ಆ್ಯಪ್ನಗರ

ಚಂದ್ರಯಾನ-2: ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದ 'ಬಾಹುಬಲಿ'

ಅತ್ಯಂತ ನಿಖರವಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಖಚಿತ ಪಡಿಸಿದ್ದಾರೆ.

TOI.in 20 Aug 2019, 12:59 pm
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ 2ನೇ ಚಂದ್ರ ಪರ್ಯಟಣೆ 'ಚಂದ್ರಯಾನ-2' ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ (ಆಗಸ್ಟ್‌ 20) ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್‌ 'ಬಾಹುಬಲಿ' ಚಂದ್ರನ ಕಕ್ಷೆ ಪ್ರವೇಶಿಸಿದ ಖಚಿತ ಮಾಹಿತಿ ನೀಡಿದರು.
Vijaya Karnataka Web Chandrayaan 2


ಚಂದ್ರನ ಅಂಗಳದ ಅಧ್ಯಯನಕ್ಕೆ ಪ್ರಯಾಣ ಬೆಳೆಸಿರುವ ಇಸ್ರೋದ ಚಂದ್ರಯಾನ-2 ನೌಕೆ ಇಂದು ಚಂದ್ರನ ಕಕ್ಷೆಗೆ ಸೇರಿದೆ. ಅತ್ಯಂತ ನಿಖರವಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗಿದೆ. ಯೋಜನೆಯ ಮಹತ್ವದ ಘಟ್ಟ ಯಶಸ್ವಿಯಾಗಿದೆ ಎಂದು ಕೆ.ಶಿವನ್ ತಿಳಿಸಿದರು.


'ಚಂದ್ರಯಾನ-2'ಗೆ ಚಂದ್ರನ ಮೇಲೆ ಇಳಿಯಲು ಕೆಲವೇ ದಿನಗಳಷ್ಟೇ ಬಾಕಿಯಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾಗಳ ಸಾಲಿಗೆ ಭಾರತ ಸೇರ್ಪಡೆಗೊಳ್ಳಲಿದೆ. ಇಸ್ರೋ ಬಾಹುಬಲಿ ಬಗ್ಗೆ ನಿಮಗೆಷ್ಟು ಗೊತ್ತು? ಚಂದ್ರಯಾನ 2 ಬಗ್ಗೆ ತಿಳಿಯಲೇ ಬೇಕಾದ ಸಂಗತಿಗಳಿವು.


ಸೆಪ್ಟೆಂಬರ್ 6 ರಂದು ಚಂದ್ರನಿಗೆ ಬಹಳ ಸಮೀಪ ಅಂದರೆ 30 ಕಿ.ಮೀ, ದೂರ ತಲುಪಲಿದೆ. ಚಂದ್ರನನ್ನು ತಲುಪುವ ಈ 30 ಕಿ.ಮೀ.ನ ಕೊನೆಯ ಹಂತ ಇಸ್ರೋ ತಂಡದವರಿಗೆ ಅತ್ಯಂತ ಕ್ಲಿಷ್ಟಕರ ಕ್ಷಣಗಳಾಗಿದ್ದು, ಈ ರೀತಿಯ ಸಂಕೀರ್ಣ ಕಾರ್ಯಾಚರಣೆಯನ್ನು ಇಸ್ರೋ ತಂಡ ಮೊದಲ ಬಾರಿಗೆ ಮಾಡಲಿದೆ. ಕೊನೆಯ 30 ಕಿ. ಮೀ ಅನ್ನು 15 ನಿಮಿಷದಲ್ಲಿ ತಲುಪಬೇಕಿದ್ದು, ಈ ಹಿನ್ನೆಲೆ ಉಪಗ್ರಹದ ವೇಗವನ್ನು ಮತ್ತಷ್ಟು ತಗ್ಗಿಸಬೇಕಿದೆ. ಸೆಪ್ಟೆಂಬರ್ 7 ರ ನಸುಕಿನಲ್ಲಿ ಈ ಕಾರ್ಯ ನಡೆಯಬೇಕಿದ್ದು, ಈ ಮಹತ್ವದ ಕಾರ್ಯ ಯಶಸ್ವಿಯಾದಲ್ಲಿ ಭಾರತ ಚಂದ್ರನನ್ನು ತಲುಪಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.

13 ದೇಸಿ ಉಪಕರಣಗಳನ್ನು ಹೊತ್ತೊಯ್ದಿರುವ ಚಂದ್ರಯಾನ - 2, ಸ್ಥಳಾಕೃತಿ, ಭೂಕಂಪಶಾಸ್ತ್ರ, ಖನಿಜ ಗುರುತಿಸುವಿಕೆ ಮತ್ತು ವಿತರಣೆ, ಮೇಲ್ಮೈ ರಾಸಾಯನಿಕ ಸಂಯೋಜನೆ, ಮೇಲಿನ ಮಣ್ಣಿನ ಉಷ್ಣ-ಭೌತಿಕ ಗುಣಲಕ್ಷಣಗಳು ಮತ್ತು ನಿಧಾನವಾದ ಚಂದ್ರನ ವಾತಾವರಣದ ಸಂಯೋಜನೆ ಮುಂತಾದ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲಿದೆ. ಚಂದ್ರಯಾನ 2: ಕೋಟಿ ಕನಸುಗಳೊಂದಿಗೆ ನಭಕ್ಕೆ ಜಿಗಿದ ಬಾಹುಬಲಿ

44 ಮೀಟರ್‌ ಎತ್ತರದ ಜಿಎಸ್‌ಎಲ್‌ವಿ ಮಾರ್ಕ್‌-3 ರಾಕೆಟ್‌, ದೈತ್ಯ ಗಾತ್ರದಿಂದಾಗಿ ಬಾಹುಬಲಿ ಎಂದೇ ಹೆಸರಾಗಿದೆ. ಒಟ್ಟು 13 ಪೆಲೋಡ್‌ಗಳನ್ನು ರಾಕೆಟ್‍‌ ಹೊತ್ತೊಯ್ದಿದೆ. ಒಟ್ಟು 48 ದಿನಗಳ ನಂತರ ಬಾಹುಬಲಿ ಚಂದ್ರನ ಮೇಲೆ ಲ್ಯಾಂಡ್‌ ಆಗಲಿದೆ. ರೋವರ್‌, ಲ್ಯಾಂಡರ್‌ ಸೇರಿದಂತೆ 3,850 ಕೆಜಿ ತೂಕದ ರಾಕೆಟ್‌ ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವ ಮೂಲಕ ವಿಶ್ವದಲ್ಲೇ ಗುರುತರ ಸಾಧನೆಯನ್ನು ಇಸ್ರೋ ಮಾಡಲಿದೆ.

ಇದುವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ಯಾರು ಪ್ರವೇಶಿಸಿಲ್ಲ.ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಡಾ. ವಿಕ್ರಮ್‌ ಸಾರಾಭಾಯಿ ಅವರ ಹೆಸರನ್ನು ನಾಮಕರಣ ಮಾಡಲಾದ 'ವಿಕ್ರಮ್‌ ಲ್ಯಾಂಡರ್‌', 27 ಕೆ.ಜಿ ತೂಕದ 'ಪ್ರಜ್ಞಾನ್‌' ಹೆಸರಿನ ರೋಬಾಟಿಕ್‌ ರೋವರ್‌ (6 ಚಕ್ರದ ವ್ಯೋಮನೌಕೆ) ಮತ್ತು ಇವೆರಡನ್ನೂ ಒಳಗೊಂಡ 'ಆರ್ಬಿಟರ್‌' ಅನ್ನು ರಾಕೆಟ್‌ ನಭಕ್ಕೆ ಹೊತ್ತೊಯ್ದಿದೆ. 'ಲ್ಯಾಂಡರ್‌' ಸಾಧನವು ವ್ಯೋಮನೌಕೆಯನ್ನು ಚಂದ್ರನ ಮೇಲೆ ಇಳಿಸಲು ನೆರವಾಗಲಿದೆ. ಚಂದ್ರನ ಮೇಲ್ಮೈ ಮೇಲೆ ಅಡ್ಡಾಡಿ, ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸುವ ಕೆಲಸವನ್ನು ರೋವರ್‌ ಮಾಡಲಿದೆ. ಸೌರಶಕ್ತಿಯನ್ನು ಬಳಸಿ ರೋವರ್‌ ದಿನಕ್ಕೆ ಅರ್ಧ ಕಿ.ಮೀ. ಚಲಿಸಬಲ್ಲದು.

‘ಚಂದ್ರಯಾನ-2’ ಲ್ಯಾಂಡಿಂಗ್‌ ಲೈವ್‌ ಶೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ