India on Oct 17, 2018]
Vijaya Karnataka Web k p oli

ಹೊಸದಿಲ್ಲಿ
: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಕೆ.ಪಿ. ಓಲಿ ಸರಕಾರ ರಚನೆಯಾಗಿ 8 ತಿಂಗಳು ಕಳೆದಿದೆ. ಆದರೆ, ಇದುವರೆಗೆ ಭಾರತಕ್ಕೆ ರಾಯಭಾರಿಯನ್ನು ಕಳಿಸಿಲ್ಲ. ಇತ್ತೀಚಿನ ಕೆಲವು ಸಮಯದಿಂದ ಎರಡೂ ದೇಶಗಳ ನಡುವೆ ಸಮಸ್ಯೆಗಳು ಎದುರಾಗಿದೆ. ಅಲ್ಲದೆ, ನೇಪಾಳ ಭಾರತದ ಆತ್ಮೀಯ ಪಾಲುದಾರ ರಾಷ್ಟ್ರವಾಗಿರುವುದರಿಂದ ಇದು ಕಳವಳಕಾರಿ ವಿಚಾರವಾಗಿದೆ.

ಕಳೆದ ಅಕ್ಟೋಬರ್ 2017ರಿಂದ ಹೊಸದಿಲ್ಲಿಯ ನೇಪಾಳ ರಾಯಭಾರಿ ಕಚೇರಿಯಲ್ಲಿ ಅಧಿಕೃತ ರಾಯಭಾರಿ ಅಧಿಕಾರಿಯೇ ಇಲ್ಲ. ಹಿಂದಿನ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ ಕಚೇರಿ ತೊರೆದ ಬಳಿಕ ಸದ್ಯ, ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ಭಾರತ್ ರೆಗ್ಮಿ ಕಚೇರಿಯನ್ನು ಮುನ್ನಡೆಸುತ್ತಿದ್ದಾರೆ. ನೇಪಾಳ ಚುನಾವಣಾ ಆಯೋಗದ ಮಾಜಿ ಆಯುಕ್ತ ಎನ್‌.ಕೆ.ಉಪ್ರೇತಿಯನ್ನು ಮುಂದಿನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ನೇಪಾಳದ ಮಾಧ್ಯಮಗಳು ಜುಲೈನಲ್ಲಿ ವರದಿ ಮಾಡಿದ್ದವು. ಆದರೆ, ಆಗಸ್ಟ್ ತಿಂಗಳಲ್ಲಿ ಈ ನೇಮಕವನ್ನು ಓಲಿ ರದ್ದುಗೊಳಿಸಿದ್ದಾರೆ ಎಂಬ ವರದಿಗಳು ಬಂದಿದ್ದವು.

ಆದರೆ, ''ಈ ಕುರಿತು ನೇಪಾಳ ಸರಕಾರದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳ ಮೂಲಗಳು ತಿಳಿಸಿವೆ. ಅಲ್ಲದೆ, ನೇಪಾಳದ ಕಡೆಯಿಂದ ಹೆಸರು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯಲಿದೆ ಹಾಗೂ ಖಾಲಿ ಇರುವ ಹುದ್ದೆ ತುಂಬಲಿದೆ'' ಎಂದು ಮೂಲಗಳು ತಿಳಿಸಿವೆ.

ಇನ್ನು, ಓಲಿ ಅಧಿಕಾರ ವಹಿಸಿಕೊಂಡ ಬಳಿಕ ಸ್ವತ: ಪ್ರಧಾನಿ ಮೋದಿಯೇ ನೇಪಾಳಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಹಲವು ಭರವಸೆ ನೀಡಲಾಗಿದ್ದ ಯೋಜನೆಗಳನ್ನು ಈಡೇರಿಸುವತ್ತ ಭಾರತ ಸರಕಾರ ಹೆಜ್ಜೆ ಮುಂದಿಟ್ಟಿದೆ. ಇಷ್ಟಾದರೂ ಭಾರತದೊಂದಿಗೆ ನೇಪಾಳ ಸಂಬಂಧ ಕಡಿದುಕೊಳ್ಳುವ ಲಕ್ಷಣ ಕಂಡುಬಂದಿರುವುದರಿಂದ, ಅವರು ಭಾರತದ ಜತೆ ಉದ್ದೇಶಪೂರ್ವಕವಾಗಿ ಹಗೆತನ ಸಾಧಿಸುತ್ತಿದ್ದಾರಾ ಎಂಬ ಅನುಮಾನಗಳು ಕಾಡತೊಡಗಿವೆ.

ಇನ್ನೊಂದೆಡೆ, ನೇಪಾಳದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾದ ಬುಧಿ ಗಂಡಾಕಿಯನ್ನು ಕಳೆದ ವರ್ಷ ನೇಪಾಳದ ಶೇರ್ ಬಹದ್ದೂರ್ ಸರಕಾರ ಚೀನಾದ ಕಂಪನಿಯೊಂದರಿಂದ ಒಪ್ಪಂದವನ್ನು ರದ್ದುಗೊಳಿಸಿತ್ತು. 250 ಕೋಟಿ ಡಾಲರ್ ಮೌಲ್ಯದ ಹಾಗೂ 1200 ಮೆಗಾವ್ಯಾಟ್ ವಿದ್ಯುತ್ ಒದಗಿಸುವ ಯೋಜನೆಯನ್ನು ಆಂತರಿಕ ಸಂಪನ್ಮೂಲಗಳಿಂದಲೇ ಮಾಡಬಹುದು ಎಂಬುದು ಶೇರ್ ಸರಕಾರದ ನಿಲುವಾಗಿತ್ತು. ಆದರೆ, ಕೆಲವು ವಾರಗಳ ಹಿಂದೆ ಆ ಯೋಜನೆಯನ್ನು ಓಲಿ ಸರಕಾರ ಮತ್ತೆ ಚೀನಾಗೆ ಮರಳಿಸಿದೆ. ಅಲ್ಲದೆ, ಚೀನಾದ ಬಿಆರ್‌ಐ ಯೋಜನೆಗಳಿಗೆ ಮತ್ತಷ್ಟು ವೇಗ ನೀಡುವುದಾಗಿ ನೇಪಾಳ ಸರಕಾರ ಬದ್ಧವಾಗಿದೆ. ಇವುಗಳಿಂದಾಗಿ ಚೀನಾಕ್ಕೆ ಆದ್ಯತೆ ನೀಡುವ ಓಲಿಯ ನಿಲುವು ಮತ್ತಷ್ಟು ಸ್ಪಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ