ಆ್ಯಪ್ನಗರ

ಗಗನ ಸಖಿಯ ಜೀವ ಉಳಿಸಿದ ಭಾರತೀಯ ವೈದ್ಯೆ

ಪ್ರಯಾಣಿಕರ ನಡುವೆ ಇದ್ದ ವೈದ್ಯೆಯೊಬ್ಬರು ತುರ್ತು ಚಿಕಿತ್ಸೆ ನೀಡಿ ಗಗನ ಸಖಿಯ ಜೀವ ಉಳಿಸುವ ಮೂಲಕ ಉಳಿದವರ ಮೆಚ್ಚುಗೆಗೆ ಪಾತ್ರರಾದರು.

ಏಜೆನ್ಸೀಸ್ 8 Mar 2017, 10:36 am
ಹೊಸದಿಲ್ಲಿ: ಭೂಮಿಯ ಹಂಗು ತೊರೆದು ನೂರಾರು ಅಡಿ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಏನೇ ಘಟಿಸಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಒಬ್ಬ ಪ್ರಯಾಣಿಕನ ವಿಷಯದಲ್ಲಿ ಸಂಭವಿಸುವ ಸಣ್ಣ ಏರುಪೇರು ಕೂಡ ಏನೆಲ್ಲ ತಾಪತ್ರಯಕ್ಕೆ ಎಡೆಮಾಡಿಕೊಡಬಲ್ಲದು. ಅದರಲ್ಲೂ ದೀರ್ಘ ಪ್ರಯಾಣದ ಹಾದಿಯಲ್ಲಿ ಪ್ರಯಾಣಿಕರ ಆರೋಗ್ಯದಲ್ಲಿ ಸಮಸ್ಯೆಯಾದರಂತೂ ದೇವರೇ ಗತಿ. ಮೊನ್ನೆ ನ್ಯೂಜಿಲೆಂಡಿನ ಹಾಕ್ಲೆಂಡ್‌ನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಅಂತಹದ್ದೊಂದು ಭೀತಿ ಹುಟ್ಟಿಸಿದ ಪ್ರಕರಣ ನಡೆಯಿತು. ಅದು ಗಗನ ಸಖಿ ಹಠಾತ್ತನೆ ಕುಸಿದು ಬಿದ್ದು ಸೃಷ್ಟಿಯಾದ ಆತಂಕದ ಸನ್ನಿವೇಶ. ಆದರೆ ಪ್ರಯಾಣಿಕರ ನಡುವೆ ಇದ್ದ ವೈದ್ಯೆಯೊಬ್ಬರು ತುರ್ತು ಚಿಕಿತ್ಸೆ ನೀಡಿ ಗಗನ ಸಖಿಯ ಜೀವ ಉಳಿಸುವ ಮೂಲಕ ಉಳಿದವರ ಮೆಚ್ಚುಗೆಗೆ ಪಾತ್ರರಾದರು. ಆ ಮೂಲಕ ಬಾನ ಹಾದಿಯಲ್ಲಿ ವೈದ್ಯಕೀಯ ತುರ್ತು ಸೇವೆಯ ಅಗತ್ಯ ಏನು ಎನ್ನುವುದನ್ನು ಆ ಪ್ರಕರಣ ತೋರಿಸಿಕೊಟ್ಟಿದೆ.
Vijaya Karnataka Web indian doctors quick action helped save the life of an air hostess onboard a malaysian flight
ಗಗನ ಸಖಿಯ ಜೀವ ಉಳಿಸಿದ ಭಾರತೀಯ ವೈದ್ಯೆ


ಕುಸಿದ ಬಿದ್ದ ಗಗನ ಸಖಿ:

ಹಾಕ್ಲೆಂಡಿನಿಂದ ಕೌಲಾಲಂಪುರಕ್ಕೆ 11 ತಾಸುಗಳ ವಿಮಾನ ಪ್ರಯಾಣ. ವಿಮಾನ ನೆಲದಿಂದ ಹಾರಿ 1 ತಾಸಿನ ಅವಧಿಯಷ್ಟೇ ಕಳೆದಿತ್ತು. ಆಗ ವಿಮಾನದೊಳಗೆ ದಿಢೀರನೆ ಗೊಂದಲ ಕಾಣಿಸಿತು. ಏನಾಯಿತೆಂದು ನೋಡುವಷ್ಟರಲ್ಲಿ ಕುಸಿದು ಬಿದ್ದಿದ್ದ ಗಗನ ಸಖಿಯನ್ನು ಪೈಲಟ್‌ ಕ್ಯಾಬಿನ್‌ನತ್ತ ವಿಮಾನದ ಸಿಬ್ಬಂದಿ ಸಾಗಿಸುತ್ತಿದ್ದ ದೃಶ್ಯ ಕಾಣಿಸಿತು. ಅವರಿಗೆ ಏನಾಗಿದೆ ಎನ್ನುವುದರ ಮಾಹಿತಿ ಯಾರಿಗೂ ಇರಲಿಲ್ಲ. ತುರ್ತು ಭೂಸ್ಪರ್ಶ ಮಾಡಲು ಸಮೀಪದಲ್ಲಿ ನಿಲ್ದಾಣಗಳಿರಲಿಲ್ಲ. ಈ ಸಂದಿಗ್ಧ ಸ್ಥಿತಿಯಲ್ಲಿ ಪೈಲಟ್‌, ಪ್ರಯಾಣಿಕರ ಪೈಕಿ ಯಾರಾದರೂ ವೈದ್ಯರಿದ್ದರೆ ನೆರವು ನೀಡಿ ಎಂದು ಮನವಿ ಮಾಡಿದರು.

ಆ ವೇಳೆಗಾಗಲೇ ಡಾ.ಅಂಚಿತಾ ಪಾಂಡೊ ತಮ್ಮ ಸೀಟಿನಿಂದ ಎದ್ದು ಗಗನ ಸಖಿಯ ನೆರವಿಗೆ ಧಾವಿಸಿಯಾಗಿತ್ತು. 'ಗಗನ ಸಖಿಯ ಪ್ರಜ್ಞೆ ಹೊರಟು ಹೋಗಿತ್ತು. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಿ ಅಂಚಿತಾ ಚಿಕಿತ್ಸೆ ಶುರು ಮಾಡಿದರು. ಈ ಹಂತದಲ್ಲಿ ರೋಗಿ ಚಿಕಿತ್ಸೆಗೆ ಸ್ಪಂದಿಸದಿದ್ದರೆ ಗತಿ ಏನು ಎನ್ನುವ ಚಿಂತೆ ಎದುರಾಗಿತ್ತು. ಆ ಸ್ಥಿತಿಯಲ್ಲಿ ಪರ್ಯಾಯ ಚಿಕಿತ್ಸೆಗೆ ಮುಂದೆ ಆಸ್ಪ್ರೇಲಿಯಾ ತಲುಪಬೇಕಿತ್ತು. ಅಲ್ಲಿಗೆ ಎರಡು ತಾಸಿನ ದಾರಿ ಉಳಿದಿತ್ತು. ಧೈರ್ಯ ವಹಿಸಿ ಇರುವ ಸವಲತ್ತಿನಲ್ಲಿಯೇ ಚಿಕಿತ್ಸೆ ನೀಡಲಾಯಿತು. ಅದೃಷ್ಟವಶಾತ್‌ ಗಗನ ಸಖಿ ಚಿಕಿತ್ಸೆಗೆ ಸ್ಪಂದಿಸಿದರು. ಕೆಲವು ನಿಮಿಷಗಳ ಬಳಿಕ ನಿಧಾನ ಕಣ್ಣು ತೆರೆದರು. ಇದರು ನೋಡುತ್ತಿದ್ದಂತೆಯೇ ಸಹ ಪ್ರಯಾಣಿಕರ ಮಧ್ಯದಿಂದ ಚಪ್ಪಾಳೆಯ ಸುರಿಮಳೆಯಾಯಿತು. ಧನ್ಯತೆಯ ಭಾವನೆ ನಮ್ಮನ್ನು ಆವರಿಸಿತು,’ ಎಂದು ಪ್ರಯಾಣದ ವೇಳೆ ಜತೆಗಿದ್ದ ಡಾ.ಅಂಚಿತಾ ಅವರ ಪತಿ ಸೌರಭ್‌ ಕುಮಾರ್‌ ಸ್ಮರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ