ಆ್ಯಪ್ನಗರ

ಟ್ರುಡೋ 'ದೆಹಲಿ ಚಲೋ' ಹೇಳಿಕೆ ವಿವಾದ: ಕೆನಡಾ ರಾಯಭಾರಿಗೆ ಭಾರತದ ಸಮನ್ಸ್!

ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ವಿರುದ್ಧ ಭಾರತ ಕೆಂಡಾಮಂಡಲವಾಗಿದೆ. ಟ್ರುಡೋ ಹೇಳಿಕೆಗೆ ವಿವರಣೆ ಬಯಸಿ ಬಾರತಕ್ಕೆ ಕೆನಡಾದ ರಾಯಭಾರಿಗೆ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದೆ.

Vijaya Karnataka Web 4 Dec 2020, 3:52 pm
ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ, ಇದೀಗ ಭಾರತದ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
Vijaya Karnataka Web Justin Trudeau
ಸಂಗ್ರಹ ಚಿತ್ರ


ಟ್ರುಡೋ ಹೇಳಿಕೆಗೆ ವಿವರಣೆ ಬಯಸಿ ಬಾರತಕ್ಕೆ ಕೆನಡಾದ ರಾಯಭಾರಿಗೆ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದೆ. ಆಂತರಿಕ ವಿಷಯಗಳ ಕುರಿತು ಹೇಳಿಕೆಗಳನ್ನು ನೀಡುವುದರಿಂದ ಪರಸ್ಪರ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಭಾರತ ಎಚ್ಚರಿಸಿದೆ.

ಟ್ರುಡೋ ಭಾರತದ ಆಂತರಿಕ ವಿಷಯದಲ್ಲಿ ಅನವಶ್ಯಕವಾಗಿ ಮೂಗು ತೂರಿಸಿದ್ದು, ಇದು ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಭಾರತ ಎಚ್ಚರಿಸಿದೆ.

ದೂರದ ಕೆನಡಾದಲ್ಲಿ ಕುಳಿತು ದೆಹಲಿ ಚಲೋ ಬಗ್ಗೆ ಜಸ್ಟೀನ್ ಕಳವಳ: ನಿಮಗೇಕೆ ಚಿಂತೆ ಎಂದ ಭಾರತ!

ಅಲ್ಲದೇ ಟ್ರುಡೋ ಹೇಳಿಕೆಯಿಂದ ಪ್ರಭಾವಿತರಾಗಿ ಕೆನಡಾದಲ್ಲಿರುವ ಭಾರತದ ರಾಯಭಾರ ಕಚೇರಿ ಮುಂದೆ ಸಿಖ್ ಪ್ರತ್ಯೇಕತಾವಾದಿಗಳ ಗುಂಪು ಪ್ರತಿಭಟನೆ ನಡೆಸಿದೆ. ಇದರಿಂದ ನಮ್ಮ ರಾಯಭಾರ ಸಿಬ್ಬಂದಿಗೆ ಭದ್ರತೆಯ ಅಪಾಯ ಎದುರಾಗಿದೆ ಎಂದು ಭಾರತ ತೀವ್ರ ಆಕ್ಷೇಪಣೆ ಸಲ್ಲಿಸಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ರುಡೋ ಹೇಳಿಕೆಗೆ ವಿವರಣೆ ನೀಡುವಂತೆ, ಭಾರತದಲ್ಲಿರುವ ಕೆನಡಾ ರಾಯಭಾರ ಕಚೇರಿಗೆ ಸಮನ್ಸ್ ಕಳುಹಿಸಲಾಗಿದೆ.


ಈ ಕುರಿತು ಮಾತನಾಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ, ಟ್ರುಡೋ ಭಾರತದ ಆಂತರಿಕ ವಿಚಾರದಲ್ಲಿ ಅನವಶ್ಯಕ ಹಸ್ತಕ್ಷೇಪ ಮಾಡಿದ್ದಾರೆ. ಇದರಿಂದ ಕೆನಡಾದಲ್ಲಿರುವ ನಮ್ಮ ರಾಯಭಾರ ಕಚೇರಿ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಶನಿವಾರ ಮತ್ತೊಂದು ಸುತ್ತಿನ ಮಾತುಕತೆ: ಗುರುವಾರದ ಸಭೆ ಆಶಾದಾಯಕ ಎಂದ ರೈತ ನಾಯಕರು!

ಗುರುನಾನಕ್ ಅವರ 551 ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಜಸ್ಟೀನ್ ಟ್ರುಡೋ, ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಕೆನಡಾ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ