ಆ್ಯಪ್ನಗರ

ಮತ್ತೆ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ: ಈ ಬಾರಿ ಸಿಕ್ಕಿಂ ಗಡಿಯಲ್ಲಿ ಡ್ರ್ಯಾಗನ್ ತಗಾದೆ!

ಸಿಕ್ಕಿಂ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿಯ ನಾಕು ಲಾ ಪ್ರದೇಶದಲ್ಲಿ, ಭಾರತ-ಚೀನಾ ಸೈನಿಕರ ನಡುವೆ ಕಳೆದ ವಾರ ಮುಷ್ಠಿ ಕಾಳಗ ನಡೆದಿದ್ದು, ಉಭಯ ಸೇನೆಗಳ ಯೋಧರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

Vijaya Karnataka Web 25 Jan 2021, 12:32 pm
ಹೊಸದಿಲ್ಲಿ: ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಭೀಕರ ಮುಷ್ಠಿ ಕಾಳಗದ ಕಹಿ ನೆನಪು ಹಸಿರಾಗಿರುವಾಗಲೇ, ಸಿಕ್ಕಿಂ ಗಡಿಯಲ್ಲೂ ಚೀನಿ ಸೈನಿಕರು ಇಂತದ್ದೇ ಸಂಘರ್ಷಕ್ಕೆ ಕಾರಣರಾಗಿರುವುದು ಆತಂಕ ಸೃಷ್ಟಿಸಿದೆ.
Vijaya Karnataka Web India China
ಸಾಂದರ್ಭಿಕ ಚಿತ್ರ


ಸಿಕ್ಕಿಂ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿಯ ನಾಕು ಲಾ ಪ್ರದೇಶದಲ್ಲಿ, ಭಾರತ-ಚೀನಾ ಸೈನಿಕರ ನಡುವೆ ಕಳೆದ ವಾರ ಮುಷ್ಠಿ ಕಾಳಗ ನಡೆದಿದೆ ಎಂಬ ವರದಿಗಳು ಬಂದಿವೆ.

ನಾಕು ಲಾಗಡಿಯಲ್ಲಿ ಭಾರತೀಯ ಸೈನಿಕರು ಗಸ್ತು ತಿರುಗುತ್ತಿದ್ದಾಗ ಎದುರಾದ ಚೀನಿ ಸೈನಿಕರು, ಸಂಘರ್ಷಕ್ಕೆ ಇಂಬು ನೀಡುವ ವರ್ತನೆ ತೋರಿದ್ದಾರೆ. ಅಲ್ಲದೇ ಭಾರತೀಯ ಸೈನಿಕರ ಮೇಲೆರಗಿ ಮುಷ್ಠಿ ಕಾಳಗಗಕ್ಕೆ ಕಾರಣರಾಗಿದ್ದಾರೆ.

ಮರೆಯದಿರಿ ಗಲ್ವಾನ್ ಬಲಿದಾನ: ಹುತಾತ್ಮರನ್ನು ನೆನೆಯಿರಿ ಅನುದಿನ!

ಚೀನಿ ಸೈನಿಕರ ವರ್ತನೆಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು, ಚೀನಿ ಸೈನಿಕರ ಸಂಘರ್ಷವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ನಡೆದ ಉನ್ನತ ಮಿಲಿಟರಿ ಅಧಿಕಾರಿಗಳ ಸಭೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.


ನಾಕು ಲಾ ಗಡಿ ಭಾಗದಲ್ಲಿ ನಡೆದ ಸಂಘರ್ಷದಲ್ಲಿ ಭಾರತ-ಚೀನಾ ಯೋಧರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ಖಚಿತಪಡಿಸಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಎಂದು ಹೇಳಿದೆ.

ಕಳೆದ ಜೂನ್ 15(2020) ರಂದು ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಭೀಕರ ಕಾಳಗದಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಡಾಖ್‌‌ ಗಡಿ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, ಚೀನಾದ 43 ಸೈನಿಕರ ಸಾವು

ಸದ್ಯ ಪೂರ್ವ ಲಡಾಖ್ ಗಡಿ ಘರ್ಷಣೆಗೆ ಸಂಬಂಧಿಸಿದಂತೆ ಭಾರತ-ಚೀನಾ ಸೇನೆಯ ಉನ್ನತ ಮಿಲಿಟರಿ ಅಧಿಕಾರಿಗಳ 9ನೇ ಸುತ್ತಿನ ಮಾತುಕತೆ ಅಂತ್ಯಗೊಂಡಿದ್ದು, ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ವೇಗ ನೀಡಲು ಉಭಯ ಬಣ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ