ಆ್ಯಪ್ನಗರ

ಪಾಕಿಗೆ ಭಾರತದ ಜಲ ಬಾಂಬ್‌

ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ತಡೆದು ಅದನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ಗೆ ಹರಿಸಲು ದೊಡ್ಡ ಯೋಜನೆ ಹಾಕಿಕೊಂಡಿದ್ದು, ಇದರಲ್ಲಿ ಸ್ವಲ್ಪ ನೀರು ಯಮುನಾ ನದಿಗೂ ಹರಿಯಲಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Vijaya Karnataka 22 Feb 2019, 5:00 am
ಹೊಸದಿಲ್ಲಿ: ಪುಲ್ವಾಮಾ ದಾಳಿಯ ಬಳಿಕ ಉಗ್ರ ಪೋಷಕ ಪಾಕಿಸ್ತಾನವನ್ನು ಸದೆಬಡಿಯಲು ಹಲವು ತಂತ್ರಗಳನ್ನು ಹೆಣೆಯುತ್ತಿರುವ ಭಾರತ ಇದೀಗ 'ಜಲ ಬಾಂಬ್‌' ಪ್ರಯೋಗಕ್ಕೆ ಮುಂದಾಗಿದೆ. ತ್ರಿವಳಿ ನದಿಗಳಾದ ರಾವಿ, ಬಿಯಾಸ್‌, ಸಟ್ಲೇಜ್‌ ನದಿಗಳಿಂದ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿರುವ ನೀರನ್ನು ತಡೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಟ್ವೀಟ್‌ ಮಾಡಿದ್ದು, ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
Vijaya Karnataka Web Nitin GADKARI


ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ತಡೆದು ಅದನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ಗೆ ಹರಿಸಲು ದೊಡ್ಡ ಯೋಜನೆ ಹಾಕಿಕೊಂಡಿದ್ದು, ಇದರಲ್ಲಿ ಸ್ವಲ್ಪ ನೀರು ಯಮುನಾ ನದಿಗೂ ಹರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ, ಸಿಂಧೂ, ಝೀಲಂ ಮತ್ತು ಚೀನಾಬ್‌ ನದಿ ನೀರನ್ನು ಪಾಕಿಸ್ತಾನಕ್ಕೂ, ರಾವಿ, ಬಿಯಾಸ್‌ ಮತ್ತು ಸಟ್ಲೇಜ್‌ ನದಿಗಳ ನೀರನ್ನು ಭಾರತಕ್ಕೂ ಹಂಚಲಾಗಿದೆ. ರಾವಿ-ಬಿಯಾಸ್‌-ಸಟ್ಲೇಜ್‌ ನದಿಗಳಲ್ಲಿ 33 ದಶಲಕ್ಷ ಎಕರೆ ಅಡಿ(ಎಂಎಎಫ್‌) ನೀರು ಲಭ್ಯವಿದ್ದು, ಇದರ 95 ಶೇಕಡಾ ನೀರನ್ನು ಭಾರತ ಮೂರು ಅಣೆಕಟ್ಟುಗಳ ಮೂಲಕ ಬಳಸಿಕೊಳ್ಳುತ್ತಿದೆ. ಸುಮಾರು 1.6 ಎಂಎಎಫ್‌ (5%) ನೀರು ಭಾರತ ಬಳಸದೆ ಪಾಕಿಗೆ ಹರಿಯುತ್ತಿದೆ. ಇದೀಗ ಅದನ್ನೂ ಬಳಸಿಕೊಳ್ಳುವುದು ಕೇಂದ್ರದ ಪ್ಲ್ಯಾನ್‌.

''ರಾವಿ ನದಿಗೆ ಅಡ್ಡಲಾಗಿ ಶಾಪುರ್‌-ಖಾಂಡಿ ಅಣೆಕಟ್ಟು ನಿರ್ಮಾಣ ಈಗಾಗಲೇ ಆರಂಭಿಸಲಾಗಿದೆ. ಈ ಯೋಜನೆ ಮೂಲಕ ನಮ್ಮ ಪಾಲಿನ ನೀರು ಸಂಗ್ರಹವಾಗಲಿದ್ದು, ಅದನ್ನು ಜಮ್ಮು-ಕಾಶ್ಮೀರಕ್ಕೆ ಹರಿಸಲಾಗುವುದು. ಎರಡನೇ ಹಂತದಲ್ಲಿ ರಾವಿ - ಬಿಯಾಸ್‌ ನದಿ ಜೋಡಣೆ ಮೂಲಕ ಅಚ್ಚುಕಟ್ಟು ರಾಜ್ಯಗಳಿಗೆ ನೀರು ಪೂರೈಸಲಾಗುವುದು. ಈ ಎಲ್ಲ ಯೋಜನೆಗಳನ್ನು ರಾಷ್ಟ್ರೀಯ ಯೋಜನೆ ಎಂದೇ ಪರಿಗಣಿಸಲಾಗಿದೆ,'' ಎಂದು ಗಡ್ಕರಿ ಹೇಳಿದ್ದಾರೆ. ಇದಕ್ಕೂ ಮೊದಲು ಸಚಿವರು ಬಿಜೆಪಿ ರಾರ‍ಯಲಿಯೊಂದರಲ್ಲಿ ಈ ತ್ರಿವಳಿ ನದಿಗಳ ನೀರನ್ನು ಯುಮುನೆಗೆ ಹರಿಸುವ ಯೋಜನೆಯೂ ಸಿದ್ಧಗೊಳ್ಳುತ್ತಿದೆ ಎಂದು ಹೇಳಿದ್ದರು.

ಮತ್ತೊಂದು ದಾಳಿಗೆ

ಜೈಷೆ ಉಗ್ರರ ಸಂಚು?


ಶ್ರೀನಗರ: ಜೈಷೆ ಉಗ್ರರು ಪುಲ್ವಾಮಾ ದಾಳಿಯ ಮಾದರಿಯಲ್ಲೇ ಭದ್ರತಾಪಡೆಗಳ ಮೇಲೆ ಮತ್ತೊಂದು ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿದ್ದು, ಜಮ್ಮು-ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಉಗ್ರರ ನಡುವಿನ ಸಂಭಾಷಣೆಯನ್ನು ಇಲಾಖೆ ಭೇದಿಸಿ ಈ ವಿಚಾರ ತಿಳಿದುಕೊಂಡಿದ್ದು, 3 ಅತ್ಮಾಹುತಿ ಉಗ್ರರ ಸಹಿತ 21 ಜೈಷೆ ಉಗ್ರರ ತಂಡ ಡಿಸೆಂಬರ್‌ನಲ್ಲೇ ಕಣಿವೆಗೆ ನುಸುಳಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ