ಆ್ಯಪ್ನಗರ

ಭಾರತ ಕೋವಿಡ್ -19ನ ಕೆಟ್ಟ ಸ್ಥಿತಿ ಎದುರಿಸಲಾರದು: ಕೇಂದ್ರ ಸಚಿವ ಹರ್ಷವರ್ಧನ್

ಕೊರೊನಾ ವೈರಸ್‌ ತಡೆಯಲು ಭಾರತ ಕೈಗೊಂಡಿರುವ ವಿವಿಧ ಕ್ರಮಗಳಿಂದಾಗಿ ಭಾರತಕ್ಕೆ ಅತ್ಯಂತ ಕೆಟ್ಟ ಸನ್ನಿವೇಶ ಎದುರಾಗದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಜೊತೆಗೆ ಸಾಮಾಜಿಕ ಅಂತರವೊಂದೇ ಅತ್ಯಂತ ಪ್ರಭಾವೀ ಲಸಿಕೆ ಎಂದಿದ್ದಾರೆ.

Vijaya Karnataka Web 10 Apr 2020, 2:04 pm
ಹೊಸದಿಲ್ಲಿ: ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಸರಕಾರ ಕೈಗೊಂಡ ವಿವಿಧ ಕ್ರಮಗಳಿಂದಾಗಿ ಕೋವಿಡ್ -19 ಪರಿಸ್ಥಿತಿಯ "ಕೆಟ್ಟ ಸನ್ನಿವೇಶ" ವನ್ನು ಭಾರತ ಎದುರಿಸಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
Vijaya Karnataka Web Harsh Vardhan


ಕೊರೊನಾ ವೈರಸ್ ಸೋಂಕಿನ ಬಗ್ಗೆ ಬೆನ್ನೆಟ್ ವಿವಿ ಆಯೋಜಿಸಿದ್ದ ಆನ್‌ಲೈನ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಹರ್ಷವರ್ಧನ್, ದೇಶದಲ್ಲಿ ಈಗಿನ ಪರಿಸ್ಥಿಯ ಜೊತೆಗೆ ಕೋವಿಡ್ 19 ಸೋಂಕಿತರ ಅಂಶಗಳನ್ನು ಗಮನಿಸಿದರೆ, ಭಾರತ ಇತರ ದೇಶಗಳಿಂದ ಉತ್ತಮವಾಗಿ ವೈರಸ್ ತಡೆಯುವಲ್ಲಿ ನಿರತವಾಗಿದೆ. ಸರಕಾರ ಸೂಚಿಸಿರುವ ಕಠಿಣ ಕ್ರಮಗಳನ್ನು ಜನತೆ ಪಾಲಿಸಿದರೆ ಕೊರೋನ ವಿರುದ್ಧದ ನಾವು ಯುದ್ಧ ಗೆಲ್ಲಲು ಸಾಧ್ಯ. ಕೊರೊನಾ ವೈರಸ್‌ಗೆ ಈ ವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲದಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಾಕ್‌ಡೌನ್ ಒಂದೇ ಅತ್ಯಂತ ಪ್ರಭಾವೀ ಲಸಿಕೆಗಳಾಗಿವೆ ಎಂದಿದ್ದಾರೆ.

ಭಾರತದಲ್ಲಿ 133 ಜಿಲ್ಲೆಗಳನ್ನು ವೈರಸ್ ನ ಹಾಟ್‌ಸ್ಪಾಟ್ ಎಂದು ಸರಕಾರ ಗುರುತು ಮಾಡಿದೆ. ದೇಶದಲ್ಲಿ ಪ್ರತೀ 4 ರಿಂದ 5 ದಿನಕ್ಕೆ ವೈರಸ್ ಸೋಂಕಿತರ ಪ್ರಮಾಣ ದುಪ್ಪಟ್ಟು ಏರಿಕೆಯಾಗುತ್ತಿದೆ. ಆದರೆ ದೇಶದಲ್ಲಿ ಹೆಚ್ಚಿನ ಜಿಲ್ಲೆಗಳು ವೈರಸ್ ನ ಪ್ರಭಾವಕ್ಕೆ ಒಳಗಾಗಿಲ್ಲ. ಇದು ದೇಶಕ್ಕೆ ಧನಾತ್ಮಕ ಅಂಶವಾಗಿದೆ. ಕೇಂದ್ರ ಸರಕಾರ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಜೊತೆಗೂಡಿ ಪರಿಣಾಮಕಾರಿ ಕೆಲಸವನ್ನು ಮಾಡುತ್ತಿದೆ. ಆಮ್ಲಜನಕ ಕೊರತೆ ನೀಗಿಸುವ, ಹೆಚ್ಚಿನ ವೆಂಟಿಲೇಟರ್‌ಗಳು, ಪ್ರತ್ಯೇಕ ವಾರ್ಡ್‌ಗಳಲ್ಲಿ ಹಾಸಿಗೆ, ತೀವ್ರ ನಿಗಾ ಘಟಕ, ಅಗತ್ಯ ಔಷಧಿಗಳು ಹೀಗೆ ಎಲ್ಲಾ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಆದರೆ ದೇಶದಲ್ಲಿ ಈವರೆಗೆ ಕಂಡುಬಂದಿರುವ 85% ಪ್ರಕರಣಗಳು ಸೌಮ್ಯ ಸ್ವಭಾವದ್ದು ಆಗಿರುವುದರಿಂದ ಇಂತಹ ವ್ಯವಸ್ಥೆಗಳ ಅಗತ್ಯವಿಲ್ಲ ಎಂದು ಹರ್ಷವರ್ದನ್ ಹೇಳಿದ್ದಾರೆ.

ತಮಗೆ ಸೋಂಕು ತಗುಲಬಹುದು ಎನ್ನುವ ಅಪಾಯದ ಮಧ್ಯೆಯೂ ಅದನ್ನು ಲೆಕ್ಕಿಸದೆ ಆರೈಕೆ ಮಾಡುವ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿಗಳನ್ನು ದೇಶದ ಜನತೆ ಬೆಂಬಲಿಸಬೇಕು. ಒಂದು ವೇಳೆ ಇವರ ವಿರುದ್ಧ ಹಲ್ಲೆ , ಅನುಚಿತ ವರ್ತನೆ ತೋರಿಸದರೆ ಅಂತವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಷವರ್ಧನ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ